ದೆಹಲಿಯಲ್ಲಿ ಬೀಡುಬಿಟ್ಟ ರಾಜ್ಯದ ಹಣೆ ಬರಹ ಲಿಖಿಸುವ ವಿಧಾತರು
ದೆಹಲಿಯಲ್ಲಿ ಬೀಡುಬಿಟ್ಟ ರಾಜ್ಯದ ಹಣೆ ಬರಹ ಲಿಖಿಸುವ ವಿಧಾತರು
ಮುಖ್ಯಮಂತ್ರಿ ಹುದ್ದೆಗೆ ಜಾತ್ಯತೀತ ಜನತಾದಳ ಬಿಗಿ ಪಟ್ಟು , ಅಧಿಕಾರಕ್ಕಾಗಿ ಕಾಂಗ್ರೆಸ್ ಸರ್ಕಸ್
ಅಧಿಕಾರದ ಸೂತ್ರಗಳನ್ನು ಹಿಡಿಯಲು ನೇರ ಆಸಕ್ತಿ ವ್ಯಕ್ತಪಡಿಸಿರುವ ಜಾತ್ಯತೀತ ಜನತಾದಳ ಹಾಗೂ ಹಿಂಬಾಗಿಲಿನಿಂದ ಅಧಿಕಾರವನ್ನು ವಹಿಸಿಕೊಳ್ಳಲು ಸಿದ್ಧವಾಗಿರುವ ಕಾಂಗ್ರೆಸ್- ಎರಡೂ ಪಕ್ಷಗಳ ನಾಯಕರೀಗ ದೆಹಲಿಯಲ್ಲಿ ಬೀಡುಬಿಟ್ಟು ಮಾತುಕತೆ ನಡೆಸಿದ್ದಾರೆ. ಮಾತುಕತೆಯ ಫಲಿತಾಂಶ ಸದ್ಯಕ್ಕೆ ಲಭ್ಯವಿಲ್ಲ . ಭಾನುವಾರ-ಸೋಮವಾರದ ವೇಳೆಗೆ ರಾಜ್ಯ ರಾಜಕಾರಣದ ಚಿತ್ರ ಸ್ಪಷ್ಟಗೊಳ್ಳುವ ನಿರೀಕ್ಷೆಯಿದೆ.
ಜಾತ್ಯತೀತ ದಳದ ಪಟ್ಟು : ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿರುವುದರಿಂದ ಜಾತ್ಯತೀತ ಜನತಾದಳಕ್ಕೆ ಅಧಿಕಾರ ರಚಿಸಲು ಬೆಂಬಲ ನೀಡಬೇಕೆಂದು ಜಾತ್ಯತೀತ ಜನತಾದಳದ ಮುಖಂಡರು ವಾದಿಸುತ್ತಿದ್ದಾರೆ. ಒಂದುವೇಳೆ ಸಮ್ಮಿಶ್ರ ಸರ್ಕಾರ ಸಾಧ್ಯವಾದರೂ, ಮುಖ್ಯಮಂತ್ರಿ ಹುದ್ದೆ ತಮಗೇ ಸಲ್ಲಬೇಕು ಎನ್ನುವುದು ಜಾತ್ಯತೀತ ಜನತಾದಳೀಯರ ಪಟ್ಟು .
ದೇವೇಗೌಡರ ನೇತೃತ್ವದಲ್ಲಿ ಶುಕ್ರವಾರ ಬೆಂಗಳೂರು ಹಾಗೂ ದೆಹಲಿಯಲ್ಲಿ ನಡೆದ ಪಕ್ಷದ ನಾಯಕರ ಸಭೆ, ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ದೇವೇಗೌಡರಿಗೇ ವಹಿಸಿದೆ. ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಗೌಡರ ಮಾತುಕತೆ ಪ್ರಗತಿಯಲ್ಲಿದೆ. ಸಿದ್ಧರಾಮಯ್ಯ, ಪಿಜಿಆರ್ ಸಿಂಧ್ಯಾ, ಎಂ.ಪಿ.ಪ್ರಕಾಶ್ ಹಾಗೂ ಇಬ್ರಾಹಿಂ ಕೂಡ ದೆಹಲಿಯಲ್ಲಿ ದೇವೇಗೌಡರಿಗೆ ಕಂಪನಿ ನೀಡಿದ್ದಾರೆ.
ಸಿಪಿಐಎಂನ ಸುರ್ಜಿತ್ ಸಿಂಗ್, ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಹಾಗೂ ಎನ್ಸಿಪಿ ಮುಖಂಡ ಶರದ್ಪವಾರ್ ಜೊತೆ ದೇವೇಗೌಡರ ಬಳಗ ಶನಿವಾರ ಮಾತುಕತೆ ನಡೆಸಿದೆ.
ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆ ಕೂಡ ಸರ್ಕಾರ ರಚನೆಯ ಕುರಿತು ಚಿಂತನೆ ನಡೆಸಿದೆ. ಜಮ್ಮು ಮತ್ತು ಕಾಶ್ಮೀರ ರೂಪದಲ್ಲಿ ರಾಜ್ಯದಲ್ಲೂ ಸರ್ಕಾರ ರಚಿಸುವುದು ಕಾಂಗ್ರೆಸ್ ಉದ್ದೇಶ. ಒಂದುವೇಳೆ ಮುಖ್ಯಮಂತ್ರಿ ಹುದ್ದೆಗಾಗಿ ಜೆಡಿಎಸ್ ಪಟ್ಟು ಮಾಡಿದರೆ- ಪ್ರಮುಖ ಖಾತೆಗಳನ್ನು ತಾನೇ ಇಟ್ಟುಕೊಳ್ಳಲು ಕಾಂಗ್ರೆಸ್ ಉದ್ದೇಶಿಸಿದೆ.
ಧರ್ಮಸಿಂಗ್ ಕನಸು : ಕಾಂಗ್ರೆಸ್ನ ಹಿರಿಯ ನಾಯಕ ಧರ್ಮಸಿಂಗ್ ಪಾಳಯದಲ್ಲಿ ಕೂಡ ರಾಜಕೀಯ ಚಟುವಟಿಕೆಗಳು ಚುರುಕಾಗಿವೆ. ಹೈಕಮಾಂಡ್ ಆದೇಶಿಸಿದರೆ ಸರ್ಕಾರ ರಚನೆಯ ಪ್ರಯತ್ನ ನಡೆಸುವುದಾಗಿ ಹೇಳಿರುವ ಧರ್ಮಸಿಂಗ್, ಮುಖ್ಯಮಂತ್ರಿ ರೇಸ್ನಲ್ಲಿ ತಾವಿರುವುದಾಗಿ ಸ್ಪಷ್ಟ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ನ ನೂತನ ಶಾಸಕರ ಒಂದು ಗುಂಪು ಧರ್ಮಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿ, ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದು ಗಮನಾರ್ಹ ಬೆಳವಣಿಗೆ.
ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತ್ರ ಪಕ್ಷದ ಸೋಲನ್ನು ವಿನೀತರಾಗಿ ಒಪ್ಪಿಕೊಂಡಿದ್ದಾರೆ. ಪಕ್ಷ ಗೌರವಯುತವಾಗಿ ಪ್ರತಿಪಕ್ಷಗಳ ಸ್ಥಾನದಲ್ಲಿ ಕೂರಬೇಕೆನ್ನುವುದು ಖರ್ಗೆ ಅಭಿಮತ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications