ರಾಜ್ಯಸಭೆಗೆ ಇಸ್ರೋದ ಕಸ್ತೂರಿರಂಗನ್, ಹೇಮಾ ಮಾಲಿನಿ ನೇಮಕ
ರಾಜ್ಯಸಭೆಗೆ ಇಸ್ರೋದ ಕಸ್ತೂರಿರಂಗನ್, ಹೇಮಾ ಮಾಲಿನಿ ನೇಮಕ
ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಕೆಲಸಕ್ಕೆ ಕಸ್ತೂರಿ ರಂಗನ್ ಆದ್ಯತೆ
ಬೆಂಗಳೂರು: ಇಸ್ರೋ ಅಧ್ಯಕ್ಷ ಡಾ. ಕೆ. ಕಸ್ತೂರಿ ರಂಗನ್ ಅವರನ್ನು ಕೇಂದ್ರ ಸರ್ಕಾರ ರಾಜ್ಯಸಭೆ ಸದಸ್ಯತ್ವಕ್ಕೆ ನಾಮಕರಣ ಮಾಡಿದ್ದು - ಶಿಕ್ಷಣ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರವನ್ನು ಮುಖ್ಯ ಕಾರ್ಯವಲಯವನ್ನಾಗಿಟ್ಟುಕೊಂಡು ತಾವು ಕೆಲಸ ಮಾಡುವುದಾಗಿ ರಾಜ್ಯ ಸಭೆಗೆ ನೇಮಕಗೊಂಡ ಸಂದರ್ಭದಲ್ಲಿ ಕಸ್ತೂರಿ ರಂಗನ್ ಹೇಳಿದ್ದಾರೆ.
ರಾಜ್ಯಸಭೆಗೆ ನೇಮಕಗೊಂಡಿರುವುದರಿಂದ ತಮಗೆ ಅಪಾರ ಸಂತೋಷ ಉಂಟಾಗಿದೆ ಎಂದು ಆ. 28ರ ಗುರುವಾರ ಸುದ್ದಿಗೋಷ್ಠಿಯಲ್ಲಿ ಕಸ್ತೂರಿರಂಗನ್ ತಮ್ಮ ಸಂತಸ ಹಂಚಿಕೊಂಡರು. ವಿಜ್ಞಾನ ಮತ್ತು ತಂತ್ರಜ್ಞಾನ ನನಗೆ ಇಷ್ಟವಾಗಿರುವ ವಿಷಯಗಳು. ಈ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ಕಸ್ತೂರಿ ರಂಗನ್ ಪುನರುಚ್ಚರಿಸಿದರು.
ತಮ್ಮನ್ನು ರಾಜ್ಯಸಭೆಗೆ ನೇಮಕ ಮಾಡಿರುವುದಕ್ಕೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ರಾಷ್ಟ್ರಪತಿ ಮತ್ತು ದೇಶದ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ಜನರು ತಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುವೆ ಎಂದು ಕಸ್ತೂರಿ ರಂಗನ್ ಭರವಸೆ ನೀಡಿದರು.
ರಾಜ್ಯಸಭೆಗೆ ನೇಮಕ : ಇಸ್ರೋದ ಕಸ್ತೂರಿ ರಂಗನ್ ಸೇರಿದಂತೆ ಏಳು ಮಂದಿ ಗಣ್ಯರನ್ನು ರಾಜ್ಯಸಭೆಗೆ ನೇಮಕ ಮಾಡಿದ ಪ್ರಕಟಣೆಯನ್ನು ಕೇಂದ್ರ ಸರ್ಕಾರ ಗುರುವಾರ ಹೊರಡಿಸಿದೆ. ಆರ್ಬಿಐ ಗವರ್ನರ್ ಬಿಮಲ್ ಜಲನ್, ಬಾಲಿವುಡ್ ತಾರೆ ಹೇಮಾ ಮಾಲಿನಿ, ದಾರಾ ಸಿಂಗ್, ಪಯೋನಿರ್ ಸಂಪಾದಕ ಚಂದನ್ ಮಿತ್ರ, ಹಿಂದಿ ವಿದ್ವಾಂಸ ವಿದ್ಯಾನಿವಾಸ್ ಮಿಶ್ರ ಹಾಗೂ ಸಾಮಾಜಿಕ ಕಾರ್ಯಕರ್ತ ನಾರಾಯಣ್ ಸಿಂಗ್ ರಾಜ್ಯಸಭೆಗೆ ನೇಮಕಗೊಂಡ ಗಣ್ಯರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications