ಮೇಲ್ಮನೆ ಚುನಾವಣೆ:‘ಕೈ’ ಮುಂದು,‘ಕಮಲ’-‘ದಳ’ಗಳ ಗಳಗಳ
ಮೇಲ್ಮನೆ ಚುನಾವಣೆ:'ಕೈ" ಮುಂದು,'ಕಮಲ"-'ದಳ"ಗಳ ಗಳಗಳ ಪ್ರಕಟಿತ ಸ್ಥಾನ- 22, ಕಾಂಗ್ರೆಸ್- 18, ಜಾ.ದಳ- 2, ಪ್ರ.ಜ.ದ- 2
ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಡಿ. 01ರಂದು ನಡೆದ ನಡೆದ ಚುನಾವಣೆಯ ಬಹುತೇಕ ಫಲಿತಾಂಶ ಹೊರಬಿದ್ದಿದ್ದು, ಪ್ರಕಟಿತ 22 ಸ್ಥಾನಗಳ ಪೈಕಿ 18 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಪ್ರತಿಷ್ಠಿತ ಸ್ಥಾನವಾಗಿದ್ದ ಮದ್ದೂರಿನಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ತಮ್ಮ ಎಸ್.ಎಂ.ಶಂಕರ್ ಗೆದ್ದಿದ್ದಾರೆ. ಸಚಿವ ಟಿ.ಜಾನ್ ಸ್ಪರ್ಧಿಸಿರುವ ಮಡಿಕೇರಿ ಕ್ಷೇತ್ರದಲ್ಲಿ ಮತ ಎಣಿಕೆ ಗೊಂದಲದ ಕಾರಣ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ. ಮೈಸೂರಿನಲ್ಲಿ ಸಂಸದ ರಾಜಶೇಖರಮೂರ್ತಿ ಅಳಿಯ ಪಿ.ಚಿದಾನಂದ ಗೆಲ್ಲುವ ಮೂಲಕ ಜಾತ್ಯತೀತ ಜನತಾ ದಳಕ್ಕೆ ಜಯ ಸಂದಿದೆ. ಬೆಳಗಾವಿಯಲ್ಲಿ ಜಾತ್ಯತೀತ ಜನತಾ ದಳದ ಸತೀಶ ಜಾರಕಿ ಹೊಳಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಮೂಲಕ ದೇವೇಗೌಡರಿಗೆ ಮುಖಭಂಗವಾಗಿದೆ. ಧಾರವಾಡದಲ್ಲಿ ಅಖಿಲ ಭಾರತ ಪ್ರಗತಿಪರ ಜನತಾ ದಳದ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಕೋಲಾರ, ಬಳ್ಳಾರಿ, ಬೆಂಗಳೂರು ನಗರ, ಚಿಕ್ಕಮಗಳೂರು, ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಜಾತ್ಯತೀತ ಜನತಾ ದಳ ಹಾಗೂ ಅಖಿಲ ಭಾರತ ಪ್ರಗತಿಪರ ಜನತಾ ದಳಗಳಿಗೆ ತಲಾ 2 ಸ್ಥಾನಗಳಲ್ಲಿ ಜಯ ಸಿಕ್ಕಿದೆ. ಬುಧವಾರ (ಡಿ. 03) ಸಂಜೆ 5.30ರವರೆಗೆ ಉಳಿದ ಮೂರು ಸ್ಥಾನಗಳ ಫಲಿತಾಂಶ ಹೊರಬಿದ್ದಿಲ್ಲ. ಈ ಪೈಕಿ ಒಂದು ಮಡಿಕೇರಿಯದ್ದು, ಉಳಿದೆರಡು ಬಿಜಾಪುರ ಜಿಲ್ಲೆಯದ್ದು.
'ಸರ್ಕಾರದ ಕೆಲಸಕ್ಕೆ ಸಂದ ಜಯ"
ರಾಜ್ಯದ 25 ಸ್ಥಾನಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬಹುತೇಕ ಕಡೆ ಜಯ ಗಳಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಇದು ಸರ್ಕಾರದ ಕೆಲಸಕ್ಕೆ ಸಿಕ್ಕಿರುವ ಜಯ ಎಂದರು. ಪಕ್ಷವನ್ನು ಗೆಲ್ಲಿಸಿದ ಎಲ್ಲ ನಾಯಕರು ಹಾಗೂ ಮತದಾರರಿಗೆ ಕೃಷ್ಣ ಧನ್ಯವಾದ ಹೇಳಿದರು.
ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಆತ್ಮವಿಶ್ವಾಸ ಹೆಚ್ಚಿಸುವಂಥ ಗೆಲುವು ಇದು ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದರು. (ಇನ್ಫೋ ವಾರ್ತೆ)