ಇಫ್ತಾರ್ ಕೂಟ ರದ್ದು , ಕಲಾಂ ಮೇಲ್ಪಂಕ್ತಿ ಅನುಸರಿಸಿದ ಎಸ್ಸೆಂ.ಕೃಷ್ಣ
ಬೆಂಗಳೂರು : ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಮೇಲ್ಪಂಕ್ತಿಯನ್ನು ಅನುಸರಿಸಲು ಮುಂದಾಗಿರುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಈ ಬಾರಿಯ ಇಫ್ತಾರ್ ಕೂಟವನ್ನು ರದ್ದುಪಡಿಸಿದ್ದಾರೆ.
ಸಾಂಪ್ರದಾಯಿಕ ಇಫ್ತಾರ್ ಕೂಟವನ್ನು ರದ್ದು ಮಾಡಲು ನಿರ್ಧರಿಸುವ ಮುಖ್ಯಮಂತ್ರಿ ಕೃಷ್ಣ - ಔತಣ ಕೂಟಕ್ಕೆ ವೆಚ್ಚವಾಗಲಿದ್ದ ಐದು ಲಕ್ಷ ರುಪಾಯಿಗಳನ್ನು ಅನಾಥಾಶ್ರಮಗಳಿಗೆ ನೀಡುವರು. ಮೈಸೂರಿನ ಎರಡು, ಬೆಂಗಳೂರು ಹಾಗೂ ಗುಲ್ಬರ್ಗಾದ ತಲಾ ಒಂದು ಅನಾಥಾಶ್ರಮಗಳು ಇಫ್ತಾರ್ ಕೂಟ ರದ್ದಾದ ಕಾರಣದಿಂದ ಮಿಗುವ ಹಣದ ಫಲಾನುಭವಿಗಳು.
ಕಳೆದ ವಾರವಷ್ಟೇ, ಈ ಬಾರಿಯ ಇಫ್ತಾರ್ ಔತಣ ಕೂಟವನ್ನು ರದ್ದು ಮಾಡಿರುವುದಾಗಿ ರಾಷ್ಟ್ರಪತಿ ಕಲಾಂ ಪ್ರಕಟಿಸಿದ್ದರು. ಈ ಹಣವನ್ನು ಅನಾಥಾಶ್ರಮಗಳಿಗೆ ನೀಡುವುದಾಗಿಯೂ ಕಲಾಂ ಪ್ರಕಟಿಸಿದ್ದರು. ರಾಷ್ಟ್ರಪತಿಗಳ ಆದರ್ಶವನ್ನು ಪಾಲಿಸಲು ಮುಖ್ಯಮಂತ್ರಿ ಕೃಷ್ಣ ಮುಂದಾಗಿದ್ದಾರೆ ಎಂದು ವಿಧಾನಸೌಧದ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ , ರಾಜ್ಯದಲ್ಲಿನ ಬರದ ಕಾರಣ ಮುಖ್ಯಮಂತ್ರಿ ಕೃಷ್ಣ ತಮ್ಮ ವಿದೇಶಿ ಪ್ರವಾಸಗಳನ್ನು ರದ್ದುಪಡಿಸಿದ್ದರು. ಅದೇರೀತಿ, ಎರಡು ವರ್ಷಗಳ ಕಾಲ ಅದ್ದೂರಿ ದಸರಾ ಉತ್ಸವಕ್ಕೆ ರಾಜ್ಯ ಸರ್ಕಾರ ತಡೆ ಹಾಕಿತ್ತು .(ಪಿಟಿಐ)












Click it and Unblock the Notifications