ಹೊಸ ತಿರುವಿನಲ್ಲಿ ಪೂಜಾಳ ಅರೆಬೆತ್ತಲೆ ನಡಿಗೆ
ನವದೆಹಲಿ, ಜುಲೈ 13 : ಗಂಡನ ಮನೆಯವರಿಂದ ಕಿರುಕುಳವಾಗುತ್ತಿರುವುದನ್ನು ಅರೆಬೆತ್ತಲಾಗಿ ರಾಜ್ಕೋಟ್ದಲ್ಲಿ ನಡೆಯುವ ಮೂಲಕ ಪ್ರತಿಭಟಿಸಿದ್ದ ಪೂಜಾ ಚೌಹಾಣ್ಳ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ವರದಕ್ಷಿಣೆ ಕಿರುಕುಳದ ಬದಲಾಗಿ 22ರ ಹರೆಯದ ಪೂಜಾ ಚೌಹಾಣ್ ಅನೇಕರಿಂದ ದುರ್ಬಳಕೆಗೆ ಒಳಗಾಗಿದ್ದಳೆಂದು ಪ್ರಕರಣವನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಮಹಿಳಾ ಆಯೋಗ ಹೊಸ ಅಂಶವನ್ನು ಬಯಲಿಗೆ ಹಾಕಿದೆ.
ರಸ್ತೆ ಬೀದಿಗುಂಟ ತನ್ನ ಒಳ ಉಡುಪಿನಲ್ಲಿ ಓಡಾಡಿ ದಾರಿಹೋಕರಿಗೂ, ಪೊಲೀಸರಿಗೂ ಮುಜುಗರವಾಗುವಂತೆ ಮಾಡಿದ್ದ ಪೂಜಾ ಗಂಡ, ಅತ್ತೆ ಮೇಲೆ ವರದಕ್ಷಿಣೆ ಗೂಬೆ ಕೂರಿಸಿದ್ದಳು. ನ್ಯಾಯ ದೊರಕದಿದ್ದರೆ ಪೂರ್ಣ ಬೆತ್ತಲಾಗಿ ಪ್ರತಿಭಟನೆ ಸಲ್ಲಿಸುವುದಾಗಿ ಬಾಂಬ್ ಸಿಡಿಸಿದ್ದಳು.
ಪೂಜಾ ಅನೇಕ ವ್ಯಕ್ತಿಗಳಿಂದ ಲೈಂಗಿಕವಾಗಿ ಹಿಂಸೆಗೊಳಗಾಗಿದ್ದಾಳೆ. ಅತ್ಯಂತ ದೀನ ಸ್ಥಿತಿಯಲ್ಲಿರುವ ಯುವತಿಯರನ್ನು ದುರ್ಬಳಕೆ ಮಾಡುವ ಒಂದು ತಂಡವೇ ಇವಳನ್ನು ಬಳಸಿಕೊಂಡಿದೆ. ಒಂದಿಬ್ಬರ ಹೆಸರನ್ನು ಕೂಡ ಪೂಜಾ ಹೇಳಿದ್ದಾಳೆ. ಅದನ್ನು ಪೊಲೀಸ್ ಆಯುಕ್ತರಿಗೆ ಕೊಟ್ಟಿದ್ದೇವೆ ಎಂದು ಮಹಿಳಾ ಆಯೋಗ ಹೇಳಿಕೆ ನೀಡಿದೆ.
ನನ್ನ ಅತ್ತೆ ಮತ್ತು ಗಂಡನ ಬಗ್ಗೆ ಅಸಹ್ಯ ಹುಟ್ಟುತ್ತಿದೆ. ನಾನೀಗಲೇ ಸತ್ತರೂ ಚಿಂತೆಯಿಲ್ಲ ಎಂದು ಪೂಜಾ ಆಯೋಗದ ಮುಂದೆ ನೀಡಿರುವ ಹೇಳಿಕೆ ಮತ್ತೆ ಗಂಡ ಮತ್ತು ಅತ್ತೆಯ ಮೇಲೆ ಸಂಶಯದ ಕತ್ತಿ ತೂಗುವಂತೆ ಮಾಡಿದೆ. ಪೂಜಾ ಬಾಲ್ಯದಲ್ಲಿಯೂ ಲೈಂಗಿಕ ತೃಷೆಗೆ ಬಲಿಯಾಗಿರುವ ಅಂಶ ಬೆಳಕಿಗೆ ಬಂದಿದೆ.
ಪೂಜಾಳ ಗಂಡ ಪ್ರತಾಪ್, ಅತ್ತೆ ಹಂಸ ಮತ್ತು ಮತ್ತಿಬ್ಬರು ನೆರೆಹೊರೆಯವರು ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ.
ಪೂಜಾ ತನ್ನ ಎರಡೂವರೆ ವರ್ಷದ ಮಗಳೊಂದಿಗೆ ಪಾಲಕರೊಂದಿಗೆ ಈಗ ನೆಲೆಸಿದ್ದಾಳೆ. ಪೂಜಾಗೆ ಸಂಪೂರ್ಣ ರಕ್ಷಣೆ ನೀಡಬೇಕು ಮತ್ತು ಅವಳನ್ನು ಮನೆ ತೆರವು ಮಾಡಿಸಬಾರದೆಂದು ನ್ಯಾಯಾಲಯ ತಾಕೀತು ಮಾಡಿದೆ.
(ಏಜೆನ್ಸಿ)