‘ಅಮಾನಿ ಕೆರೆ’ಗುಳುಂ ಯತ್ನ ; ಯಲಹಂಕ ನಾಗರಿಕರಿಂದ ಪ್ರತಿರೋಧ
ಬೆಂಗಳೂರು : ನಗರದ ಯಲಹಂಕದಲ್ಲಿನ ಐತಿಹಾಸಿಕ ಅಮಾನಿ ಕೆರೆ ದಡದಲ್ಲಿ ಉದ್ದೇಶಿತ ಖಾಸಗಿ ಲೇಔಟ್ ನಿರ್ಮಾಣಕ್ಕೆ ಸ್ಥಳೀಯ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಮಾನಿ ಕೆರೆ ಸುತ್ತಮುತ್ತ ಯಾವುದೇ ಲೇಔಟ್ ನಿರ್ಮಿಸಬಾರದು ಹಾಗೂ ಕೆರೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಕೆರೆಯ ದಡದಲ್ಲಿ ಜುಲೈ 1ರಂದು ಸಮಾವೇಶಗೊಂಡಿದ್ದ ಸುಮಾರು 500 ಕ್ಕೂ ಹೆಚ್ಚು ನಾಗರಿಕರು ಒತ್ತಾಯಿಸಿದರು. ಯಲಹಂಕ ನಗರ ಮುನ್ಸಿಪಲ್ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ನಾಗರಿಕರು, ಯಾವುದೇ ಕಾರಣಕ್ಕೂ ಕೆರೆಯ ದಡದಲ್ಲಿ ಲೇಔಟ್ ನಿರ್ಮಿಸಕೂಡದು ಎಂದು ತಹಸಿಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.
ಪ್ರಭಾವಿ ರಾಜಕಾರಣಿಗಳ ಸಂಬಂಧಿಗಳು ಕೆರೆಯ ದಂಡೆಯಲ್ಲಿ ಲೇಔಟ್ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ. ಕೆರೆಯ ದಡವನ್ನೂ ಲೇಔಟ್ನಲ್ಲಿ ಒತ್ತುವರಿ ಮಾಡಿಕೊಳ್ಳುವ ಪ್ರಯತ್ನಗಳು ನಡೆದಿವೆ ಎಂದು ನಾಗರಿಕರು ಆಪಾದಿಸಿದ್ದಾರೆ.
ಅಮಾನಿ ಕೆರೆ ಯಲಹಂಕ ಆಸುಪಾಸಿನಲ್ಲಿನ ಅತಿದೊಡ್ಡ ಕೆರೆಯಾಗಿದ್ದು 80 ಎಕರೆ ವ್ಯಾಪ್ತಿಯನ್ನು ಹೊಂದಿದೆ. ಸುತ್ತಮುತ್ತಲಿನ ಪ್ರದೇಶಗಳಿಗೆ ಅಂತರ್ಜಲವನ್ನು ಪೂರೈಸುವ ಅಮಾನಿ ಕೆರೆಯಲ್ಲಿ ಪ್ರಾಚೀನ ದೇಗುಲ ಕೂಡ ಇದೆ.(ಇನ್ಫೋ ವಾರ್ತೆ)