ಮುಂಬೈ ಸರಣಿ ಬಾಂಬ್ ಸ್ಫೋಟ : ಮೂವರಿಗೆ ಗಲ್ಲು ಶಿಕ್ಷೆ
ಮುಂಬೈ, ಜುಲೈ 18 : 1993ರ ಮುಂಬೈ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಮೂವರು ಪ್ರಮುಖ ಆರೋಪಿಗಳಿಗೆ ಟಾಡಾ ವಿಶೇಷ ನ್ಯಾಯಾಲಯ ಬುಧವಾರ ಗಲ್ಲು ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಇದೇ ಪ್ರಥಮ ಬಾರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ. ಉಳಿದ 21 ಆರೋಪಿಗಳಲ್ಲಿ 14 ಜನರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಮುಂಬೈನ ಕಥಾ ಬಜಾರ್ನಲ್ಲಿ ಸ್ಫೋಟಕಗಳನ್ನು ತುಂಬಿದ್ದ ಸ್ಕೂಟರನ್ನು ಇರಿಸಿದ್ದ ಪರ್ವೇಜ್ ಶೇಖ್, ಸೆಂಟಾರ್ ಹೊಟೇಲ್ನಲ್ಲಿ ಆರ್ಡಿಎಕ್ಸ್ಗಳನ್ನು ಇಟ್ಟಿದ್ದ ಮುಷ್ತಾಕ್ ಅಹ್ಮದ್ ದುರಾನಿ ಮತ್ತು ಇನ್ನೊಬ್ಬ ಆರೋಪಿ ಅಬ್ದುಲ್ ಗನಿ ತುರ್ಕ್ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಮಾರ್ಚ್ 12ರಂದು ಸಂಭವಿದ ಸರಣಿ ಸ್ಫೋಟಗಳಲ್ಲಿ 257 ಜನ ಬಲಿಯಾಗಿ 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಮೊಕದ್ದಮೆಯ ಪ್ರಮುಖ ಆರೋಪಿ ಟೈಗರ್ ಮೆಮನ್ನ ಬಂಟ ಶೇಖ್ ಮತ್ತಿತರ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸಿದ್ದ ಮತ್ತು ಭಾರತಕ್ಕೆ ಬೇರೆಡೆಯಿಂದ ಸ್ಫೋಟಕ ಮತ್ತು ಆಯುಧಗಳನ್ನು ತರುವಲ್ಲಿ ಯಶಸ್ವಿಯಾಗಿದ್ದ.
ಆದರೆ, ರಾಯಗಢ್ ಜಿಲ್ಲೆಯ ಸಂಧೇರಿ ಮತ್ತು ಭೋರ್ಘಾಟ್ ಗ್ರಾಮಗಳಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿದ ಆರೋಪ, ಮತ್ತು ಮುಂಬೈನ ಜೋಗೇಶ್ವರಿಯಿಂದ ಮುಸಾಫಿರ್ಖಾನಾದವರೆಗೆ ಶಸ್ತ್ರಾಸ್ತ್ರ ಸಾಗಿಸಿದ ಆರೋಪಗಳಿಂದ ಆತನಿಗೆ ಖುಲಾಸೆಯಾಗಿದೆ.
ಸಂಜಯ್ ದತ್ನ ಹಣೆಬರಹ : ಮುಂಬೈ ಸರಣಿ ಸ್ಫೋಟದಲ್ಲಿ ನೇರವಾಗಿ ಭಾಗಿಯಾಗಿರದಿದ್ದರೂ ಟೈಗರ್ ಮೆಮನ್ಗೆ ಸೇರಿದ್ದವೆನ್ನಲಾದ ಆಯುಧಗಳನ್ನು ತನ್ನ ಮನೆಯಲ್ಲಿರಿಸಿಕೊಂಡ ಆರೋಪ ಎದುರಿಸುತ್ತಿರುವ ನಟ ಸಂಜಯ್ ದತ್ ಹಣೆಬರಹವೂ ಇಂದೇ ನಿರ್ಧಾರವಾಗಲಿದೆ.
(ಏಜೆನ್ಸಿ)












Click it and Unblock the Notifications