ಎಲ್ಲರೂ ಕೃಷ್ಣನ ಹಿಂದೆ ಬಿದ್ದರೆ ಬೀರಜ್ಜನ ಗತಿ ಏನು?
ಎಲ್ಲರೂ ಕೃಷ್ಣನ ಹಿಂದೆ ಬಿದ್ದರೆ ಬೀರಜ್ಜನ ಗತಿ ಏನು?
ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೊಂದು ಬಹಿರಂಗ ಪತ್ರ
- ಎಚ್.ವಿ. ಸೂರ್ಯನಾರಾಯಣ ಶರ್ಮಾ, ಬೆಂಗಳೂರು.
[email protected]
ಅಂತೂ ಕನಕಗೋಪುರದ ವಿವಾದದ ನೆವದಲ್ಲಿ ಮಾನ್ಯ ಭಾವೀ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದರ ಸಂದೇಶ ತಲುಪಬೇಕಾದವರಿಗೆ ಈಗಾಗಲೇ ತಲುಪಿರಬಹುದು. ಅತ್ತ ತಮಿಳು ನಾಡಿನಲ್ಲಿ ಜಯಲಲಿತ ಅವರು ಬ್ರಾಹ್ಮಣ ದ್ವೇಷದ ಗುರಿಯಿಂದ ಸ್ಥಾಪಿತವಾದ ದ್ರಾವಿಡ ಪಕ್ಷದ ನಾಯಕಿಯಾಗಿ ತಾನು ಮೂಲ ದ್ರಾವಿಡರಿಗಿಂತ ಹೆಚ್ಚು ದ್ರಾವಿಡವತಿ ಎಂದು ಪ್ರಾಮಾಣಿಸುವ ಪ್ರಯತ್ನದಲ್ಲಿ ಬ್ರಾಹ್ಮಣ ಮಠ ಮಂದಿರಗಳನ್ನು ಅವಮಾನಿಸುತ್ತಿದ್ದಾರೆ. ಆದರೆ, ಸಿದ್ಧರಾಮಯ್ಯನವರಿಗೆ ಅಂತಹ ಅನಿವಾರ್ಯವೇನಿದೆಯೋ ತಿಳಿಯುತ್ತಿಲ್ಲ. ಈ ಶಕ್ತಿಪ್ರದರ್ಶನದಿಂದ ದಿಗಿಲುಗೊಳ್ಳಬೇಕಾದವರು ‘ಕುಮಾರಜನಕ’ ಮಾತ್ರಾ. ಮಾಧ್ವರು ನಾಡಗೀತೆ ವಿಚಾರದಲ್ಲಿ ಅನಗತ್ಯ ಗೊಂದಲವೆಬ್ಬಿಸಿದ ರೀತಿಯಲ್ಲೇ ಕುರುಬರೂ ಕನಕ ಗೋಪುರದ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ. ಒಟ್ಟಿನಲ್ಲಿ ಯಾರೂ ನೆಮ್ಮದಿಯಾಗಿರುವಂತಿಲ್ಲ.
ಉಡುಪಿಯ ಶ್ರೀಕೃಷ್ಣದೇವರು ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದು ಎಂಬುದು ನಿರ್ವಿವಾದ ಸಂಗತಿ. ಆ ದೇವಾಲಯದ ಸಮಸ್ತವೂ ಅಷ್ಟಮಠದವರಿಗೆ ಮಾತ್ರಾ ಸೇರಬೇಕಲ್ಲದೇ ಇತರ ಮಾಧ್ವಗುಂಪುಗಳೂ ಸಹ ಇದರಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂಬುದು ಮೇಲುನೋಟಕ್ಕೆ ಕಾಣುವ ಸತ್ಯ. ಈ ಮಧ್ಯೆ ಈ ದೇವಾಲಯ ಯಾವ ಕಾರಣದಿಂದಲೋ, ಯಾರ ತಪ್ಪಿನಿಂದಲೋ ಸರಕಾರಿ ದಾಖಲೆಗಳಲ್ಲಿ ಮುಜರಾಯಿ ಇಲಾಖೆಗೆ ಸೇರಿದ್ದು ಎಂದು ನಮೂದಾಗಿದ್ದರೆ ಆ ತಪ್ಪನ್ನು ಸರಿಪಡಿಸಿ ದೇವಾಲಯವನ್ನು ಅಷ್ಟಮಠಗಳಿಗೆ ಸಂಪೂರ್ಣವಾಗಿ ಒಪ್ಪಿಸಿಕೊಡಬೇಕಾದದ್ದು ಸರಕಾರದ ಕರ್ತವ್ಯ. ಹಾಗಿಲ್ಲದೇ ಈ ದೇವಾಲಯ ಸರಕಾರದ ಆಡಳಿತಲ್ಲೇ ಇರಬೇಕಾದ್ದು ನ್ಯಾಯ ಸಮ್ಮತವೆನ್ನುವಂತಹ ಬಲವತ್ತರವಾದ ಕಾರಣಗಳಿದ್ದಲ್ಲಿ ಕೂಡಲೆ ಸರಕಾರ ಶ್ವೇತಪತ್ರವನ್ನು ಹೊರಡಿಸಿ ಸಾರ್ವಜನಿಕರ ಕುತೂಹಲ ಸಂಶಯಗಳನ್ನು ದೂರಮಾಡಬೇಕು. ಮುಂದಿನದು ನ್ಯಾಯಾಲಯದಲ್ಲಿ ತೀರ್ಮಾನವಾಗತಕ್ಕದ್ದು. ಪರಸ್ಪರ ಮಾತುಕತೆಯ ಮೂಲಕ ವಿವಾದಗಳನ್ನು ಬಗೆಹರಿಸಿಕೊಳ್ಳುವ ನಾಗರಿಕ ವಿಧಾನವನ್ನೂ ನಾವಾಗಲೇ ಕಳೆದುಕೊಂಡಿದ್ದೇವೆ.
