ಇನ್ಫೊಸಿಸ್ ಕಂಪನಿಯ ಕನ್ನಡಿಗರ ಎಳ್ಳು-ಬೆಲ್ಲಕ್ಕೆ ಎಳ್ಳು-ನೀರು
- ಸುಧಾಮ, ಬೆಂಗಳೂರು
ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐ.ಟಿ ಕಂಪನಿಗಳಲ್ಲಿ ಉತ್ತರ ಭಾರತೀಯರ ಹೋಳಿ, ಕೇರಳಿಗರ ಓಣಂ ಹಬ್ಬಗಳಿಗೆ ರಜೆ ನೀಡಿ ಕನ್ನಡಿಗರ ಉಗಾದಿಗೆ ರಜೆ ನೀಡದೆ ಇರುವುದನ್ನು ನಾಡಿನೆಲ್ಲ ಕನ್ನಡಿಗರು ತೀವ್ರವಾಗಿ ಖಂಡಿಸಿದ್ದರು. ಈ ಬಾರಿಯಾದರೋ ಆ ಸಂಸ್ಥೆಗಳು ಬುದ್ಧಿ ಕಲಿತಾವೆಂದೇ ಭಾವಿಸಿದ್ದರು. ಈ ಬಾರಿಯೂ ಕನ್ನಡಿಗರ ಮೇಲೆ ನಿರಾಸೆಯ ತಣ್ಣೀರು ಎರಚಲು ಈ ಸಂಸ್ಥೆಗಳು ಸಿದ್ಧವಾಗಿವೆ.
ನಾಡಿನ ಹೆಮ್ಮೆಯ ಸಂಸ್ಥೆಯೆಂದು, ಕನ್ನಡಿಗನೊಬ್ಬನ ಯಶಸ್ಸಿನ ಪ್ರತೀಕವೆಂದು ದೇಶ ವಿದೇಶಗಳಲ್ಲಿ ಕನ್ನಡಿಗರು ಯಾವ ಸಂಸ್ಥೆಯ ಬಗ್ಗೆ ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳಿಕೊಳ್ಳುತ್ತಿರುವರೋ, ಆ ನಮ್ಮ ಇನ್ಫೋಸಿಸ್ ಸಂಸ್ಥೆಯಲ್ಲಿಯೇ ಈ ಬಾರಿಯೂ ಕನ್ನಡ ವಿರೋಧಿ ಧೋರಣೆ ಕಾಣಿಸುತ್ತಿದೆ. ಈ ಬಾರಿ ಉಗಾದಿಗೆ ರಜೆ ನೀಡಲಾಗಿದೆ. ಆದರೆ ಸಂಕ್ರಾಂತಿ ಹಬ್ಬಕ್ಕೆ ಇಲ್ಲ. ಇನ್ಫೋಸಿಸ್ ಸಂಸ್ಥೆಯ ಕರ್ನಾಟಕದ ಕಛೇರಿಗಳಲ್ಲಿ ಘೋಷಿಸಲಾಗಿರುವ ರಜೆಪಟ್ಟಿಯಲ್ಲಿ ಕನ್ನಡಿಗರ ಸಂಕ್ರಾಂತಿಗೆ ರಜೆ ಇಲ್ಲ, ಆದರೆ ಮಲಯಾಳಿ ಭಾಷಿಕರ ತಿರುಓಣಂ ಹಬ್ಬಕ್ಕೆ ರಜೆ ನೀಡಲಾಗಿದೆ. ಓಣಮ್ ಹಬ್ಬಕ್ಕೆ ಕೇರಳದ ಶಾಖಾ ಕಛೇರಿಯಲ್ಲಿ ರಜೆ ನೀಡುವುದಾದರೆ ಅದು ಸರಿಯಾಗಿದೆ.
