ಮಂಗಳವಾರ ಸಿಎಂ ಎಸ್ಸೆಂ ಮನೆಗೆ ‘ದೇವೇಗೌಡ ಮಾರ್ಚ್’ !
ಮಂಗಳವಾರ ಸಿಎಂ ಎಸ್ಸೆಂ ಮನೆಗೆ ‘ದೇವೇಗೌಡ ಮಾರ್ಚ್’ !
ನಿಷೇಧವನ್ನು ಧಿಕ್ಕರಿಸಿ ದೇವೇಗೌಡರ ದಂಡು ಕೃಷ್ಣ ಮನೆಗೆ ಹೋಗಲಿದೆ
ಸೋಮವಾರ ಸುದ್ದಿಗಾರರ ಜೊತೆ ದೇವೇಗೌಡ ಮಾತಾಡುತ್ತಿದ್ದರು. ಹಾಸನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ. ತಮ್ಮ ಪಕ್ಷದವರೂ ಸೇರಿದಂತೆ ಅಮಾಯಕರನ್ನು ಪೊಲೀಸರು ಬೆಂಡೆತ್ತಿದ್ದರು. ಇದಕ್ಕೆ ತಕ್ಕ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮೂರು ಮನವಿ ಪತ್ರ ಬರೆದೆ. ಆದರೆ ಅದು ದಿವ್ಯ ನಿರ್ಲಕ್ಷ್ಯ ತೋರಿತು. ತಮ್ಮ ಪಕ್ಷ- ಜಾತ್ಯತೀತ ಜನತಾ ದಳದ ರಾಜ್ಯ ಘಟಕದ ಐದರಿಂದ ಹತ್ತು ಮುಖಂಡರೊಡನೆ ಈಗ ನೇರವಾಗಿ ಮುಖ್ಯಮಂತ್ರಿಗಳ ಮನೆಗೆ ಹೋಗಿ, ನ್ಯಾಯ ಕೇಳುವುದಾಗಿ ಹೇಳಿದ ಗೌಡರು ಯಾರಿಗೂ ಹೆದರುವುದಿಲ್ಲ. ಪೊಲೀಸರು ಏನು ಮಾಡುವರೋ ಮಾಡಲಿ ಎಂದು ಸವಾಲು ಹಾಕಿದರು.
ಹಾಸನದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಕೆಟ್ಟದಾಗಿ ದಂಡಿಸಿದ್ದಾರೆ. ಇದಕ್ಕೆ ಪೊಲೀಸರ ವಿರುದ್ಧ ತೆಗೆದುಕೊಳ್ಳಬೇಕಾದ ಕನಿಷ್ಠ ಕ್ರಮವನ್ನೂ ಸರ್ಕಾರ ತೆಗೆದುಕೊಂಡಿಲ್ಲ. ಕೃಷ್ಣ ಅವರದ್ದು ಕಳಪೆ ಅಧಿಕಾರ. ದೌರ್ಜನ್ಯ ತಪ್ಪಿಸಿ ಎಂಬ ಮೊರೆಯ ಪತ್ರಗಳ ಬಗ್ಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ಕರ್ತವ್ಯಚ್ಯುತಿಗೆ ಧಿಕ್ಕಾರ ಎಂದು ದೇವೇಗೌಡರು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಇನ್ನೂ ಎಲ್ಲೆಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ಚರ್ಚಿಸಲು ಅ. 29 ರಂದು ತಮ್ಮ ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರ ಸಭೆ ಕರೆದಿರುವುದಾಗಿ ಹೇಳಿದ ಗೌಡರು, ಮುಂದೇನು ಮಾಡಬೇಕು ಎಂಬುದನ್ನು ಸಭೆಯಲ್ಲಿ ತೀರ್ಮಾನಿಸಲಿದ್ದೇವೆ ಎಂದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications