ನಾನು ಕ್ರಿಸ್ತನ ದೂತ-ಮುಚ್ಚಿದ ಬಾಗಿಲ ಸಭೆಯಲ್ಲಿ ಬೆನ್ನಿಹಿನ್ ಹೇಳಿಕೆ
ನಾನು ಕ್ರಿಸ್ತನ ದೂತ-ಮುಚ್ಚಿದ ಬಾಗಿಲ ಸಭೆಯಲ್ಲಿ ಬೆನ್ನಿಹಿನ್ ಹೇಳಿಕೆ
ಬೆನ್ನಿ ಭೇಟಿಗೆ ಪತ್ರಕರ್ತರಿಗೆ ಅವಕಾಶ ನಿರಾಕರಣೆ
ಜನವರಿ 20ರ ಗುರುವಾರ ರಾತ್ರಿ ಬೆನ್ನಿ ಹಿನ್ ತಮ್ಮ ಆಪ್ತ ತಂಡದೊಂದಿಗೆ ತಮ್ಮದೇ ಆದ ಖಾಸಗಿ ವಿಮಾನದಲ್ಲಿ ಲಾಸ್ ಏಂಜಲಿಸ್ನಿಂದ ಬೆಂಗಳೂರಿಗೆ ಆಗಮಿಸಿದರು. ಆಗಮನದ ಸ್ವಲ್ಪ ಹೊತ್ತಿನಲ್ಲೇ ನಡೆದ ಮುಚ್ಚಿದ ಬಾಗಿಲ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡ ಬೆನ್ನಿಹಿನ್- ಮರಳುಗಾಡಿನಲ್ಲಿ ನೀರಿಗಾಗಿ ತಹತಹಿಸುವಂತೆ ವಿಶ್ವದ ನಾನಾ ಮೂಲೆಗಳ ಜನ ತಮ್ಮ (ಕ್ರಿಸ್ತ) ದರ್ಶನಕ್ಕಾಗಿ ಕಾತರರಾಗಿದ್ದಾರೆ ಎಂದು ಹೇಳಿದುದಾಗಿ ತಿಳಿದುಬಂದಿದೆ.
ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಎಫ್.ಸಲ್ಡಾನ, ಮಾಜಿ ಡಿಜಿಪಿ ಶ್ರೀನಿವಾಸಲು, ಸಂಸದ ಎಚ್.ಟಿ. ಸಾಂಗ್ಲಿಯಾನ ಮುಚ್ಚಿದ ಬಾಗಿಲ ಬೆನ್ನಿ ಸಭೆಯಲ್ಲಿ ಹಾಜರಿದ್ದರು.
ಹನ್ನೊಂದು ವರ್ಷದ ಹುಡುಗನಾಗಿದ್ದಾಗ ಮೊದಲ ಸಲ ಕ್ರಿಸ್ತನ ದರ್ಶನ ಮಾಡಿದೆ. ಆಗ ವಿದ್ಯುತ್ ಸ್ಪರ್ಶಿಸಿದ ಅನುಭವವಾಯಿತು. ಮಿಲಿಯನ್ಗಟ್ಟಲೆ ಸೂಜಿಗಳು ತಾಕಿದಂತೆನ್ನಿಸಿತು. ಆನಂತರ ನನಗೆ ದಿವ್ಯಬೋಧೆಯಾದಂತೆನ್ನಿಸಿತು. ಮುಂದಿನ ದಿನಗಳಲ್ಲಿ ಏಷ್ಯಾ ಹಾಗೂ ಆಫ್ರಿಕಾಗಳಲ್ಲಿ ಪ್ರಾಥನಾ ಸಭೆಗಳನ್ನು ನಡೆಸಿರುವುದಾಗಿ ಹಿನ್ ಹೇಳಿಕೊಂಡರು. ಕೆಲವೇ ತಿಂಗಳಲ್ಲಿ ನೈಜೀರಿಯಾದಲ್ಲಿ ಪ್ರಾರ್ಥನಾ ಸಭೆ ನಡೆಸಲು ಉದ್ದೇಶಿಸಿರುವುದಾಗಿ ಅವರು ಹೇಳಿದರು.
ಮುಚ್ಚಿದ ಬಾಗಿಲ ಹಿಂದೆ ಇಷ್ಟೆಲ್ಲ ಚಟುವಟಿಕೆಗಳು ನಡೆಯುತ್ತಿದ್ದರೂ ಬೆನ್ನಿ ಭೇಟಿಗೆ ಹಾಗೂ ಫೋಟೊ ತೆಗೆಯಲು ಪತ್ರಕರ್ತರಿಗೆ ಅವಕಾಶ ನಿರಾಕರಿಸಲಾಗಿತ್ತು . ನಗರದ ವೈಭವೋಪೇತ ಲೀಲಾ ಪ್ಯಾಲೇಸ್ನಲ್ಲಿ ಬೆನ್ನಿಹಿನ್ ತಂಗಿದ್ದಾರೆ.
ಈ ನಡುವೆ ಪ್ರಾರ್ಥನಾ ಸಭೆ ನಡೆಯುವ ಜಕ್ಕೂರು ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಭದ್ರತಾ ಕಾರ್ಯಗಳಿಗಾಗಿ 10 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಾರ್ಥನಾ ಸಭೆಯನ್ನು ತಡೆಯುವುದು ಪ್ರಸ್ತುತ ಸಂದರ್ಭದಲ್ಲಿ ಸಾಧ್ಯವಿಲ್ಲ ಎಂದು ತಿಳಿಸಿರುವ ರಾಜ್ಯ ಹೈಕೋರ್ಟ್, ಸಭೆಯನ್ನು ಸಂಪೂರ್ಣ ಚಿತ್ರೀಕರಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು











Click it and Unblock the Notifications