ಆದರೆ ಕರ್ನಾಟಕದಲ್ಲಿರುವ ತನ್ನ ಕಛೇರಿಗಳಲ್ಲಿ ಕನ್ನಡಿಗರ ಸಂಕ್ರಾಂತಿಗೆ ರಜೆ ಕೊಡದೆ, ಮಲಯಾಳಿ ಓಣಮ್ಗೆ ಯಾಕೆ ರಜೆ ನೀಡುವಿರಿ? ಎಂದು ಪ್ರಶ್ನಿಸಿದ ಉದ್ಯೋಗಿಗಳಿಗೆ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮಲಯಾಳಿ ಭಾಷಿಕ ಮುಖ್ಯಸ್ಥರು ಬೆದರಿಸಿ ಬಾಯಿ ಮುಚ್ಚಿಸುವುದರ ಜೊತೆಗೆ, ಆ ಉದ್ಯೋಗಿ ನಮ್ಮ ಪಾಲಿನ ಮಗ್ಗುಲ ಮುಳ್ಳೆಂದು ತನ್ನದೇ ಭಾಷೆಯ ಸಹೋದ್ಯೋಗಿಯಾಂದಿಗೆ ಚರ್ಚಿಸುತ್ತಾ ಇವರನ್ನು ಹೇಗಾದರೋ ನಿವಾರಿಸಬೇಕು ಎನ್ನುತ್ತಾರೆ ಎಂದರೆ ಇನ್ಫೋಸಿಸ್ನಂತಹ ಸಂಸ್ಥೆಗಳಲ್ಲಿ ಪರಭಾಷಿಕರ ಹಿಡಿತ ಎಷ್ಟರ ಮಟ್ಟಿನದು ಎಂಬುದನ್ನು ಊಹಿಸಿ. ಇಂತಹ ಕನ್ನಡ ವಿರೋಧಿ ಅಧಿಕಾರಿಗಳನ್ನು ಆಯಕಟ್ಟಿನ ಜಾಗಗಳಲ್ಲಿ ಕೂಡಿಸಿರುವ ಸಂಸ್ಥೆಯ ಮಾಲಿಕರೂ ಕೂಡಾ ಆದತಪ್ಪನ್ನು ಸಮರ್ಥಿಸಿಕೊಳ್ಳುತಾ ್ತ‘ನಾವು ಕನ್ನಡಿಗರು, ಬೇರೆ ಭಾಷಿಕರ ಹಬ್ಬಗಳನ್ನೂ ಆಚರಿಸಬೇಕು’ ಎಂದು ಸಂಸ್ಥೆಯ ಉದ್ಯೋಗಿಗಳಿಗೆ ಉಪದೇಶ ನೀಡಿದ್ದಾರೆ.
ಪ್ರತಿ ಸಂಸ್ಥೆಗೂ ತನ್ನ ರಜಾಪಟ್ಟಿಯನ್ನು ನಿರ್ಧರಿಸುವ ಸ್ವಾತಂತ್ರವಿರುತ್ತದೆ, ನಿಜ. ಆದರೆ ತಾವು ಕಾರ್ಯನಿರ್ವಹಿಸುವ ನಾಡಿನ ಮಹತ್ವದ ಹಬ್ಬಗಳಿಗೆ ರಜೆ ನೀಡುವ ಸಾಮಾಜಿಕ ಜವಾಬ್ದಾರಿಯೂ ಇರುತ್ತದೆ. ಹೀಗೆ ಪರ ಸಂಸ್ಕೃತಿಯನ್ನು ಕನ್ನಡಿಗರ ಮೇಲೆ ಹೇರುವ ಯಾವ ಹಕ್ಕೂ ಇವರಿಗೆ ಇಲ್ಲ ಎಂಬುದನ್ನು ಅಂತಹ ಸಂಸ್ಥೆಗಳ ಮುಖ್ಯಸ್ಥರು, ಮುಖ್ಯವಾಗಿ ಮೈಸೂರು ಇನ್ಫೊಸಿಸ್ ಶಾಖೆಯವರು ಅರಿತರೆ ಒಳ್ಳೆಯದು. ಕರ್ನಾಟಕದಲ್ಲಿರುವ ತಮ್ಮ ಸಂಸ್ಥೆಯ ಕಛೇರಿಗಳಲ್ಲಿ ಕನ್ನಡಿಗರನ್ನು ಅಲ್ಪಸಂಖ್ಯಾತರನ್ನಾಗಿಸಿರುವ ಈ ಜನ ನಾಡಿನ ಕನ್ನಡಿಗ ಎಚ್ಚೆತ್ತುಕೊಳ್ಳುವ ಮೊದಲೇ ಎಚ್ಚೆತ್ತರೆ ಒಳ್ಳೆಯದು.