ನವದೆಹಲಿಯಲ್ಲಿ ಜು.21,22ರಂದು ಜಾನಪದ ಕಲರವ!

ಬೆಂಗಳೂರು, ಜುಲೈ 17 : ನವದೆಹಲಿಯಲ್ಲಿ ಸುವರ್ಣ ಕರ್ನಾಟಕ ಜಾನಪದ ಉತ್ಸವ - 2007ನ್ನು ಜುಲೈ 21ರಂದು ಸಂಜೆ 4 ಗಂಟೆಗೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ಹೆಚ್. ಎಸ್. ಮಹದೇವ ಪ್ರಸಾದ್ ಉದ್ಫಾಟಿಸಲಿದ್ದಾರೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನವದೆಹಲಿಯ ಕರ್ನಾಟಕ ಸಂಘ ಜಂಟಿಯಾಗಿ ಜುಲೈ 21 ಹಾಗೂ 22ರಂದು, ಈ ಉತ್ಸವವನ್ನು ಆಯೋಜಿಸಿವೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕೆರೆಮನೆ ಶಂಭುಹೆಗಡೆ ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ, ಲೋಕಸಭಾ ಸದಸ್ಯ ಡಿ. ವಿ. ಸದಾನಂದ ಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನವದೆಹಲಿಯ ಕರ್ನಾಟಕ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಜಾನಪದ ವೈವಿಧ್ಯ :

ಅಂದು ಬೆಂಗಳೂರಿನ ಹೆಬ್ಬಣಿ ಮಾದಯ್ಯ ಮತ್ತು ತಂಡದವರಿಂದ ಕಂಸಾಳೆ, ಶ್ರೀನಾಪಾಣ ಮತ್ತು ತಂಡ ಉಡುಪಿ ಜಿಲ್ಲೆ ಇವರಿಂದ ಪಾಣಾರಾಟ, ಹಾಸನ ಜಿಲ್ಲೆಯ ವೆಂಕಟರಾಮು ಮತ್ತು ತಂಡದವರಿಂದ ಚಿಟ್‌ಮೇಳ, ಕಾರವಾರ ಜಿಲ್ಲೆಯ ಬಡವಾ ಗಣಪುಗೌಡ ಮತ್ತು ತಂಡದವರಿಂದ ಹಾಲಕ್ಕಿ, ಸುಗ್ಗಿ ಕುಣಿತ, ತುಮಕೂರು ಜಿಲ್ಲೆಯ ಲಕ್ಕಣ್ಣ ಮತ್ತು ತಂಡದವರಿಂದ ಕೋಲಾಟ ಹಾಗೂ ಶಿವಮೊಗ್ಗ ಜಿಲ್ಲೆಯ ಕೆ.ಜೆ. ರಾಮರಾವ್ ಮತ್ತು ತಂಡದವರಿಂದ ಯಕ್ಷಗಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಚಾರ ಗೋಷ್ಠಿ :

ಜುಲೈ 22 ರಂದು ಬೆಳಿಗ್ಗೆ 11 ಗಂಟೆಗೆ ಕೆರೆಮನೆ ಶಂಭು ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಜಾಗತೀಕರಣ ಮತ್ತು ಜಾನಪದ ಎಂಬ ವಿಚಾರಗೋಷ್ಠಿ ನಡೆಯಲಿದೆ.

ನವದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಚ್. ಎಸ್. ಶಿವಪ್ರಕಾಶ್ ಅವರು ವಿಷಯ ಮಂಡನೆ ಮಾಡಲಿದ್ದಾರೆ. ಪ್ರಾಧ್ಯಾಪಕ ಡಾ. ಟಿ.ಎಸ್. ಸತ್ಯನಾಥ್ ಅವರು ಪ್ರತಿಕ್ರಿಯೆ ನೀಡಲಿರುವ ಈ ಸಂವಾದ ಕಾರ್ಯಕ್ರಮದಲ್ಲಿ ಡಾ ಹಂಪನಹಳ್ಳಿ ತಿಮ್ಮೇಗೌಡ, ಡಾ. ಚಿಕ್ಕಣ್ಣ ಯಣ್ಣೆಕಟ್ಟೆ, ಗವೀಶ ಹಿರೇಮಠ, ದೆಹಲಿಯ ಸ್ಥಳೀಯ ವಿದ್ವಾಂಸರು ಮತ್ತು ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಂ. ಮಹೇಶ್ ಮತ್ತು ತಂಡದವರಿಂದ ಡೊಳ್ಳು ಕುಣಿತ, ಬಾಗಲಕೋಟೆ ಜಿಲ್ಲೆಯ ಇಬ್ರಾಹಿಂ ಸಂತಾರ ಮತ್ತು ತಂಡದವರಿಂದ ಭಾವೈಕ್ಯ ಜಾನಪದ ಸಂಗೀತ, ಕೊಪ್ಪಳ ಜಿಲ್ಲೆಯ ರಾಜುಗೌಡ ಪಾಟೀಲ ಮತ್ತು ತಂಡದವರಿಂದ ಪುರವಂತಿಕೆ, ಕಲಬುರ್ಗಿ ಜಿಲ್ಲೆಯ ಶ್ರೀಮತಿ ಚತುರಬಾಯಿ ಮತ್ತು ತಂಡದವರಿಂದ ಬೀಸುವ ಪದ,

ಗದಗ್ ಜಿಲ್ಲೆಯ ವಿರೂಪಾಕ್ಷಪ್ಪ ಕ್ಷತ್ರಿ ಮತ್ತು ತಂಡದವರಿಂದ ತೊಗಲು ಗೊಂಬೆಯಾಟ, ಕೊಪ್ಪಳ ಜಿಲ್ಲೆಯ ಮಾರಪ್ಪದಾಸರ ಮತ್ತು ತಂಡದವರಿಂದ ತತ್ತ್ವಪದ ಹಾಗೂ ಬೆಳಗಾವಿ ಜಿಲ್ಲೆಯ ಶಿವಲಿಂಗಪ್ಪಾ ಬಸಪ್ಪಾ ಕರುವಿನಕೊಪ್ಪಾ ಅವರಿಂದ ರಾಧಾನಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಮಾರೋಪ :

ಸಂಜೆ 6 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಐ.ಎಂ. ವಿಠಲಮೂರ್ತಿ ಸಮಾರೋಪ ಭಾಷಣ ಮಾಡಲಿರುವರು.

ಏಷಿಯನ್ ನ್ಯೂಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಉಪಾಧ್ಯಕ್ಷ ಐ. ರಾಮಮೋಹನ್ ರಾವ್ ಅವರು ಅಧ್ಯಕ್ಷತೆ ವಹಿಸುವರು. ಯೋಜನಾ ಖಾತೆಯ ರಾಜ್ಯ ಸಚಿವರ ವಿಶೇಷಾಧಿಕಾರಿ ಬೈಕೆರೆ ನಾಗೇಶ್ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.

ಸ್ಥಳ : ದೆಹಲಿ ಕರ್ನಾಟಕ ಸಂಘ ಆವರಣ, ರಾವ್ ತುಲಾರಾಮ್ ಮಾರ್ಗ, ಸೆಕ್ಟರ್ - 12, ಆರ್. ಕೆ. ಪುರಂ. ನವದೆಹಲಿ.

(ದಟ್ಸ್ ಕನ್ನಡ ವಾರ್ತೆ )

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+