ನಾಟಕಕಾರರು ಶ್ರೀರಂಗರಿಗೆ ಋಣಿಯಾಗಿರಬೇಕು-ಕಾರ್ನಾಡ್
ನಾಟಕಕಾರರು
ಶ್ರೀರಂಗರಿಗೆ
ಋಣಿಯಾಗಿರಬೇಕು-ಕಾರ್ನಾಡ್
‘ಶ್ರೀರಂಗ
ನಮಸ್ಕಾರ’ದಲ್ಲಿ
ರಂಗ
ಮಾತು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ಆಯೋಜಿಸಿದ್ದ ಶ್ರೀರಂಗರ ಜನ್ಮ ಶತಮಾನೋತ್ಸವ ‘ಶ್ರೀರಂಗ ನಮಸ್ಕಾರ’ ದ ಸಮಾರೋಪ ಸಮಾರಂಭದಲ್ಲಿ ಕಾರ್ನಾಡ್ ಮಂಗಳವಾರ (ಸೆ.30) ಮಾತಾಡಿದರು.
ಶ್ರೀರಂಗರ ‘ಕತ್ತಲೆ- ಬೆಳಕು’ ನಾಟಕ ಕನ್ನಡ ರಂಗಭೂಮಿಯಲ್ಲಿ ಹೊಸ ಯುಗ ಪ್ರಾರಂಭವಾಗಲು ಕಾರಣವಾಯಿತು. ಅನೇಕ ವೈಚಾರಿಕ ನಾಟಕಗಳನ್ನು ರಚಿಸುವ ಮೂಲಕ ರಂಗಭೂಮಿ ಬೆಳೆಯಲು ಕಾರಣರಾದ ಅವರು ಕೊನೆಯವರೆಗೂ ನಾಟಕ ಕ್ಷೇತ್ರಕ್ಕೆ ನಿಷ್ಠರಾಗಿದ್ದರು ಎಂದ ಕಾರ್ನಾಡ್, ಶ್ರೀರಂಗರ ಜೊತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡರು.
ನನ್ನ ತಂದೆ ಶ್ರೀರಂಗರಿಗೆ ನಾಟಕವೇ ಕುಟುಂಬವಾಗಿತ್ತು. ಇವತ್ತು ಆ ಕುಟುಂಬದವರೇ ಅವರ ಜನ್ಮ ಶತಮಾನೋತ್ಸವ ಆಚರಿಸುತ್ತಿರುವುದು ಸಂತೋಷವಾಗುತ್ತಿದೆ. ಬರಹಗಾರರು ಉಳಿದವರಿಗಿಂತ ಸಾಮಾನ್ಯವಾಗಿ ಒಂದು ಹೆಜ್ಜೆ ಮುಂದಿರುತ್ತಾರೆ. ಆದರೆ ಅಪ್ಪ ಎರಡು ಮೂರು ಹೆಜ್ಜೆ ಮುಂದಿದ್ದರು. ಒಳ್ಳೆಯ ಚಲನಚಿತ್ರಗಳು ಇಲ್ಲವಾಗಿರುವ ಈ ದಿನಗಳಲ್ಲಿ ರಂಗಭೂಮಿ ಜನರಿಗೆ ಬೇಕಾದ ಸತ್ವಯುತ ಕಾರ್ಯಕ್ರಮ ಕೊಡಬಲ್ಲುದು ಎಂದು ಲೇಖಕಿ ಶಶಿ ದೇಶಪಾಂಡೆ ಹೇಳಿದರು.
ನಾಟಕ ತಿರುಗಾಟ : 8 ಜಿಲ್ಲೆಗಳ ಯುವ ನಿರ್ದೇಶಕರಿಂದ ನಾಟಕಗಳನ್ನು ನಿರ್ದೇಶಿಸಿ, ತಿರುಗಾಟದ ಮೂಲಕ ಪ್ರದರ್ಶಿಸುವ ಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಕಿಕೊಂಡಿದೆ. ಪಂಪನ ರಚನೆ ಆಧರಿಸಿದ 12 ನಾಟಕಗಳನ್ನೂ ಪ್ರದರ್ಶನಕ್ಕೆ ಸಿದ್ಧಪಡಿಸಲಾಗಿದೆ ಎಂದು ಇಲಾಖೆ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ ತಿಳಿಸಿದರು.
ತರಪೇತಿ : ನಾಟಕದ ಮೇಷ್ಟ್ರುಗಳಿಗೆ ಮೂರು ತಿಂಗಳ ಅವಧಿಯ ರಂಗಭೂಮಿ ತರಪೇತಿ ಕಾರ್ಯಕ್ರಮವನ್ನು ರಾಷ್ಟ್ರೀಯ ನಾಟಕ ಶಾಲೆ ಹಮ್ಮಿಕೊಂಡಿದೆ ಎಂದು ಶಾಲೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರದ ನಿರ್ದೇಶಕ ಸುರೇಶ್ ಆನಗಳ್ಳಿ ಸಮಾರಂಭದಲ್ಲಿ ಹೇಳಿದರು.
ರಂಗಕರ್ಮಿಗಳಾದ ಶಶಿಧರ ಬಾರಿಘಾಟ್ ಹಾಗೂ ಶ್ರೀನಿವಾಸ ಜಿ. ಕಪ್ಪಣ್ಣ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದ ನಂತರ ಮೈಸೂರಿನ ರಂಗಾಯಣದ ಕಲಾವಿದರು ಬಿ.ವಿ.ಕಾರಂತ ನಿರ್ದೇಶಿಸಿರುವ ಶ್ರೀರಂಗರ ‘ಕತ್ತಲೆ- ಬೆಳಕು’ ನಾಟಕ ಪ್ರದರ್ಶಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು