ಕಾವೇರಿ ವಿವಾದ ಇತ್ಯರ್ಥದ ನಂತರ ನಿವೃತ್ತಿ : ಅಂಬಿ
ಮಂಡ್ಯ : ಕಾವೇರಿ ವಿವಾದ ಇತ್ಯರ್ಥಗೊಂಡ ನಂತರ ರಾಜಕೀಯ ನಿವೃತ್ತಿ ಹೊಂದುವೆ ಎಂದು ನಟ-ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಅಂಬರೀಷ್ ಘೋಷಿಸಿದ್ದಾರೆ.
ಕೇಂದ್ರ ಸಚಿವ ಸ್ಥಾನ ದೊರೆತ ನಂತರ, ಗುರುವಾರ(ನವೆಂಬರ್ 16) ತವರು ಜಿಲ್ಲೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ನನಗೀಗ 55ವರ್ಷ. ಕಾವೇರಿ ನದಿ ವಿವಾದ ಇತ್ಯರ್ಥವಾದ ನಂತರ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಅಲ್ಲದೆ ಮೈಶುಗರ್ ಕಾರ್ಖಾನೆ ಪುನರುಜ್ಜೀವನಗೊಳಿಸಲು ಯತ್ನಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ನಾನು ನಿಮ್ಮ ಸಂಸದ, ನನಗ್ಯಾವ ಪ್ರಚಾರವೂ ಬೇಡ. ನನ್ನ ಕರ್ತವ್ಯ ನಾನು ಮಾಡುತ್ತೇನೆ. ಜನತೆಯ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಹಾಗೂ ಅಂಬರೀಷ್ ಅಭಿಮಾನಿಗಳ ಸಂಘ ಜಂಟಿಯಾಗಿ ಏರ್ಪಡಿಸಿದ್ದ ಸಭೆಯಲ್ಲಿ, ಮಾಜಿ ಸಂಸದ ಹಾಗೂ ಕಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಮಾದೇಗೌಡ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೊದಲಾದ ನಾಯಕರು ಭಾಗವಹಿಸಿದ್ದರು.
(ಏಜನ್ಸೀಸ್)