ತ್ರಿಕೋನ ಕ್ರಿಕೆಟ್ ಸರಣಿ- ಲಕ್ಷ್ಮಣ್ ಒಳಕ್ಕೆ, ಮೊಂಗಿಯಾ ಹೊರಕ್ಕೆ
ತ್ರಿಕೋನ ಕ್ರಿಕೆಟ್ ಸರಣಿ- ಲಕ್ಷ್ಮಣ್ ಒಳಕ್ಕೆ, ಮೊಂಗಿಯಾ ಹೊರಕ್ಕೆ
ಗುಣಮುಖವಾಗದ ನೆಹ್ರಾ-ಸಾಳ್ವಿಗೆ ಅವಕಾಶ, ಪಾರ್ಥಿವ್ ತಂಡಕ್ಕೆ
ಭಾರತ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ಸರಣಿ ನಡೆಯಲಿದೆ. ಒಂದು ದಿನದ ಪಂದ್ಯಗಳಿಂದ ಕೊಕ್ ಪಡೆದಿದ್ದ ಲಕ್ಷ್ಮಣ್ ಮರಳಿ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಒಂದು ವರ್ಷದ ನಂತರ ಕಾರ್ತಿಕ್ ಆಯ್ಕೆ ಮಂಡಳಿಯ ಗಮನ ಸೆಳೆದಿದ್ದಾರೆ. ವಿಶೇಷ ಛಾಪನ್ನು ಮೂಡಿಸುವಲ್ಲಿ ವಿಫಲರಾಗಿರುವ ಕಾರಣ ಬ್ಯಾಟ್ಸ್ಮನ್ ದಿನೇಶ್ ಮೊಂಗಿಯಾಗೆ ಈ ಬಾರಿ ತಂಡದಲ್ಲಿ ಅವಕಾಶ ಇಲ್ಲ. ವೇಗಿ ಅವಿಷ್ಕಾರ್ ಸಾಳ್ವಿಗೆ ಅವಕಾಶ ನೀಡಲಾಗಿದೆಯಾದರೂ, ಅವರ ದೇಹ ಸಾಮರ್ಥ್ಯವನ್ನು ನೋಡಿಕೊಂಡು ಆಡುವ ಅವಕಾಶ ಕೊಡಲಾಗುವುದು.
ವಿಕೆಟ್ ಕಾಯುವ ಕೆಲಸ ನನಗೆ ಸಾಕು ಎಂಬ ರಾಹುಲ್ ದ್ರಾವಿಡ್ ಮನವಿಗೆ ಆಯ್ಕೆ ಮಂಡಳಿಯೇನೋ ಸ್ಪಂದಿಸಿದೆ. ಆದರೆ ಅಂತಿಮವಾಗಿ ಆಡಲಿರುವ 11 ಮಂದಿ ತಂಡದಲ್ಲಿ ಪಾರ್ಥಿವ್ ಪಟೇಲ್ಗೆ ಸ್ಥಾನ ಸಿಕ್ಕುವುದರ ಬಗ್ಗೆ ಮಂಡಳಿ ಏನೂ ಹೇಳಲಿಲ್ಲ.
ಶುಕ್ರವಾರ (ಅ. 17) ಕ್ರಿಕೆಟ್ ಆಯ್ಕೆ ಮಂಡಳಿಯ ಕಾರ್ಯದರ್ಶಿ ಎಸ್.ಕೆ.ನಾಯರ್ ತಂಡವನ್ನು ಪ್ರಕಟಿಸಿದರು. ಆಶಿಶ್ ನೆಹ್ರಾ ಹೆಸರು ಆಯ್ಕೆಯ ಸಂದರ್ಭದಲ್ಲಿ ಕೇಳಿ ಬಂದಿತಾದರೂ, ಮೊಣಕಾಲಿನ ನೋವಿನಿಂದ ಆತ ಇನ್ನೂ ಪೂರ್ಣ ಗುಣಮುಖವಾಗಿಲ್ಲದ ಕಾರಣ ಇನ್ನಷ್ಟು ಕಾಲ ವಿಶ್ರಾಂತಿ ಕೊಡಲು ಮಂಡಳಿ ತೀರ್ಮಾನಿಸಿತು.
ತಂಡ ಇಂತಿದೆ-
ಸೌರವ್ ಗಂಗೂಲಿ (ನಾಯಕ), ರಾಹುಲ್ ಡ್ರಾವಿಡ್ (ಉಪ ನಾಯಕ), ಸಚಿನ್ ತೆಂಡೂಲ್ಕರ್, ವೀರೇಂದ್ರ ಶೆವಾಗ್, ವಿವಿಎಸ್ ಲಕ್ಷ್ಮಣ್, ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ, ಜಾಹಿರ್ ಖಾನ್, ಅಜಿತ್ ಅಗರ್ಕರ್, ಮುರಳಿ ಕಾರ್ತಿಕ್ ಹಾಗೂ ಅವಿಷ್ಕಾರ್ ಸಾಳ್ವಿ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications