ತೇಜಸ್ವಿಯವರ ಸಮಗ್ರ ಕೃತಿ ಪ್ರಕಟಣೆಗೆ ಸರ್ಕಾರ ನಿರ್ಧಾರ
ಬೆಂಗಳೂರು : ಗುರುವಾರ(ಏಪ್ರಿಲ್.05)ದಂದು ಅಗಲಿದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರಿಗೆ ವಿಧಾನ ಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ತೀವ್ರ ಸಂತಾಪ ವ್ಯಕ್ತವಾಯಿತು.
ವಿಧಾನ ಪರಿಷತ್ತಿನಲ್ಲಿ ಮಂಡಿಸಲಾದ ಸಂತಾಪ ಸೂಚಕ ಸಂದೇಶ ವನ್ನು ನೂತನ ಸಭಾಪತಿ ಬಿ.ಕೆ. ಚಂದ್ರಶೇಖರ್ ಓದಿದರು. ನಂತರ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಎಚ್. ಎಸ್ .ಮಹದೇವ ಪ್ರಸಾದ್ ತೇಜಸ್ವಿ ಅವರ ಎಲ್ಲ ಕೃತಿಗಳ ಹಕ್ಕುಗಳನ್ನು ಅವರ ಮನೆಯವರಿಂದ ಪಡೆದು ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಅವರ ಕೃತಿಗಳು ಲಭ್ಯವಾಗುವ ರೀತಿಯಲ್ಲಿ ಸರ್ಕಾರದಿಂದ ಪ್ರಕಟಿಸಲಾಗುವುದು ಎಂದರು.
ಒಂದು ನಿಮಿಷದ ಮೌನಾಚರಣೆಯ ನಂತರ, ಮೃತರ ಗೌರವಾರ್ಥ ಸದನವನ್ನು ಮುಂದೂಡಲಾಯಿತು. ವಿಧಾನಸಭೆಯಲ್ಲಿ ಕೂಡ ವಿಧಾನಸಭಾಧ್ಯಕ್ಷಕೃಷ್ಣ ಅವರು ಪೂರ್ಣ ಚಂದ್ರ ತೇಜಸ್ವಿ ಅವರ ನಿಧನಕ್ಕೆ ಸಂತಾಪ ಸೂಚಕ ಸಂದೇಶ ಓದಿದರು. ನಂತರ ಮೃತರ ಗೌರವಾರ್ಥ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
(ಏಜನ್ಸೀಸ್)












Click it and Unblock the Notifications