ಸಿಡ್ನಿ ಸೋಲಿಗೆ ಏನು ಕಾರಣ ? : ಅಲನ್‌ ಬಾರ್ಡರ್‌ ಹೇಳುತ್ತಾರೆ..

ಸಿಡ್ನಿ ಸೋಲಿಗೆ ಏನು ಕಾರಣ ? : ಅಲನ್‌ ಬಾರ್ಡರ್‌ ಹೇಳುತ್ತಾರೆ..
ಕಹಿನೆನಪುಗಳ ಮರೆಯಿರಿ, ಸ್ಮರಣೀಯ ಘಟನೆಗಳಿಗಾಗಿ ಆಟಗಾರರನ್ನು ಅಭಿನಂದಿಸಿ....

  • ಅಲನ್‌ ಬಾರ್ಡ್‌ರ್‌, ಪಿಟಿಐಗಾಗಿ
ಗಂಟುಮೂಟೆ ಕಟ್ಟುವಾಗ ಭಾರತೀಯರು ಆತ್ಮಾವಲೋಕನದಲ್ಲಿ ತೊಡಗಿರಲೂಬಹುದು.

ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು; ದೈಹಿಕವಾಗಿ ನೀವು ಫಿಟ್‌ ಆಗಿರದಿದ್ದಲ್ಲಿ ಮಾನಸಿಕವಾಗಿಯೂ ಕುಸಿದಂತೆಯೇ ಸರಿ. ದೀರ್ಘಕಾಲದ ಪ್ರವಾಸಗಳು ಇಂಥ ಸಂದರ್ಭದಲ್ಲಿ ಮಾರಕವಾಗುತ್ತವೆ. ಜನ ನಗಬಹುದು. ಆದರೆ ನಾನು ಬಲ್ಲೆ , ಪ್ರವಾಸ ಮುಗಿಯುತ್ತಾ ಬಂದಂತೆಲ್ಲ ನೀವುಗಳು ನಿಮ್ಮ ಕುಟುಂದವರನ್ನು ಮಿಸ್‌ ಮಾಡಿಕೊಳ್ಳತೊಡಗಿದ್ದನ್ನು .

ಒಂದು ತಂಡ ಒತ್ತಡಕ್ಕೊಳಗಾದ ಸಂದರ್ಭದಲ್ಲಿ , ಆ ತಂಡಕ್ಕೆ ಅದೃಷ್ಟ ಕೂಡ ಕೈಕೊಡಲು ಆರಂಭಿಸುತ್ತದೆ. ಭಾರತದ ಮಟ್ಟಿಗೆ ಆದುದು ಇದೇನೆ.

ಪರ್ತ್‌ ಪಂದ್ಯಕ್ಕೆ ಮುಂಚೆ ಆಸ್ಟ್ರೇಲಿಯಾದ ಸ್ಥಿತಿಯನ್ನೇ ನೋಡಿ. ಅವರಿಗೆ ಕೂಡ ಒತ್ತಡವಿತ್ತು . ಬ್ರೆಟ್‌ಲೀ ತನ್ನ ಲಯ ಕಂಡುಕೊಳ್ಳಲಿ ಎಂದು ತಂಡ ನಿರೀಕ್ಷಿಸುತ್ತಿತ್ತು . ಎಲ್ಲವೂ ನಿರೀಕ್ಷೆಯಂತೆಯೇ ಆಯಿತು. ಗಿಲ್‌ಕ್ರಿಸ್ಟ್‌ ಮತ್ತು ಹೇಡನ್‌ ರನ್‌ ಗಳಿಕೆಯಲ್ಲಿ ಹಿಂದುಳಿಯಲೇ ಇಲ್ಲ . ಡೇಮಿಯನ್‌ ಮಾರ್ಟಿನ್‌ ಕೂಡ ಸರಿಯಾದ ಸಂದರ್ಭದಲ್ಲಿ ತಮ್ಮ ಮೇಲೆ ತಂಡ ಇಟ್ಟಿದ್ದ ನಂಬಿಕೆ ಉಳಿಸಿಕೊಂಡರು. ಪರಿಣಾಮವಾಗಿ ಆಸ್ಟ್ರೇಲಿಯಾಕ್ಕೆ ಅದ್ಭುತ ಯಶಸ್ಸಿನ ಮುಕ್ತಾಯ ಸರಣಿಯಲ್ಲಿ ದೊರೆಯಿತು.

ಆಸ್ಟ್ರೇಲಿಯಾ ಅದ್ಭುತವಾದ ಕ್ಯಾಚ್‌ಗಳನ್ನು ತೆಗೆದುಕೊಂಡಿತು. ಕ್ಷೇತ್ರರಕ್ಷಣೆಯಲ್ಲೂ ಚಾಕಚಕ್ಯತೆ ಮೆರೆಯಿತು. ಸಕಾಲಕ್ಕೆ ಮಾಡಿದ್ದ ಕ್ಷೇತ್ರರಕ್ಷಣೆ ಬದಲಾವಣೆಗಳು ಫಲಕೊಟ್ಟವು.

ಅಗರ್ಕರ್‌ ಮತ್ತು ಕುಂಬ್ಳೆ ಅನುಪಸ್ಥಿತಿಯಲ್ಲಿ ಭಾರತ ತನ್ನ ಸ್ಟ್ರೈಕ್‌ ಬೌಲರ್‌ಗಳನ್ನು ಕಳೆದುಕೊಂಡಿತ್ತು ಎನ್ನುವುದು ನಿಜ. ಭಾರತೀಯರ ಫಿಟ್‌ನೆಸ್‌ ಉತ್ತಮಗೊಂಡಿರುವುದೂ ನಿಜ. ಆದರೆ ದೇಹದಾರ್ಢ್ಯತೆಯ ನಿಟ್ಟಿನಲ್ಲಿ ಭಾರತೀಯರು ಹಾಗೂ ಆಸ್ಟ್ರೇಲಿಯನ್ನರ ನಡುವೆ ದೊಡ್ಡದೊಂದು ಅಂತರ ಇದ್ದೇಇದೆ. ಮೈದಾನದ ಆಚೆಯೂ ವಿಶ್ವ ಚಾಂಪಿಯನ್ನರು ಸಾಕಷ್ಟು ದೈಹಿಕ ಕಸರತ್ತು ನಡೆಸುತ್ತಾರೆ. ಜಿಮ್‌ಗಳಿಗೆ ಹೋಗುತ್ತಾರೆ. ಭಾರ ಎತ್ತುತ್ತಾರೆ. ದೇಹದಾರ್ಢ್ಯ ಕಾಪಾಡಿಕೊಳ್ಳುವಲ್ಲಿ ಸದಾ ನಿಗಾ ವಹಿಸುತ್ತಾರೆ.

ಈ ಪ್ರವಾಸದಲ್ಲಿ ಸಚಿನ್‌ ತೆಂಡೂಲ್ಕರ್‌ ಅಧ್ಯಯನದ ಮಟ್ಟಿಗೆ ಕುತೂಹಲಕರ ವಿಷಯ. ಆತನ ತಲೆಯಲ್ಲಿ ಏನೋ ಇದ್ದಂತಿತ್ತು . ಆದರೆ ತನ್ನ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಚಿನ್‌ ಯಶಸ್ವಿಯಾಗಲಿಲ್ಲ . ಸಿಡ್ನಿ ಟೆಸ್ಟ್‌ನಲ್ಲಿ ಅತ್ಯದ್ಭುತ ಆಟವಾಡಿದರೂ, ಅದು ಆತನ ಪ್ರದರ್ಶನದ ಒಂದು ಭಾಗ ಮಾತ್ರ. ಚಾಂಪಿಯನ್‌ ಆಟವನ್ನು ಸಚಿನ್‌ ಆಡಲೇ ಇಲ್ಲ . ಗಂಗೂಲಿ ಯಶಸ್ಸೂ ಅಷ್ಟಕ್ಕಷ್ಟೆ . ಲೀ ಅನುಪಸ್ಥಿತಿಯಲ್ಲಿ ಗಂಗೂಲಿ ಪ್ರವಾಸವನ್ನು ಉತ್ತಮವಾಗಿ ಆರಂಭಿಸಿದರೂ, ಆನಂತರ ಷಾರ್ಟ್‌ಪಿಚ್‌ ಎಸೆತಗಳನ್ನು ಎದುರಿಸುವ ದೌರ್ಬಲ್ಯ ಗಂಗೂಲಿಯ ಮುಂದುವರೆಯಿತು.

