Get Updates
Get notified of breaking news, exclusive insights, and must-see stories!

ಅಖಾಡಕ್ಕಿಳಿದ ಹೆಂಡದ ದೊರೆಗಳು, ಪಾರ್ಟಿ ಫಂಡಿಗೆ ಗ್ರಹಣ!

ಅಖಾಡಕ್ಕಿಳಿದ ಹೆಂಡದ ದೊರೆಗಳು, ಪಾರ್ಟಿ ಫಂಡಿಗೆ ಗ್ರಹಣ!
ಮಲ್ಯ ಜನತಾಪಕ್ಷದಲ್ಲಿ ವಿರಾಜಮಾನ, ಹರಿಖೋಡೆ ಅರಸು ಪಕ್ಷದ ಯಜಮಾನ, ಹೀಗಿರುವಾಗ ಬಡಪಾಯಿ ರಾಜಕಾರಣಿಗಳದು ಯಾತರ ಧ್ಯಾನ ?

  • ದಟ್ಸ್‌ಕನ್ನಡ ಬ್ಯೂರೊ
ಚುನಾವಣೆ ಬಂತೆಂದರೆ ಕರ ಭೂ ಮಾಫಿಯಾ ದೊರೆಗಳು ಹಾಗೂ ಬಂಡವಾಳಶಾಹಿಗಳ ಮನೆಗಳಲ್ಲೆಲ್ಲ ರಾಜಕಾರಣಿಗಳಿಂದ ಗಿಜಿಗಿಜಿ ಅನ್ನತೊಡಗುತ್ತವೆ. ಅದರಲ್ಲೂ ಹೆಂಡದ ದೊರೆಗಳ ಮನೆಗಳಲ್ಲಂತೂ ಜಾತ್ರೆಯೋ ಜಾತ್ರೆ. ದುಡ್ಡುಳ್ಳ ಈ ದೊಡ್ಡವರು ಯಾರಿಗೂ ಇಲ್ಲ ಅನ್ನುವುದಿಲ್ಲ ; ಎಲ್ಲ ರಾಜಕೀಯ ಪಕ್ಷಗಳಿಗೂ ಯಥಾನುಸಾರ ದೇಣಿಗೆ ನೀಡುತ್ತಾರೆ. ಅಧಿಕಾರಕ್ಕೆ ಯಾರೇ ಬರಲಿ, ಕೆಲಸ ಆಗುವುದು ಮುಖ್ಯವಲ್ಲವೆ ?

ಹೆಂಡದ ದೊರೆಗಳು ರಾಜಕೀಯವನ್ನು ನಿಯಂತ್ರಿಸುತ್ತಾರೆ ಎನ್ನುವ ಮಾತು ಪದೇಪದೇ ಬಳಕೆಯಾಗುವುದುಂಟು. ಏಕೆಂದರೆ, ಇವರು ನೀಡುವ ಪಾರ್ಟಿ ಫಂಡಿನಿಂದಲೇ ಚುನಾವಣೆಗಳು ರಂಗೇರುತ್ತವೆ. ರಾಜಕಾರಣಿಗಳು ಹೆಂಡದ ದೊರೆಗಳ ಋಣದಲ್ಲಿರುತ್ತಾರೆ. ಚುನಾವಣೆ ಮುಗಿದ ನಂತರದ ಐದು ವರ್ಷಗಳಲ್ಲಿ ಋಣ ಸಂದಾಯದ ಕೆಲಸ.

ಆದರೆ, ಈ ಬಾರಿ ಗಾಳಿ ಬೀಸುವ ದಿಕ್ಕು ತುಸು ಬದಲಾದಂತಿದೆ. ನಮ್ಮಪ್ಪನ ದುಡ್ಡಲ್ಲಿ ಅವರಪ್ಪನ ಜಾತ್ರೆ ಯಾಕೆ ಎನ್ನುವಂತೆ, ಮದ್ಯೋದ್ಯಮಿಗಳೇ ರಾಜಕೀಯದ ಅಖಾಡಕ್ಕೆ ನೇರ ಇಳಿದಿರುವ ಬೆಳವಣಿಗೆ ರಾಜ್ಯ ರಾಜಕಾರಣದ ರಂಗುಗಳನ್ನೇ ಬದಲಿಸಿದೆ. ಒಂದೆಡೆ ಅಂತರರಾಷ್ಟ್ರೀಯ ಖ್ಯಾತಿಯ ಮದ್ಯೋದ್ಯಮಿ ವಿಜಯ್‌ ಮಲ್ಯ ನೇಗಿಲು ಹೊತ್ತ ರೈತನ ಜನತಾಪಕ್ಷವನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆ. ತಾನೇನು ಕಡಿಮೆ ಎನ್ನುವಂತೆ ಖೋಡೆ ಬಳಗ ದೇವರಾಜ ಅರಸು ಹೆಸರಲ್ಲಿ ಹೊಸ ಪಕ್ಷವನ್ನೇ ಕಟ್ಟಿದ್ದಾರೆ. ಮದ್ಯದ ದೊರೆಗಳೇ ಚುನಾವಣಾ ಅಖಾಡದಲ್ಲಿ ತಮ್ಮ ಕುದುರೆಗಳನ್ನು ನೇರವಾಗಿ ಓಡಿಸುತ್ತಿರುವಾಗ, ಪಾಪ, ರಾಜಕಾರಣಿಗಳಿಗೆ ದುಡ್ಡಾದರೂ ಎಲ್ಲಿಂದ ಬರಬೇಕು ?

ಈ ಹಿಂದೆ ‘ಯುಬಿ ಸಮೂಹ’ದ ಮಾಲಕ ಮಲ್ಯ ಅಲ್ಲಿ-ಇಲ್ಲಿ ರಾಜಕೀಯದವರೊಡನೆ ಗುರುತಿಸಿಕೊಂಡಿದ್ದರು. ಹೆಗಡೆ ಸಖ್ಯಹೊಂದಿದ್ದ ಮಲ್ಯ ಮುಖ್ಯಮಂತ್ರಿ ಕೃಷ್ಣ ಕೃಪೆಯಿಂದ ಬಿಜೆಪಿಯ ತಾರಾದೇವಿಯನ್ನು ಹೊರತಳ್ಳಿ ರಾಜ್ಯಸಭೆ ಪ್ರವೇಶಿಸಿದರು. ನಂತರದ ಬೆಳವಣಿಗೆಯಲ್ಲಿ ರಾತ್ರಿ ಬೆಳಗಾದಾಗ ಜನತಾದಳ ಸಂಯುಕ್ತದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಬಿಟ್ಟರು. ಬಿರುಕೊಡೆದ ದಳದಲ್ಲಿ ನಿಲ್ಲಲಾರದೆ ಸುಬ್ರಹ್ಮಣ್ಯ ಸ್ವಾಮಿ ನಾಯಕತ್ವದ ಜನತಾ ಪಕ್ಷಕ್ಕೆ ಸೇರಿಕೊಂಡರು. ಇದು ರಾಜ್ಯ ರಾಜಕಾರಣದ ಮೇಲೆ ಪ್ರಭಾವ ಬೀರದಿದ್ದರೂ, ರಾಜ್ಯ ಚುನಾವಣಾ ಅರ್ಥಶಾಸ್ತ್ರದ ಮೇಲೆ ಪ್ರಭಾವ ಬೀರಿದೆ. ಇದರಿಂದ ಹಲವು ರಾಜ್ಯ ನಾಯಕರಿಗೆ ಚುನಾವಣಾ ಫಂಡ್‌ ಹೊಂದಿಸುವುದು ಕಷ್ಟವಾಗಿದೆ.

‘ಜನತಾ ಪರಿವಾರ’ದ ಪ್ರಮುಖ ಫಂಡ್‌ದಾರನಾಗಿದ್ದ ಇನ್ನೊಬ್ಬ ಹೆಂಡದದೊರೆ ಹರಿಖೋಡೆ ‘ದೇವರಾಜು ಅರಸು ಸಂಯುಕ್ತ ಪಕ್ಷ’ ಸ್ಥಾಪಿಸಿದ್ದಾರೆ. 80ರ ದಶಕದಲ್ಲಿ ‘ಜನತಾ ದಳದ’ ಏಳಿಗೆಗೆ ಮೂಲಗಳನ್ನು ಒದಗಿಸಿದವರು ಈ ಹರಿಖೋಡೆ. ಈಗ ದಳ-ದಳ ಗಳಾದ ಜನತಾ ಪರಿವಾರ ಬಡವಾಗಿದೆ. ಆ ಕಾರಣದಿಂದಲೂ ಕೆಲವು ನಾಯಕರು ಬೇರೆ ಪಕ್ಷದತ್ತ ಕಾಲು ಹಾಕುತ್ತಿದ್ದಾರೆ ಎಂಬ ವದಂತಿಯಿದೆ. ಆದರೆ ‘ಜೆಡಿಯು’ ಮಾತ್ರ ಖೋಡೆಯ ‘ಅರಸು ಪಕ್ಷ’ದ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ.

ಇನ್ನೊಂದೆಡೆ ಬಿಜೆಪಿಗೆ ಪ್ರಮುಖ ಫಂಡ್‌ದಾರನಾಗಿದ್ದ ಟ್ರಾವೆಲ್ಸ್‌ ದೊರೆ ವಿಜಯ ಸಂಕೇಶ್ವರ ‘ಕನ್ನಡ ನಾಡು ಪಕ್ಷ ’ ಸ್ಥಾಪಿಸಿದ್ದಾರೆ. ಇದು ಆರ್ಥಿಕವಾಗಿ ಬಿಜೆಪಿಗೆ ಕರ್ನಾಟಕದಲ್ಲಿ ಬಿದ್ದ ಹೊಡೆತ. ಅಲ್ಲವೆನ್ನುವಿರಾ ಅನಂತಕುಮಾರ್‌?

ಅಂದಹಾಗೆ, ರಾಜಕೀಯ ಪಕ್ಷಗಳಿಗೆ ಈಗ ಉಳಿದಿರುವುದಾದರೂ ಏನು ? ಬೇರೆ ಪಕ್ಷಗಳ ಮಾತು ಗೊತ್ತಿಲ್ಲ - ಮುಖ್ಯಮಂತ್ರಿ ಕೃಷ್ಣ ರಿಗೆ ಮಾತ್ರ ದಾರಿಗಳು ಹೊಳೆದಿವೆಯಂತೆ ; ಐಟಿ ಕಂಪನಿಗಳಿಗೆ ಪರವಾನಗಿ, ಆಧುನೀಕರಣ, ಫ್ಲೈಓವರ್‌ಗಳ ಗುತ್ತಿಗೆ..... ಒಂದೇ ಎರಡೇ, ಕೈ ಇಟ್ಟಲ್ಲೆಲ್ಲ ಕೊಪ್ಪರಿಗೆ !

Post your views

ಮುಖಪುಟ / ವಾಟ್ಸ್‌ ಹಾಟ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+