‘ಕುಮಾರ’ ಸರ್ಕಾರಕ್ಕೆ ಆದಿಚುಂಚನಗಿರಿ ಶ್ರೀಗಳ ಸವಾಲು
ಬೆಂಗಳೂರು : ಅರಣ್ಯ ಒತ್ತುವರಿಗೆ ಸಂಬಂಧಿಸಿದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧದ ಪ್ರಕರಣ, ರಾಜಕೀಯ ರೂಪ ಪಡೆದಿದೆ.
ಈ ಮಧ್ಯೆ ನಾವು ಯಾವುದೇ ಒತ್ತುವರಿ ಮಾಡಿಕೊಂಡಿಲ್ಲ. ಅಕ್ರಮ ಕಾರ್ಯವೆಸಗುವ ಪರಿಪಾಠ ನಮ್ಮದಲ್ಲ. ನಮ್ಮ ವಿರುದ್ಧದ ಆರೋಪವನ್ನು ಸರ್ಕಾರ ಸಾಬೀತು ಪಡಿಸಬೇಕೆಂದು ಆದಿಚುಂಚನಗಿರಿ ಶ್ರೀಗಳು, ಸವಾಲು ಹಾಕಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಮಠಕ್ಕೆ ಎಲ್ಲರೂ ಬರುತ್ತಾರೆ. ನಾವು ಯಾರನ್ನೂ ಬೆಂಬಲಿಸುವುದಿಲ್ಲ. ಸರ್ಕಾರ ನೀಡಿದ ಅಧಿಕೃತ ಜಮೀನನ್ನು ಮಾತ್ರ ಬಳಸಿಕೊಂಡಿದ್ದೇವೆ. ಈ ಪ್ರಕರಣವನ್ನು ಸತ್ಯಾನ್ವೇಷಣೆಯೆಂದು ಪರಿಗಣಿಸಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಪಾದದ ಬುಡದಲ್ಲಿ ಕುಮಾರಸ್ವಾಮಿ : ವಿವಾದಗಳ ಬೆನ್ನಲ್ಲಿಯೇ ಶ್ರೀಗಳನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಅರಣ್ಯ ಸಚಿವ ಸಿ.ಚನ್ನಿಗಪ್ಪ ಮತ್ತು ಆರೋಗ್ಯ ಸಚಿವ ಅಶೋಕ್ ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಇದೊಂದು ಸೌಜನ್ಯದ ಭೇಟಿ. ಅರಣ್ಯ ಒತ್ತುವರಿ ಪ್ರಕರಣದ ಬಗ್ಗೆ ಶ್ರೀಗಳೊಂದಿಗೆ ನಾವು ಚರ್ಚಿಸಿಲ್ಲ. ವಾಸ್ತವಾಂಶವೆಂದರೆ, ಶ್ರೀಗಳ ವಿರುದ್ಧ ಯಾವುದೇ ಮೊಕದ್ದಮೆಯನ್ನು ನಮ್ಮ ಸರ್ಕಾರ ದಾಖಲಿಸಿಲ್ಲ. ಕೆಲವರು ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದಿದ್ದಾರೆ.
ಡಿಕೆಶಿ ಗುರ್ : ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ಸರ್ಕಾರ ಮೊಕದ್ದಮೆ ದಾಖಲಿಸಿದೆ ಎಂದಿರುವ ಶಾಸಕ ಡಿ.ಕೆ.ಶಿವಕುಮಾರ್, ಎಫ್ಐಆರ್ ಪ್ರತಿಗಳನ್ನು ಸುದ್ದಿಗಾರರಿಗೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ಸುಳ್ಳು ಹೇಳುತ್ತಿದ್ದಾರೆ. ನನ್ನ ಆರೋಪಗಳನ್ನು ಸುಳ್ಳೆಂದು ಅವರು ಸಾಬೀತು ಮಾಡಿದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಶಿವಕುಮಾರ್ ಸವಾಲು ಹಾಕಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)