ಎ.ಪಿ.ಜೆ.ಅಬ್ದುಲ್ ಕಲಾಂ ಗೆಲುವು ಸುಲಭವೇನಲ್ಲ!
ನವದೆಹಲಿ : ದೇಶದ ಎಲ್ಲರ ಗಮನ ಸೆಳೆದಿರುವ ರಾಷ್ಟ್ರಪತಿ ಚುನಾವಣೆ ಗೊಂದಲದ ಗೂಡಾಗಿದೆ.
ಎರಡನೇ ಅವಧಿಗಾಗಿ ಅಬ್ದುಲ್ ಕಲಾಂರನ್ನು ಸುತಾರಾಂ ಬೆಂಬಲಿಸುವುದಿಲ್ಲ, ಪ್ರತಿಭಾ ಪಾಟೀಲ್ರನ್ನು ಕಣಕ್ಕಿಳಿಸೇ ಇಳಿಸುವುದಾಗಿ ಯುಪಿಎ ಸರ್ಕಾರ ಹೇಳಿರುವುದರಿಂದ ಕಲಾಂ ಯಾವ ನಿಲುವು ತಾಳುವರೆಂದು ಖಾತ್ರಿಯಿಲ್ಲದ ಸಂದರ್ಭ ಒದಗಿದೆ.
ಗೆಲ್ಲುವ ಭರವಸೆ ನೀಡಿದರೆ ಮಾತ್ರ ಸ್ಪರ್ಧಿಸುವುದಾಗಿ ಕಲಾಂ ಹೇಳಿದ್ದು ಅವರಿಗೂ ಅವರನ್ನು ಬೆಂಬಲಿಸಿದ ತೃತೀಯ ರಂಗಕ್ಕೂ ಹಾಗು ಕಲಾಂ ಇದ್ದರೆ ಶೇಖಾವತ್ರನ್ನು ಹಿಂತೆಗೆಯುವುದಾಗಿ ಹೇಳಿದ್ದ ಎನ್ಡಿಎಗೂ ಸಾಕಷ್ಟು ಮುಜುಗರವಾಗಿದೆ.
ಸೋನಿಯಾ ಗಾಂಧಿ ಅಭ್ಯರ್ಥಿ ಪ್ರತಿಭಾ ಪಾಟೀಲ್ ರಾಜಸ್ತಾನ ರಜ್ಯಪಾಲ ಹುದ್ದೆಗೆ ಈಗಾಗಲೆ ರಾಜೀನಾಮೆ ಸಲ್ಲಿಸಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಇದೇ 23ರಂದು ನಾಮಪತ್ರವನ್ನು ಕೂಡ ಸಲ್ಲಿಸಲಿದ್ದಾರೆ.
ಬೆಂಕಿಗೆ ತುಪ್ಪ ಹುಯ್ದಂತೆ ಎನ್ಡಿಎ ಅಂಗಪಕ್ಷವಾದ ಶಿವಸೇನಾ ಕೂಡ ಕಲಾಂ ಅಧ್ಯಕ್ಷರಾಗಿದ್ದು ಇನ್ನು ಸಾಕು ಎಂದು ರಾಗ ತೆಗೆದಿದ್ದು ಕಲಾಂ ಕಾಲು ಹಿಂದೆಗೆಯದೇ ಬೇರೆ ದಾರಿಯೇ ಇಲ್ಲ ಎನ್ನುವ ಸನ್ನಿವೇಶ ಸೃಷ್ಟಿಯಾಗಿದೆ.
ಮತ್ತೊಂದು ಅವಧಿಗೆ ಅಬ್ದುಲ್ ಕಲಾಂರೇ ರಾಷ್ಟ್ರಪತಿಯಾಗಬೇಕೆಂದು ರಾಷ್ಟ್ರದ ಜನತೆ ಇಷ್ಟಪಟ್ಟಿದ್ದರೂ ರಾಜಕೀಯದಾಟವೇ ಬೇರೆ.
(ಏಜನ್ಸೀಸ್ )