ಕೆಲವು ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಚಿಕ್ಕಮಗಳೂರಿನ ದತ್ತಾತ್ರೇಯ ಪೀಠ ವಕ್ಫ್ ಮಂಡಲಿಯ ಆಸ್ತಿಯಲ್ಲ, ಮುಜರಾಯಿ ಇಲಾಖೆ ಅದರ ಆಡಳಿತವನ್ನು ವಹಿಸಿಕೊಳ್ಳತಕ್ಕದ್ದು ಎಂಬ ನ್ಯಾಯಾಲಯದ ಆದೇಶವಿದೆ. ಇದು ಸತ್ಯ ಸಂಗತಿಯಾಗಿದ್ದಲ್ಲಿ ಸರಕಾರ ಇದುವರೆಗೆ ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಂಡಿದೆ ಬಹಿರಂಗಪಡಿಸಲಿ. ಸಂವಿಧಾನ ತಜ್ಞರೂ, ಇತಿಹಾಸ ಪ್ರಾಜ್ಞರೂ ಆಗಿರುವ ಮಾನ್ಯ ಸಿದ್ಧರಾಮಯ್ಯನವರು ಬಡಪಾಯಿ ಬ್ರಾಹ್ಮಣರತ್ತ ಕೋಲು ತೋರಿಸುವುದನ್ನು ಬಿಟ್ಟು ದತ್ತಾತ್ರೇಯ ಪೀಠವನ್ನು ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳಲಿ. ಸೇರಿಸಿಕೊಂಡು ತಮ್ಮ ಕೋಲು ಕಂಬಳಿ ಉಳಿಸಿಕೊಳ್ಳಲಿ? ಇವರು ತಮ್ಮ ಪೌರುಷವನ್ನು ದತ್ತಪೀಠದಲ್ಲಿ ತೋರಿಸಲಿ, ಬಡ ಬ್ರಾಹ್ಮಣರ ವಿರುದ್ಧ ಸಲ್ಲ.
ಇನ್ನು ಕುರುಬರಿಗೆ ಕೃಷ್ಣ ಬೇಕೊ, ಕೃಷ್ಣ ದೇವಾಲಯ ಬೇಕೋ, ಕೃಷ್ಣಭಟ್ಟ ಬೇಕೋ ಸ್ಪಷ್ಟವಾದಂತಿಲ್ಲ. ಕೃಷ್ಣ ಬೇಕಾದಲ್ಲಿ ಕನಕದಾಸರಂತೆ ದೀಕ್ಷೆ ಪಡೆದು ಸಾಧನೆ ಮಾಡಬೇಕು, ಸಾಧ್ಯವೇ? ಕೃಷ್ಣ ದೇವಾಲಯದ ಆಸೆ? ಬಿಡುವುದೇ ಮೇಲು! ಕೃಷ್ಣಭಟ್ಟರು ಕಷ್ಟಸಾಧ್ಯ. ಕುರುಬರೆಲ್ಲಾ ಕೃಷ್ಣನ ಹಿಂದೆ ಬಿದ್ದರೆ ಬೀರಜ್ಜನ ಗತಿಏನು? ಕುರುಬರು ಕೃಷ್ಣಭಟ್ಟರು ವರ್ಣಿಸಿದಂತೆ ನಡೆಯುವುದನ್ನು ಬಿಟ್ಟು ಆವೇಶದ ಆವೇಗಕ್ಕೊಳಗಾಗದೆ ವಿವೇಕದಿಂದ ಸಾವಧಾನದಿಂದ ವರ್ತಿಸಿದರೆ ಸಮಾಜಕ್ಕೆ ಒಳ್ಳೆಯದು. ರಾಜಕಾರಣಿಗಳನ್ನು ಆಶ್ರಯಿಸಿದರೆ ಅನುಸರಿಸಿದರೆ ಕತ್ತಲೆಯ ಕಂದಕವೇ ಗತಿ. ಯಾವುದೇ ವಿಷಯದಲ್ಲಿ ಭಾವುಕತೆ ಅತಿ-ಭಾವುಕತೆ ವೈಯಕ್ತಿಕವಾಗಿ ಅಪಾಯಕಾರಿಯಾದರೆ ಸಾಮೂಹಿಕವಾಗಿ ವಿನಾಶಕಾರಿಯಾಗುತ್ತದೆ.












Click it and Unblock the Notifications