ಋತು ದರ್ಶನ : ಗಾರುಡಿಗನಿಗೆ ನಮನ
ಋತು ದರ್ಶನ : ಗಾರುಡಿಗನಿಗೆ ನಮನ
ಸಾಧನಕೇರಿ ಹಾಗೂ ಆಸುಪಾಸಿನ ಜನರಿಂದ ವರಕವಿ ಬೇಂದ್ರೆ ಹುಟ್ಟುಹಬ್ಬ
ಹುಬ್ಬಳ್ಳಯಲ್ಲಿ ಇತ್ತೀಚೆಗೆ ನಡೆದ ಬೇಂದ್ರೆ ಅವರ ಹುಟ್ಟುಹಬ್ಬದ ಈ ಕಾರ್ಯಕ್ರಮ ಪುಸ್ತಕ ಬಿಡುಗಡೆಗೆ ಮಾತ್ರ ಸೀಮಿತವಾಗಿರಲಿಲ್ಲ . ಶಬ್ದ ಗಾರುಡಿಗನ ಜಯಂತಿ ಸಂದರ್ಭದಲ್ಲಿ ನಾದದ ಮೋಡಿಯೂ ಇತ್ತು ; ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿತು.
‘ಋತು ದರ್ಶನ’ ಸಂಕಲನದಲ್ಲಿ 14 ಕವಿತೆಗಳಿವೆ. ವರಕವಿ ದ.ರಾ.ಬೇಂದ್ರೆ ಸಂಶೋಧನಾ ಸಂಸ್ಥೆ ಮತ್ತು ಬೇಂದ್ರೆ ಸಂಗೀತ ಅಕಾಡೆಮಿ ಈ ಸಂಕಲನವನ್ನು ಪ್ರಕಟಿಸಿವೆ. ಇದೊಂದು ಅಪರೂಪದ ಕೃತಿ, ಸಂಗೀತ ಮತ್ತು ಕಾವ್ಯದ ಸಂಗಮದ ಮೇರುಕೃತಿ ಎಂದು ‘ಋತು ದರ್ಶನ’ದ ವೈಶಿಷ್ಟ್ಯವನ್ನು ಬೇಂದ್ರೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಕೆ.ಎಸ್.ಶರ್ಮ ಬಣ್ಣಿಸಿದರು.
ಮುಂಬಯಿ ನಿವಾಸಿ, ಕನ್ನಡ ಲೇಖಕ ಡಾ.ಜೀವಿ ಕುಲಕರ್ಣಿ ‘ಋತು ದರ್ಶನ’ ಪುಸ್ತಕ ಬಿಡುಗಡೆ ಮಾಡಿದರು. ಕವಿ ಕೆ.ರಾಘವೇಂದ್ರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೇಂದ್ರೆ ವ್ಯಕ್ತಿತ್ವ-ಕಾವ್ಯದ ಬಗ್ಗೆ ಮಾತನಾಡಿದ ಲೇಖಕ ರಂ.ಶಾ.ಲೋಕಾಪುರ- ಬೇಂದ್ರೆ ಜ್ಞಾನದ ಶಕ್ತಿಕೋಶವಾಗಿದ್ದರು. ಬೇಂದ್ರೆಯವರದು ನೆಪ ಮಾತ್ರದ ಕಾವ್ಯವಲ್ಲ . ಅಲ್ಲಿ ಯೋಗಿಯಾಬ್ಬನ ಸಾಧನೆಯ ಸುಳಿವು ಕಾಣುತ್ತದೆ ಎಂದರು.
ಬೇಂದ್ರೆ ಕೃತಿಗಳ ವಾರಸುದಾರ ವಾಮನ ಬೇಂದ್ರೆ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೇಂದ್ರೆ ಸಂಶೋಧನಾ ಸಂಸ್ಥೆಯ ಸಹ ನಿರ್ದೇಶಕರಾಗಿ ವಾಮನ ಬೇಂದ್ರೆ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಋತು ದರ್ಶನ’ ಸಂಕಲನದ ಸಂಪಾದಕಗಿರಿಯೂ ಅವರದೇನೆ.
ಹೆಣ್ಣೊಬ್ಬಳು ವಿವಿಧ ಋತುಗಳನ್ನು ಅನುಭವಿಸುವುದನ್ನು ‘ಋತು ದರ್ಶನ’ದಲ್ಲಿನ ಕವಿತೆಗಳು ಬಿಂಬಿಸಿವೆ. ‘ಋತು ದರ್ಶನ’ ಕೃತಿಯ ನಾಯಕಿ ಋತುವಿಲಾಸದ ಕುರಿತು ವರ್ಣಿಸುತ್ತಾಳೆ, ಹಾಡುತ್ತಾಳೆ, ಸಂಭ್ರಮಿಸುತ್ತಾಳೆ. ಆದರೆ, ಈ ನಾಯಕಿ ರಾಜಕುಮಾರಿಯಲ್ಲ ; ಆಕೆ ಓರ್ವ ದಲಿತ ಹೆಣ್ಣುಮಗಳು ಎಂದು ವಾಮನ ಬೇಂದ್ರೆ, ತಂದೆಯ ಕವಿತೆಗಳನ್ನು ವಿಶ್ಲೇಷಿಸಿದರು.
ಬೇಂದ್ರೆ ಹುಟ್ಟುಹಬ್ಬ ಅರ್ಥಪೂರ್ಣವಾದುದು ಹೀಗೆ.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಸಾಧನ ಕೇರಿಯ ಶ್ರಾವಣ ಪ್ರತಿಭೆ ಬೇಂದ್ರೆ!
ಮುಖಪುಟ / ವಾರ್ತೆಗಳು












Click it and Unblock the Notifications