ಆತ್ಮಹತ್ಯೆ! ದಕ್ಷಿಣ ಭಾರತಕ್ಕೆ ವಿಶ್ವದಲ್ಲೇ ನಂ.1 ಸ್ಥಾನ
ಕೌಟುಂಬಿಕ ಕಲಹ, ಸಾಂಸಾರಿಕ ಹಿಂಸೆ ಮತ್ತು ಮಾನಸಿಕ ಅಸ್ವಸ್ಥತೆಯ ಕಾರಣದಿಂದಾಗಿ ಈ ಆತ್ಮಹತ್ಯೆಗಳು ಸಂಭವಿಸುತ್ತಿವೆ. ತಮಿಳುನಾಡಿನ ವೆಲ್ಲೂರಿನಲ್ಲಿ 10ರಿಂದ 19 ವರ್ಷದೊಳಗಿನವರ ಪೈಕಿ- ಪ್ರತಿ ಒಂದು ಲಕ್ಷ ಮಂದಿಯಲ್ಲಿ 148 ಮಹಿಳೆಯರು ಹಾಗೂ 58 ಪುರುಷರು ಆತ್ಮಹತ್ಯೆಯ ಕೃತ್ಯವೆಸಗುತ್ತಿದ್ದಾರೆ.
ಜಗತ್ತಿನಲ್ಲಿ ಸರಾಸರಿ ಪ್ರತಿ ಒಂದು ಲಕ್ಷದಲ್ಲಿ 14.5 ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಾಗತಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮಹಿಳೆಯರ ಪಾಲು ಪುರುಷರ ಮೂರರಷ್ಟಿದೆ. ಆತ್ಮಹತ್ಯೆ ಮಾಡಿಕೊಳ್ಳುವವರು ನೇಣು ಹಾಕಿಕೊಳ್ಳುವುದು ಅಥವಾ ಕೀಟನಾಶಕ ಕುಡಿದು ಸಾಯುವುದು ಸಾಮಾನ್ಯವಾಗಿದೆ. ಈ ಅಂಕಿಅಂಶಗಳು ಇಡೀ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಪ್ರಮಾಣವನ್ನು ಬಿಂಬಿಸುತ್ತದೆ ಎಂದು ಸಂಶೋಧಕರಾದ ಡಾ. ಅನುರಾಧಾ ಬೋಸ್ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಭಾರತಕ್ಕೆ ಹೋಲಿಸಿದರೆ ಭಾರತದ ಇತರ ಪ್ರದೇಶಗಳಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಏಕೆಂದರೆ ಬಹುತೇಕ ಆತ್ಮಹತ್ಯೆಗಳು ಲೆಕ್ಕಕ್ಕೆ ಸಿಗದೆಯೇ ಮರೆಯಲ್ಲಿ ನಡೆದು ಹೋಗುತ್ತವೆ. ಕಾರಣ ಅತೃಪ್ತಿದಾಯಕ ನಾಗರಿಕ ವ್ಯವಸ್ಥೆ, ಮೃತರ ಬಗ್ಗೆ ಮಾಹಿತಿ ಕಾಯ್ದಿರಿಸದಿರುವುದು ಮತ್ತು ಆತ್ಮಹತ್ಯೆಯ ಬಗೆಗೆ ಕಾನೂನು ಮತ್ತು ಸಮಾಜದ ಧೋರಣೆ ಸರಿಯಾಗಿಲ್ಲದಿರುವುದೇ ಆಗಿದೆ.