ರಾಜ್ಯದ ಎಲ್ಲಾ ರಾಷ್ಟ್ರೀಯ ಉದ್ಯಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷಿದ್ಧ
ರಾಜ್ಯದ ಎಲ್ಲಾ ರಾಷ್ಟ್ರೀಯ ಉದ್ಯಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷಿದ್ಧ
ಪ್ಲಾಸ್ಟಿಕ್ ನಿಷೇಧ ಜಾರಿಗೆ ಹಂತಹಂತವಾಗಿ ಯತ್ನ
ಕಳೆದ ವರ್ಷ ನಗರದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್ ತಿಂದು 18 ಜಿಂಕೆಗಳು ಸತ್ತ ಹಿನ್ನೆಲೆಯಲ್ಲಿ ಅಲ್ಲಿ ಮಾತ್ರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿತ್ತು. ಇತರೆ ರಾಷ್ಟ್ರೀಯ ಉದ್ಯಾನಗಳಲ್ಲೂ ಇದೇ ಪರಿಸ್ಥಿತಿಯಿದ್ದು, ಪ್ಲಾಸ್ಟಿಕ್ ತ್ಯಾಜ್ಯದಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುವ ಅಪಾಯವಿರುವ ಕಾರಣ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಹಿರಿಯ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ.ರೈ ಪ್ಲಾಸ್ಟಿಕ್ ನಿಷೇಧದ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದರು. ರಾಷ್ಟ್ರೀಯ ಉದ್ಯಾನವನಗಳಿಗೆ ಬರುವ ಮಂದಿ ಪಿಕ್ನಿಕ್ ದೃಷ್ಟಿಯಲ್ಲೇ ಬರುವ ಪ್ರವಾಸಿಗರಾಗಿರುತ್ತಾರೆ. ಹೀಗಾಗಿ ಚೀಲ, ಲೋಟ- ತಟ್ಟೆ, ಕೊನೆಗೆ ಚಮಚದವರೆಗೆ ಎಲ್ಲಾ ಪ್ಲಾಸ್ಟಿಕ್ ಪದಾರ್ಥಗಳನ್ನು ತಂದು, ಉಪಯೋಗಿಸಿ ಬಿಸಾಡುವವರೇ ಹೆಚ್ಚು. ಹೀಗೆ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯ ಜೈವಿಕ ಗೊಬ್ಬರವಾಗುವುದಿಲ್ಲ. ಬದಲಿಗೆ ಮಣ್ಣಿನೊಳಗೆ ಸೇರುವ ವಿಷವಾಗುತ್ತದೆ. ಈ ತ್ಯಾಜ್ಯದ ವಿಲೇವಾರಿಯೂ ಸುಲಭದ ಕೆಲಸವಲ್ಲ ಎಂದು ರೈ ಹೇಳಿದರು.
ಪ್ಲಾಸ್ಟಿಕ್ ನಿಷೇಧವನ್ನು ಏಕಾಏಕಿ ಅನುಷ್ಠಾನಕ್ಕೆ ತರುವುದು ಸುಲಭದ ಮಾತಲ್ಲ. ಇದನ್ನು ಹಂತಹಂತವಾಗಿ ಜಾರಿಗೆ ತರುವ ಹಾದಿಯಲ್ಲಿ ನಾವಿದ್ದೇವೆ. ಈಗಾಗಲೇ ರಾಷ್ಟ್ರೀಯ ಉದ್ಯಾನಗಳ ಅಧಿಕಾರಿಗಳಿಗೆ ಪ್ಲಾಸ್ಟಿಕ್ ನಿಷೇಧಿಸಿ ಎಂದು ಸುತ್ತೋಲೆ ಹೊರಡಿಸಲಾಗಿದೆ. ಮೊದಲು ಪ್ರವಾಸಿಗರಿಗೆ ಪ್ಲಾಸ್ಟಿಕ್ ಬಳಸುವುದರಿಂದ ಆಯಾ ಪರಿಸರದಲ್ಲಿ ಆಗುತ್ತಿರುವ ಅಪಾಯಗಳನ್ನು ಮನವರಿಕೆ ಮಾಡಿಸಲು ತೀರ್ಮಾನಿಸಲಾಗಿದೆ. ಹಾಗೆ ತಿಳಿಸಿ ಹೇಳಿದ ನಂತರವೂ ಜನ ಪ್ಲಾಸ್ಟಿಕ್ ಬಳಕೆ ನಿಲ್ಲಿಸದೆ ಇದ್ದಲ್ಲಿ ದಂಡ ವಿಧಿಸುವ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications