ಮಪಿಷಾಸುರನ ಮಾರಣಹೋಮನಾಡಿಗೆ ನವರಾತ್ರಿಯ ಉಡುಗೊರೆ!!
ಮಪಿಷಾಸುರನ
ಮಾರಣಹೋಮ
ನಾಡಿಗೆ
ನವರಾತ್ರಿಯ
ಉಡುಗೊರೆ!!
ಪಾಪಿ
ಚಿರಾಯು
ಎಂಬ
ಗಾದೆ
ಮಾತನ್ನು
ಅವನೇ
ಸುಳ್ಳಾಗಿಸಿದ.
ಸತ್ತವನ
ನೆರಳು
ಹಲವರಿಗೆ
ಸಂತಸ,
ಕೆಲವರಿಗೆ
ದುಃಖ!
ಅಕ್ಟೋಬರ್ 18ರ ಸೋಮವಾರ ರಾತ್ರಿ 11 ಗಂಟೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಪ್ಪರಪಟ್ಟಿ ಗ್ರಾಮದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಎಸ್ಟಿಎಫ್ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ವೀರಪ್ಪನ್ ಪೋಲೀಸರ ಗುಂಡಿಗೆ ಬಲಿಯಾದ. ಗುಂಡಿನ ಘರ್ಷಣೆಯಲ್ಲಿ ವೀರಪ್ಪನ್ನೊಂದಿಗೆ ಆತನ ಜತೆಗೆ ಕರಟಕ ದಮನಕರಂತೆ ನೆರವಾಗುತ್ತಿದ್ದ ಸೇತುಕುಳಿ ಗೋವಿಂದನ್, ಸೇತುಮಲೈ ಮತ್ತು ಗೌಡರ್ ಸಹ ಹೆಣವಾದರು.
ಆಸ್ತಮಾದಿಂದ ಸೊರಗಿದ್ದ ವೀರಪ್ಪನ್ ವಾಹನವೊಂದರಲ್ಲಿ ಚಿಕಿತ್ಸೆಗಾಗಿ ತೆರಳುತ್ತಿದ್ದಾಗ, ಕರ್ನಾಟಕ ಎಸ್ಟಿಎಫ್ ಮುಖ್ಯಸ್ಧ ಜ್ಯೋತಿ ಪ್ರಕಾಶ್ ಮಿರ್ಜಿ ಮತ್ತು ತಮಿಳು ನಾಡಿನ ವಿಜಯಕುಮಾರ್ ನೇತೃತ್ವದ ವಿಶೇಷ ಕಾರ್ಯಪಡೆಯ ತುಕ್ಕಡಿ ಅಡ್ಡಗಟ್ಟಿತು. ಶರಣಾಗಲು ನೀಡಿದ ಅವಕಾಶವನ್ನು ನಿರಾಕರಿಸಿದ ವೀರಪ್ಪನ್ಗುಂಡಿನ ದಾಳಿ ಆರಂಭಿಸಿದ. ಗುಂಡಿನ ಚಕಮಕಿಯಲ್ಲಿ ವೀರಪ್ಪನ್ ಸಾವನ್ನಪ್ಪಿದ್ದಾನೆ ಪೋಲೀಸ್ ಮೂಲಗಳು ದೃಢಪಡಿಸಿದವು. ಕಳೆದ ಎರಡಿ ದಶಕಗಳ ಅವಧಿಯಲ್ಲಿ ವೀರಪ್ಪನ್ ಕುರಿತು ಅದೆಷ್ಟೋ ಸುದ್ದಿಗಳು ಹರಿದು ಬಂದಿವೆ. ಆದರೆ, ಕರಾರುವಾಕ್ಕಾಗಿರುವ ಸುದ್ದಿ ಬಂದದ್ದು ಇದೇ ಮೊದಲು, ಇದೇ ಕೊನೆ.
ಕಾಡಿನ ವೀರ : ಪೋಲೀಸರು ಸೇರಿದಂತೆ ನೂರಾರು ಮಂದಿಯ ರಕ್ತ ಕುಡಿದಿದ್ದ ವೀರಪ್ಪನ್ ರಕ್ತವನ್ನು ಈಗ ಪೋಲೀಸರು ಕುಡಿದಿದ್ದಾರೆ. ಸುಮಾರು 6000 ಚದರ ಕಿ.ಮೀ ವ್ಯಾಪ್ತಿಯ ಮಹದೇಶ್ವರ ಬೆಟ್ಟ ಮತ್ತು ಸತ್ಯಮಂಗಳ ಕಾಡನ್ನು ತನ್ನ ಸಾಮ್ರಾಜ್ಯವನ್ನಾಗಿ ಮಾಡಿಕೊಂಡು ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳನ್ನು ವೀರಪ್ಪನ್ ಎಡೆಬಿಡದೆ ಕಾಡುತ್ತಿದ್ದ.
ನರಪೇತಲನಾದರೂ ವೀರಪ್ಪನ್ ಮಾಡಿದ ಕೆಲಸಗಳು ಒಂದೆರಡಲ್ಲ. ದಂತಕ್ಕಾಗಿ ಆನೆಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ವೀರಪ್ಪನ್, ಶ್ರೀಗಂಧಕ್ಕಾಗಿ ಕಾಡನ್ನು ಖಾಲಿಮಾಡಿದ್ದ.
ಪ್ರಾಣ ತೆಗೆಯುವುದು, ಅಪಹರಣ ಮಾಡುವುದು ಇವೆಲ್ಲಾ ವೀರಪ್ಪನ್ಗೆ ಸೇಂದಿ ಕುಡಿದಷ್ಟೇ ಸುಲಭ. ವೀರಪ್ಪನ್ ಸಾವಿನೊಂದಿಗೆ ಅನೇಕ ರಹಸ್ಯಗಳು ಸತ್ತಿವೆ. ಕೆಲವರು ಸದ್ಯ ವೀರಪ್ಪನ್ ಸತ್ತು ನಮ್ಮನ್ನು ಉಳಿಸಿದ ಎಂದು ಖುಷಿಯಲ್ಲಿದ್ದಾರೆ.
ನೂರಾ ಎಂಟು ದಿನಗಳ ಕಾಲ ವೀರಪ್ಪನ್ ಅತಿಥಿಯಾಗಿದ್ದ ರಾಜಕುಮಾರ್, ಈಗ ನಿರಾಳತೆಯಿಂದ ತಮ್ಮ ಹುಟ್ಟೂರು ಗಾಜನೂರಿಗೆ ಹೋಗಬಹುದು. ದೇವರು ವೀರಪ್ಪನ್ಗೆ ತಕ್ಕ ಶಿಕ್ಷೆ ನೀಡಿದ ಎಂದು ರಾಜ್ ಪ್ರತಿಕ್ರಿಯಿಸಿದ್ದಾರೆ.
ವೀರಪ್ಪನ್ ಸಾವಿಗೆ ಸಂತಸ ವ್ಯಕ್ತಪಡಿಸಿರುವ ಮುಖ್ಯ ಮಂತ್ರಿ ಧರ್ಮಸಿಂಗ್, ಸದ್ಯ ಒಂದು ತಲೆನೋವು ತಪ್ಪಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ವೀರಪ್ಪನ್ಗೆ ಬಲಿಯಾದ ಮಾಜಿ ಸಚಿವ ನಾಗಪ್ಪನ ಮಗಳು ಪವನಾ, ಈ ಸಾವಿನಿಂದ ಅಪ್ಪನ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದಿದ್ದಾಳೆ.
ರಾಷ್ಟ್ರಪತಿಯಿಂದ ಹಿಡಿದು ಬಡಬೋರೇಗೌಡನವರೆಗೆ ವೀರಪ್ಪನ್ ಸಾವು ಚರ್ಚೆಗೆ ಗ್ರಾಸವಾಗಿದೆ. ಹೆಂಡತಿ ಮಕ್ಕಳನ್ನು ಬಿಟ್ಟು , ವೀರಪ್ಪನ್ಗಾಗಿ ಕಾಡಿನಲ್ಲಿ ಅಲೆಯುತ್ತಿದ್ದ ಎಸ್ಟಿಎಫ್ ಸಿಬ್ಬಂದಿಯ ಶಾಪ ವಿಮೋಚನೆಯಾಗಿದೆ. ವೀರಪ್ಪನ್ ಹೆಸರಲ್ಲಿ ಕಪ್ಪಕಾಣಿಕೆ ಸಂಗ್ರಹಿಸುತ್ತಿದ್ದ ಮರಿ ವೀರಪ್ಪನ್ಗಳಿಗೆ ಮಾತ್ರ ಸ್ಪಲ್ಪ ಹಿನ್ನಡೆ ಉಂಟಾಗಿದೆ.
(ಇನ್ಫೊವಾರ್ತೆ)
ಮುಖಪುಟ / ವಾಟ್ಸ್ ಹಾಟ್