ಹಂಪಿಯಲ್ಲಿ ಪರ್ಯಾಯ ನಾಡಹಬ್ಬ : ನ.3ರಿಂದ ಕಲ್ಲುಕಲ್ಲಿನಲಿ ಕನ್ನಡ !
ಹಂಪಿಯಲ್ಲಿ ಪರ್ಯಾಯ ನಾಡಹಬ್ಬ : ನ.3ರಿಂದ ಕಲ್ಲುಕಲ್ಲಿನಲಿ ಕನ್ನಡ !
ಆರಂಕುಶವಿಟ್ಟೊಡಂ ನೆನೆವುದೆಮ್ಮ ಮನಂ ಹಂಪಿ-ಆನೆಗೊಂದು ಉತ್ಸವಂ
ಹಂಪಿ ಉತ್ಸವವನ್ನು ದಸರಾ ಮಾದರಿಯಲ್ಲಿ ಅದ್ದೂರಿಯಿಂದ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ನವಂಬರ್ 3ರಿಂದ 5ರವರೆಗೆ ಹಂಪಿ-ಆನೆಗೊಂದಿ ಉತ್ಸವ ಜರುಗಲಿದೆ. ಕಂದಾಯ ಸಚಿವ ಎಂ.ಪಿ.ಪ್ರಕಾಶ್ ಅಧ್ಯಕ್ಷತೆಯ ಉತ್ಸವ ಸಮಿತಿ ಹಂಪಿ ಉತ್ಸವಕ್ಕೆ ಎಲ್ಲ ಸಿದ್ಧತೆಗಳನ್ನು ನಡೆಸಿದ್ದು ಈ ಬಾರಿಯ ಹಂಪಿ ಉತ್ಸವ ಹಿಂದೆಂದಿಗಿಂತಲೂ ಅರ್ಥಪೂರ್ಣವಾಗಿ ನಡೆಯುವ ಕುರಿತು ಆಶಾಭಾವ ವ್ಯಕ್ತಪಡಿಸಿದೆ.
ಪ್ರವಾಸೋದ್ಯಮ ನಿಗಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ-ಕೊಪ್ಪಳ ಜಿಲ್ಲಾಡಳಿತ, ಹಂಪಿ ವಿಶ್ವವಿದ್ಯಾಲಯ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರ ಕೂಡ ಉತ್ಸವದ ಯಶಸ್ಸಿಗೆ ಹೆಗಲು ನೀಡಿವೆ. ಈ ಉತ್ಸವವನ್ನು ರಾಜ್ಯ ಪರಂಪರೆ ಹಾಗೂ ಸಂಸ್ಕೃತಿಯ ಅಭಿವ್ಯಕ್ತಿ ಉತ್ಸವ ಮಾತ್ರವಲ್ಲದೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವ ಉದ್ದೇಶ ಸರ್ಕಾರದ್ದು .
ಪ್ರತಿಷ್ಠಿತ ಹಂಪಿ ಉತ್ಸವಕ್ಕೆ 60 ರಿಂದ 65ಲಕ್ಷ ರೂಪಾಯಿ ವೆಚ್ಚ ತಗುಲಲಿದೆ. ಈ ಪೈಕಿ ಸುಮಾರು 35 ಲಕ್ಷ ರುಪಾಯಿಯನ್ನು ಸ್ಥಳೀಯ ಸಂಪನ್ಮೂಲದಿಂದ ಕ್ರೂಢೀಕರಿಸಲಾಗಿದೆ. ಗಣಿ ಮಾಲೀಕರು, ಉದ್ಯಮಿಗಳು ಹಾಗೂ ಇತರ ಖಾಸಗಿಯವರ ನೆರವು ಪಡೆಯಲಾಗಿದೆ.
ವಿಜಯನಗರ ಕಾಲದ ಬೃಹತ್ ದೇಶಿ ಗ್ರಂಥ ಮುದ್ರಣಕ್ಕೆ 1.5ಲಕ್ಷ ರೂಪಾಯಿ ನೀಡಲಾಗಿದೆ. ಬಳ್ಳಾರಿ-ಕಮಲಾಪುರ -ಹಂಪಿ ರಸ್ತೆಯ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. ಹಂಪಿ ಉತ್ಸವದ ಪ್ರಯುಕ್ತ ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಮತ್ತು ಕುಸ್ತಿ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ.
ಹೊಸಪೇಟೆಯ ತುಂಗಭದ್ರಾ ಆಣೆಕಟ್ಟೆಗೆ 53 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನದಿ ಜೋಡಣೆ ಕುರಿತು ವಿಚಾರಸಂಕಿರಣವನ್ನು ಉತ್ಸವದಲ್ಲಿ ಏರ್ಪಡಿಸಲಾಗಿದೆ. ಅಲ್ಲದೇ ವಿಜಯನಗರ ಅರಸರು ಶ್ರೀಲಂಕಾದವರೆಗೆ ಸಾಮಾಜ್ಯ ವಿಸ್ತರಿಸಿದ್ದ ರಿಂದ ಅಲ್ಲಿನ ಮತ್ತು ಆಂಧ್ರದ ಜನಪದ ತಂಡಗಳನ್ನು ಉತ್ಸವಕ್ಕೆ ಆಹ್ವಾನಿಸಲಾಗಿದೆ.
ಒಟ್ಟಿನಲ್ಲಿ ಮೈಸೂರು ದಸರೆಗೆ ಪರ್ಯಾಯವೆನ್ನಂತೆ ಹಂಪಿ ಉತ್ಸವ ಈಚಿನ ವರ್ಷಗಳಲ್ಲಿ ರೂಪುಗೊಳ್ಳುತ್ತಿದೆ. ಕನ್ನಡ ನಾಡುನುಡಿ ಪ್ರಜ್ಞೆ ಜೀವಂತವಾಗಿರಿಸುವ ಈ ರೀತಿಯ ಉತ್ಸವಗಳು ನಾಡಿನೆಲ್ಲೆಡೆ ನಡೆಯಬೇಕಾಗಿದೆ.(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications