ಕಂಚಿ ಶಂಕರಾಚಾರ್ಯರ ಬಿಡುಗಡೆ ನೆನೆಗುದಿಗೆ, ಜೈಲುವಾಸ ವಿಸ್ತರಣೆ
ಕಂಚಿ ಶಂಕರಾಚಾರ್ಯರ ಬಿಡುಗಡೆ ನೆನೆಗುದಿಗೆ, ಜೈಲುವಾಸ ವಿಸ್ತರಣೆ
ಶ್ರೀ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಬಗ್ಗೆ ಕಾಳಜಿ ತೋರಿಸಲು ಜಯಾಗೆ ಪ್ರಧಾನಿ ಪತ್ರ
ಕಾಂಚೀಪುರಂ ನ್ಯಾಯಾಲಯಕ್ಕೆ ಬಿಗಿ ಪೋಲೀಸ್ ಬಂದೋಬಸ್ತುನಲ್ಲಿ ಶ್ರೀಗಳನ್ನು ಪೊಲೀಸರು ಶುಕ್ರವಾರ(ನ.26) ಹಾಜರುಪಡಿಸಿದರು. ಕೆಲವೇ ನಿಮಿಷಗಳಲ್ಲಿ ವಿಚಾರಣೆ ಮುಗಿಸಿದ ಪ್ರಥಮ ದರ್ಜೆ ನ್ಯಾಯಾಧೀಶ ಜಿ.ಉತ್ತಮ್ರಾಜ್ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದರು. ನಂತರ ಶ್ರೀಗಳನ್ನು ಮತ್ತೋಂದು ಹಲ್ಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಚೆನ್ನೈ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು.
ಕಾಂಚೀಪುರಂ ದೇವಸ್ಥಾನದ ಅಧಿಕಾರಿ ಶಂಕರರಾಮನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನ.11ರಿಂದ ಶ್ರೀಗಳು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು.
ಜಾಮೀನು ಅರ್ಜಿ : ಶಂಕರರಾಮನ್ ಕೊಲೆ ಪ್ರಕರಣ ಹಾಗೂ ರಾಧಾಕೃಷ್ಣ ಮೇಲಿನ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಿಂದ ಬಿಡುಗಡೆಗಾಗಿ ಶ್ರೀಗಳ ಪರ ವಕೀಲರು ಮದ್ರಾಸ್ ಹೈಕೋರ್ಟ್ನಲ್ಲಿ ಶುಕ್ರವಾರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಎರಡನೇ ಜಾಮೀನು ಅರ್ಜಿ ಇದಾಗಿದ್ದು, ಮೊದಲ ಅರ್ಜಿಯನ್ನು ನ್ಯಾಯಾಧೀಶರಾದ ಆರ್. ಬಾಲಸುಬ್ರಮಣ್ಯಂ ತಳ್ಳಿಹಾಕಿದ್ದರು.
ಜಯಾಲಲಿತಾ ಪ್ರತಿಕ್ರಿಯೆ : ಶ್ರೀ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರ ಬಂಧನ ಪ್ರಕ್ರಿಯೆಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಧರ್ಮಗುರುಗಳಿಗೆ ಸಲ್ಲಬೇಕಾದ ಗೌರವ ಸಲ್ಲಿಸಲಾಗಿದೆ. ಶ್ರೀಗಳ ವ್ಯಕ್ತಿತ್ವಕ್ಕೆ ಧಕ್ಕೆಯಾಗದಂತೆ, ಅವರಿಗೆ ಅವಮಾನವಾಗುವಂತೆ ಪೋಲೀಸರು ವರ್ತಿಸಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತಿಳಿಸಿದ್ದಾರೆ.
ಗೌರವಾನ್ವಿತ ಶ್ರೀಗಳ ಪ್ರಕರಣದಲ್ಲಿ ಅತಿ ಕಾಳಜಿ ಪ್ರದರ್ಶಿಸ ಬೇಕೆಂದು ಪ್ರಧಾನಿ ಡಾ.ಮನಮೋಹನ್ ಸಿಂಗ್, ತಮಿಳುನಾಡು ಸರಕಾರಕ್ಕೆ ಬರೆದಿದ್ದ ಪತ್ರಕ್ಕೆ ಮುಖ್ಯಮಂತ್ರಿ ಜಯಾಲಲಿತಾ ಪ್ರತಿಕ್ರಿಯಿಸಿದ್ದಾರೆ.
ಕೊಲೆ ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಶ್ರೀಗಳ ವಯಸ್ಸು ಹಾಗೂ ಆರೋಗ್ಯದ ಬಗೆಗೆ ಕಾಳಜಿ ಇದೆ. ವೈದ್ಯರ ತಂಡ ಶ್ರೀಗಳ ಆರೋಗ್ಯ ಪರೀಕ್ಷಿಸುತ್ತಿದ್ದು, ಯಾವುದೇ ತೊಂದರೆ ಇಲ್ಲ. ಶಂಕರರಾಮನ್ ಕೊಲೆ ಪ್ರಕರಣದಲ್ಲಿ ಶ್ರೀಗಳು ಆರೋಪಿಗಳು ಎನ್ನುವುದಕ್ಕೆ ಪೋಲೀಸರ ಬಳಿ ಸಾಕ್ಷಿಗಳಿವೆ. ಹೀಗಾಗಿ ಕಾನೂನು ಗೌರವಿಸುವ ಉದ್ದೇಶದಿಂದ ಅನಿವಾರ್ಯವಾಗಿ ಬಂಧಿಸಲಾಯಿತು ಎಂದು ಜಯಲಲಿತಾ ವಿವರಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications