Get Updates
Get notified of breaking news, exclusive insights, and must-see stories!

ಕ್ರಿಸ್‌ಮಸ್‌-ಹೊಸ ವರ್ಷ :ಖುಷಿ ಪಡಲಿಕ್ಕೆ ಎಷ್ಟೊಂದು ಕಾರಣಗಳು!

ಕ್ರಿಸ್‌ಮಸ್‌-ಹೊಸ ವರ್ಷ :ಖುಷಿ ಪಡಲಿಕ್ಕೆ ಎಷ್ಟೊಂದು ಕಾರಣಗಳು!
ಜಗಮಗಿಸುತ್ತಿಗೆ ಬೆಂಗಳೂರು, ವರ್ಷಾಂತ್ಯದ ಸಂಭ್ರಮದಲ್ಲಿ ನವ ನಾಗರಿಕರು

ಇದು ಕ್ರಿಸ್‌ಮಸ್‌ ಸಮಯ. ಹೊಸ ವರ್ಷದ ಆರಂಭದ ಸಮಯ. ಮನೆಗಳ ಮುಂದಿನ ಬಣ್ಣಬಣ್ಣದ ನಕ್ಷತ್ರಗಳು ಹೊಸ ಕನಸುಗಳನ್ನು ಮೂಡಿಸುವ ಸಂಭ್ರಮದ ಸಮಯ. ಮಕ್ಕಳಿಗಂತೂ ಕ್ರಿಸ್‌ಮಸ್‌ ತಾತನನ್ನು ಕಾಣುವುದೇ ಒಂದು ಮೋಜು. ನಾನಾ ರೀತಿಯ ಕೇಕ್‌, ಚಾಕಲೇಟ್‌ಗಳು ಬಾಯಲ್ಲಿ ನೀರೂರಿಸುತ್ತವೆ. ರಾಜಧಾನಿ ನಗರ ಬೆಂಗಳೂರಂತೂ ವರ್ಷದ ಕಡೆಯ ಸಂಭ್ರಮ ಆಚರಿಸುತ್ತಿದೆ.

ಕ್ರಿಸ್‌ಮಸ್‌ ರಾತ್ರಿ ಚರ್ಚ್‌ಗಳಲ್ಲಿ ನಾನಾ ಕಾರ್ಯಕ್ರಮಗಳು. ಕ್ರೆೃಸ್ತರು ಮಾತ್ರವಲ್ಲ, ಎಲ್ಲ ಧರ್ಮದವರು ಚರ್ಚ್‌ಗಳತ್ತ ಆಕರ್ಷಿತರಾಗುತ್ತಿರುವುದು ಮತ್ತೊಂದು ವಿಶೇಷ. ಹಬ್ಬಕ್ಕಂತೂ ವಿಜೃಂಭಣೆಯ ರೂಪವೇ ಬಂದು ಬಿಟ್ಟಿದೆ. ಜೊತೆಗೆ ಧಾರ್ಮಿಕ ಹಿನ್ನೆಲೆ ಹಬ್ಬಕ್ಕೆ ಗಟ್ಟಿ ನೆಲೆಯನ್ನು ಒದಗಿಸಿದೆ. ಯಾಂತ್ರಿಕ ಬದುಕಿನ ತೊಳಲಾಟಗಳ ನಡುವೆ ಗೆಳೆಯರು, ಆತ್ಮೀಯರು, ಬಂಧು-ಬಳಗದವರು ಎಲ್ಲರೊಂದಿಗೆ ಒಂದಷ್ಟು ಕಾಲ ಕಳೆಯುವುದು ಕ್ರಿಸ್‌ಮಸ್‌ ನೆಪದಲ್ಲಿ ಸಾಧ್ಯವಾಗಿದೆ.

ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆ , ರೆಸಿಡೆನ್ಸಿ ರಸ್ತೆ , ಶಿವಾಜಿನಗರ, ಕಮರ್ಷಿಯಲ್‌ ಸ್ಟ್ರೀಟ್‌, ಸೇಂಟ್‌ಮಾರ್ಕ್ಸ್‌ ರಸ್ತೆ ಮುಂತಾದೆಡೆಗಳಲ್ಲಂತೂ ಕ್ರಿಸ್‌ಮಸ್‌ ಸಂಭ್ರಮ ಹೊಳೆಯಾಗಿದೆ. ಸಿಂಗರಿಸಿಗೊಂಡಿರುವ ಅಂಗಡಿಮಳಿಗೆಗಳು ಕ್ರಿಸ್‌ಮಸ್‌ ಆಕರ್ಷಣೆಯಲ್ಲಿ ಗ್ರಾಹಕರ ಸೆಳೆಯುತ್ತಿವೆ. ಕ್ರಿಸ್‌ಮಸ್‌ ಪಾರ್ಟಿಗಳೂ ಹೆಜ್ಜೆಗೊಂದು.

ಯೇಸು, ಗಾಂಧಿ, ಬುದ್ಧ, ಬಸವ ಈ ನಾಲ್ವರ ಬದುಕಿಗೂ ಸಾಕಷ್ಟು ಸಾಮ್ಯತೆ ಇದೆ. ಮೂಳೆ-ತೊಗಲಿನ ಬಡಕಲ ಮನುಷ್ಯ ಯೇಸು, ಕ್ರಿಶ್ಚಿಯನ್ನರ ಪಾಲಿಗೆ ಕೇವಲ ವ್ಯಕ್ತಿಯಲ್ಲ. ಆತ ದೇವ ಮಾನವ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಿದ ಯೇಸು, ಅರ್ಥಪೂರ್ಣ ಬದುಕಿನ ರಹಸ್ಯಗಳನ್ನು ಸಂದೇಶ ರೂಪದಲ್ಲಿ ನೀಡಿದ್ದಾನೆ. ಬದುಕಿನ ಸಾರ್ಥಕತೆಯ ವಿವರಿಸಿದ್ದಾನೆ. ಆದರೆ ಇವೆಲ್ಲವೂ ದಿನೇ ದಿನೇ ಬದಿಗೆ ಸರಿದು, ವೈಭವೀಕರಣ ಮಾತ್ರ ಮುಂದುವರೆಯುತ್ತಿರುವುದು ವಿಪರ್ಯಾಸಕರ.

ದಂಡಿಸುವುದು ದೇವರ ಕೆಲಸ. ಪ್ರೀತಿಸುವುದಷ್ಟೇ ನಮ್ಮ ಕೆಲಸ. ನಿಮ್ಮ ನೆರೆಹೊರೆಯವರನ್ನು ಮಾತ್ರವಲ್ಲ, ನಿಮ್ಮ ಶತ್ರುಗಳನ್ನು ಸಹ ಪ್ರೀತಿಸಿ. ನಾವು ಬೇರೆಯವರಿಗೆ ಕರುಣೆ ತೋರಿದರೆ , ನಮ್ಮ ತಪ್ಪುಗಳನ್ನು ಭಗವಂತ ಕ್ಷಮಿಸಿ, ಕರುಣೆ ತೋರುತ್ತಾನೆ ಎನ್ನುವ ಯೇಸು ವಾಣಿ ಎಲ್ಲರಿಗೂ ಗೊತ್ತು ಆದರೆ ಕಾರ್ಯರೂಪಕ್ಕೆ ತರಲು ಯಾರಿಗೂ ಮನಸ್ಸಿಲ್ಲ. ಮನದ ಕತ್ತಲ ದೂರ ಮಾಡದೇ, ಚರ್ಚ್‌ಗೆ ಹೋಗಿ ದೀಪ ಬೆಳಗಿಸಿದರೇ ಫಲವೇನು ಎನ್ನುವ ಪ್ರಶ್ನೆ ಇಲ್ಲಿ ಮೂಡುತ್ತದೆ.

ಶಿಲುಬೆಗೆ ಏರಿಸಿದಾಗ ಸಹ ಯೇಸುವಿಗೆ ಬೇಸರವಾಗಲಿಲ್ಲ. ಶಿಲುಬೆಗೇರಿಸಿದ ಜನರಿಗೆ ಒಳ್ಳೆಯದಾಗಲಿ ಎಂದು ಭಗವಂತನಲ್ಲಿ ಯೇಸು ಪ್ರಾರ್ಥಿಸಿದ್ದರು. ಹಿಂಸೆಗೆ ಅಹಿಂಸೆಯೇ ಮದ್ದು. ಸಮಾಜದ ಹಿತಕ್ಕಾಗಿ ಆತ್ಮ ಬಲಿದಾನಕ್ಕೆ ಸಜ್ಜಾಗುವ ಮನಸ್ಥಿತಿ ಅವರದು. ಅವರು ಹೇಳಿದ್ದಕ್ಕಿಂತಲೂ ಅನುಸರಿಸಿದ್ದೇ ಹೆಚ್ಚು. ಪವಿತ್ರ ಚರ್ಚ್‌ಗಳಲ್ಲಿ ಪ್ರಾಪಂಚಿಕ ವ್ಯವಹಾರ ಬೇಡ. ಬಡ್ಡಿ ವಸೂಲಿ ಮಾಡುವುದು, ಪ್ರಾಣಿ ಹಿಂಸೆ ಮಾಡುವುದು ಬೇಡವೆಂದು ಯೇಸು ಕರೆ ನೀಡಿದ್ದಾರೆ. ಆದರೆ ಕ್ರಿಸ್‌ಮಸ್‌ ಭೋಜನ ಕೂಟಗಳಲ್ಲಿ ಆಗುತ್ತಿರುವುದೇನು?

ಕ್ರಿಸ್‌ಮಸ್‌ ಎಂದರೆ ಯೇಸು ಪ್ರಭು ಹುಟ್ಟಿದ ದಿನ. ಯಹೂದಿಯ ಹುಲ್ಲಿನ ಕೊಟ್ಟಿಗೆಯಲ್ಲಿ ಜನಿಸಿದ ಯೇಸು ಕರುಣೆಯ ಹಿನ್ನೊಂದು ಮುಖ. ಹೀಗಾಗಿಯೇ ಜಗತ್ತಿಗೆ ಮಾದರಿ. ಅಂಗವಿಕಲರು, ಬಡವರು, ಶೋಷಿತರು, ರೋಗಿಗಳೊಂದಿಗೆ ಬದುಕು ಸವೆಸಿದ. ಜಗತ್ತಿಗೆ ಕರುಣೆ-ಪ್ರೇಮದ ಅರ್ಥ ತಿಳಿಸಿದ ವ್ಯಕ್ತಿಯನ್ನು ಕಡೆಗೆ ಶಿಲುಬೆಗೇರಿಸಲಾಯಿತು.

ಸರ್ಮನ್‌ ಒನ್‌ ದ ಮೌನ್ಟ್‌ ಗುಡ್ಡದ ಮೇಲೆ ಆತ ನೀಡಿದ ಸಂದೇಶ ನೀಡಿದ. ಸೂರ್ಯ ಎಲ್ಲರ ಮೇಲೆ ಸಮಾನವಾಗಿ ಬೆಳಕು ಬೀರುವಂತೆ, ಭಗವಂತನ ಪ್ರಭುತ್ವದಲ್ಲಿ ಎಲ್ಲರೂ ಸರಿಸಮಾನರು ಎಂದಿದ್ದ ಯೇಸು, ಸ್ವರ್ಗವನ್ನೇ ಭೂಮಿಗೆ ತರಬೇಕು ಎಂದು ಬಯಸಿದ.

ಕೆಟ್ಟ ಕಣ್ಣಿಂದ ಹೆಣ್ಣನ್ನು ನೋಡುವುದು ಘೋರ ಪಾಪ ಎನ್ನುವ ವಿಶಾಲ ದೃಷ್ಟಿಕೋನ ಯೇಸು ಹೊಂದಿದ್ದರು. ಯಾವುದೇ ಕಾರಣಕ್ಕೂ ಆಣೆ ಮಾಡಬೇಡಿ, ಮಾಡಿದರೆ ಅದನ್ನು ಮೀರ ಬೇಡಿ. ಪ್ರತಿಕಾರ ಬೇಡ, ಕ್ಷಮೆಯೇ ಎಲ್ಲಕ್ಕಿಂತಲೂ ದೊಡ್ಡದು ಎಂದಿದ್ದ ಯೇಸು ನೆನಪಾಗಬೇಕು. ಯೇಸುವಿಗಿಂತಲೂ ಅವರ ವಿಚಾರಗಳು ಮತ್ತೆ ಮತ್ತೆ ನೆನಪಾಗಬೇಕು.

ಈ ಹೊತ್ತು ರಸ್ತೆ ರಸ್ತೆಗಳಲ್ಲಿ ತುಂಬಿ ತುಳುಕುತ್ತಿರುವ ಸಂಭ್ರಮಕ್ಕಷ್ಟೇ ಕ್ರಿಸ್‌ಮಸ್‌ ಸೀಮಿತವಾಗಬಾರದು. ಕ್ರಿಸ್ತನ ನಡೆನುಡಿ ನಮ್ಮಲ್ಲೂ ಕೊಂಚ ಮಟ್ಟಿಗಾದರೂ ಮೂಡುವಂತಾದರೆ ಅದು ಕ್ರಿಸ್‌ಮಸ್‌ನ ನಿಜವಾದ ಆಚರಣೆ. ಅಲ್ಲವೇ?

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+