ಕನ್ನಡ ಕನ್ನಡ ಬರ್ರಿನಮ್ಮ ಸಂಗಡ : ಕಸಾಪ ಅಧ್ಯಕ್ಷರಾಗಿ ಚಂಪಾ
ಬೆಂಗಳೂರು : ಜನ ಜೀವನದ ಎಲ್ಲ ಅಂಗಗಳಿಗೆ ಕನ್ನಡವನ್ನು ಮುಟ್ಟಿಸುವುದು ತಮ್ಮ ಗುರಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ 22ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ.ಚಂದ್ರಶೇಖರ ಪಾಟೀಲ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಚಂಪಾ ಅವರ ಆಯ್ಕೆಯನ್ನು ನ.3ರ ಮಂಗಳವಾರ ಅಧಿಕೃತವಾಗಿ ಪ್ರಕಟಿಸಲಾಯಿತು. ಡಾ. ನಲ್ಲೂರು ಪ್ರಸಾದ್ ವಿರುದ್ಧ ಚಂಪಾ 12,302 ಮತಗಳ ಭಾರೀ ಅಂತರದಿಂದ ಚುನಾಯಿತರಾಗಿದ್ದು, ಕಳೆದ ಬಾರಿ ಹರಿಕೃಷ್ಣ ಪುನರೂರು ವಿರುದ್ಧ ಅನುಭವಿಸಿದ್ದ ಅಲ್ಪ ಅಂತರದ ಸೋಲಿನ ಕಹಿಗೆ ಸಮಾಧಾನ ಕಂಡಿದ್ದಾರೆ. ಚಂಪಾ ಅವರು ಒಟ್ಟು 16,948 ಮತಗಳನ್ನು ಪಡೆದರೆ, ಅವರ ಸಮೀಪದ ಸ್ಪರ್ಧಿ ಡಾ.ನಲ್ಲೂರು ಪ್ರಸಾದ್ ಕೇವಲ 4,646 ಮತಗಳನ್ನು ಪಡೆದರು.
ಫಲಿತಾಂಶ ಪ್ರಕಟಣೆಯ ನಂತರ ಕಸಾಪ ಅಧ್ಯಕ್ಷರಾಗಿ ಹರಿಕೃಷ್ಣ ಪುನರೂರು ಅವರಿಂದ ಚಂಪಾ ಅಧಿಕಾರ ಸ್ವೀಕರಿಸಿದರು. ಬಂಡಾಯದ ನಾಯಕನಿಗೆ ಅಧಿಕಾರ ಸ್ವೀಕಾರಿಸಲು ಮಂಗಳವಾರ ಎನ್ನುವ ನೆಪ ಅಡ್ಡ ಬರಲಿಲ್ಲ .
ಅಧಿಕಾರ ಸ್ವೀಕಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಂಪಾ- ಕನ್ನಡದ ಹಿತಾಸಕ್ತಿಗೆ ಪೂರಕವಾಗಿ ಪರಿಷತ್ತು ಕೆಲಸ ಮಾಡಲಿದೆ. ಒಳನಾಡು ಹಾಗೂ ಹೊರನಾಡಿನ ಕನ್ನಡಿಗರೊಂದಿಗೆ ಪರಿಷತ್ತು ಒಟ್ಟಾಗಿ ನಡೆಯಲಿದೆ ಎಂದರು.
ರಾಜ್ಯದಲ್ಲಿ ಕನ್ನಡದ ಸರ್ಕಾರವೇ ಇಲ್ಲ ಎಂದು ಕಿಡಿ ಹಾರಿಸಿದ ಚಂಪಾ, ಕನ್ನಡದ ಹಿತಾಸಕ್ತಿಗೆ ವಿರುದ್ಧವಾದರೆ ಸರ್ಕಾರದ ವಿರುದ್ಧವೇ ಕನ್ನಡಿಗರ ಶಕ್ತಿ ಸಂಚಯಿಸುವುದಾಗಿ ಎಚ್ಚರಿಸಿದರು.
ಅಂದಹಾಗೆ, ಕಸಾಪ ಅಧ್ಯಕ್ಷ ಪದ ಅಲಂಕರಿಸಿದ ಉತ್ತರ ಕರ್ನಾಟಕದ ಮೊದಲಿಗರು ಚಂಪಾ.(ಇನ್ಫೋ ವಾರ್ತೆ)