ಏಳು ಮಂದಿ ಬ್ಯಾಟ್ಸ್‌ಮನ್‌ಗಳೊಂದಿಗೆ ಮೈದಾನಕ್ಕಿಳಿಯುವ ಭಾರತದ ತಂತ್ರದ ಬಗ್ಗೆ ನನಗೆ ಅನುಮಾನಗಳಿವೆ. ಅದೇರೀತಿ, ದ್ರಾವಿಡ್‌ ವಿಕೆಟ್‌ ಕೀಪಿಂಗ್‌ ಮಾಡುವ ಕುರಿತು ಆಕ್ಷೇಪಗಳಿವೆ. ದ್ರಾವಿಡ್‌ ವಿಕೆಟ್‌ ಹಿಂದೆ ನಿಂತಾಗಲೆಲ್ಲ ಆತನ ಬ್ಯಾಟಿಂಗ್‌ ಕಳೆಗುಂದಿದ್ದನ್ನು ಈ ಪ್ರವಾಸದಲ್ಲಿ ಗಮನಿಸಬಹುದು. ಒಬ್ಬ ಖಾಯಂ ವಿಕೆಟ್‌ಕೀಪರ್‌ನನ್ನು ಭಾರತ ಕಂಡುಕೊಳ್ಳಲೇಬೇಕಿದೆ. ತಾತ್ಕಾಲಿಕ ವ್ಯವಸ್ಥೆಯಾಗಿ ಕೀಪಿಂಗ್‌ಗಿಳಿದ ದ್ರಾವಿಡ್‌ ಎರಡು ವರ್ಷಗಳಿಂದಲೂ ಡಬ್ಬಲ್‌ ರೋಲ್‌ ಮಾಡುತ್ತಿದ್ದಾರೆ. ಈ ರಾಜಿ ದೀರ್ಘಕಾಲದ್ದಾಯಿತು. ಗಿಲ್‌ಕ್ರಿಸ್ಟ್‌ ಆಸ್ಟ್ರೇಲಿಯಾಕ್ಕೆ ಹೇಳಿ ಮಾಡಿಸಿದ ಆಟಗಾರ. ಭಾರತ ಈ ನಿಟ್ಟಿನಲ್ಲಿ ಉತ್ತರ ಕಂಡುಕೊಳ್ಳಬೇಕು.

ಬೌಲಿಂಗ್‌ ಕುರಿತು ಹೇಳುವುದಾದರೆ, ಭಾರತ ಐದನೇ ಬೌಲರ್‌ನ ಕೊರತೆಯನ್ನು ಎದುರಿಸಿದ್ದು ಸ್ಪಷ್ಟ . ಶೆಹ್ವಾಗ್‌, ಗಂಗೂಲಿ ಮತ್ತು ಸಚಿನ್‌ ಐದನೇ ಬೌಲರ್‌ ಸ್ಥಾನವನ್ನು ತುಂಬುವ ಪ್ರಯತ್ನ ಯಶಸ್ವಿಯಾಗಲಿಲ್ಲ . ದ್ರಾವಿಡ್‌ ಡೈಲೆಮ ಹಾಗೂ ಐದನೇ ಬೌಲರ್‌ ಸ್ಥಾನದ ಪರದಾಟಗಳ ಹಿನ್ನೆಲೆಯಲ್ಲಿ , ಭಾರತಕ್ಕೆ ಕನಿಷ್ಠ ಒಬ್ಬನಾದರೂ ಆಲ್‌ರೌಂಡರ್‌ ಬೇಕೆನ್ನಿಸುತ್ತಿದೆ. ಸೈಮಂಡ್ಸ್‌ ರೀತಿಯವರಾದರೆ ಒಳ್ಳೆಯದು. ಬೌಲಿಂಗ್‌ ಆಲ್‌ರೌಂಡರ್‌ಗಳನ್ನೂ ಭಾರತ ಶೋಧಿಸಬಹುದು. ಈ ನಿಟ್ಟಿನಲ್ಲಿ ಇರ್ಫಾನ್‌ ಒಳ್ಳೆಯ ಆಲ್‌ರೌಂಡರ್‌ ಆಗಿ ಪ್ರವಾಸ ಕಾಲದಲ್ಲಿ ಕಾಣಿಸಿಕೊಂಡಿದ್ದು , ಆತನ ಕುರಿತು ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಿವೆ. ಆತ ಇನ್ನೂ ಚಿಕ್ಕವನಾದುದರಿಂದ ಆತನ ಮೇಲೆ ಹೆಚ್ಚು ಒತ್ತಡ ಹೇರಬಾರದು. ಒಂದುವೇಳೆ ಇರ್ಫಾನ್‌ ಸವ್ಯಸಾಚಿಯ ಪಾತ್ರ ನಿರ್ವಹಿಸುವಲ್ಲಿ ಯಶಸ್ವಿಯಾದರೆ, ಅದು ಭಾರತಕ್ಕೆ ವರದಾನವಾದಂತೆಯೇ ಸರಿ.

ದೀರ್ಘ ಪ್ರವಾಸಗಳು ಮಾನಸಿಕ ಒತ್ತಡಕ್ಕೆ ಕಾರಣವಾಗುವುದು ನಿಜ. ಆದರೆ, 10ರಿಂದ 12 ಟೆಸ್ಟ್‌ ಹಾಗೂ 35ರಿಂದ 40 ಒಂಡೇಗಳು ಕ್ರಿಕೆಟಿಗರಿಗೆ ಹೊರೆಯಾಗಲಾರವು. ದೀರ್ಘಪ್ರವಾಸದ ಬಗ್ಗೆ ಮಾತನಾಡುವ ಮುನ್ನ , ಕಳೆದ ವರ್ಷ ಭಾರತ ಆಡಿದ್ದು ಐದೇ ಐದು ಟೆಸ್ಟ್‌ ಅನ್ನುವುದನ್ನು ಗಮನಿಸಬೇಕು.

ಫೈನಲ್‌ ಪಂದ್ಯಗಳ ಫಲಿತಾಂಶ ಭಾರತೀಯ ಅಭಿಮಾನಿಗಳ ಪಾಲಿಗೆ ಅತೀವ ದುಃಖ ಉಂಟು ಮಾಡಿವೆ. ಆದರೆ ಈ ಬೇಸಗೆಯಲ್ಲಿ ಭಾರತೀಯ ಆಟಗಾರರು ಅದ್ಭುತ ಕ್ರಿಕೆಟ್‌ ಆಡಿದ್ದನ್ನು ಅಭಿಮಾನಿಗಳು ಮರೆಯಬಾರದು. ಈ ಆಟಗಾರರು ದೇಶದ ಒಳ್ಳೆಯ ರಾಯಭಾರಿಗಳೂ ಹೌದು. ಈ ಪ್ರವಾಸದ ಸ್ಮರಣೀಯ ಘಟನೆಗಳು ಹಾಗೂ ಮನರಂಡನೆಗಾಗಿ ಆಟಗಾರರನ್ನು ಅಭಿನಂದಿಸಬೇಕು.

(ಪಿಟಿಐ)

Post your views

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+