ಜ್ಞಾನ ಸಹ್ಯಾದ್ರಿಯ ಸ್ವಾತಂತ್ರ್ಯ ವರ್ಧಂತಿ
ಜ್ಞಾನ
ಸಹ್ಯಾದ್ರಿಯ
ಸ್ವಾತಂತ್ರ್ಯ
ವರ್ಧಂತಿ
ಭಾರತೀಯ
ವಿದ್ಯಾ
ಭವನದ
ಮತ್ತೂರು
ನಂದಕುಮಾರ್
ಹಾಗೂ
ಶಿಕಾರಿಪುರ
ಹರಿಹರೇಶ್ವರ
ತಮ್ಮದೇ
ಆದ
ಶೈಲಿಯಲ್ಲಿ
ಸ್ವಾತಂತ್ರ್ಯ
ಪೂರ್ವದ
ಪುಟಗಳನ್ನು
ತಿರುವಿ
ಹಾಕಿದರು.
ಶಿವಮೊಗ್ಗದ ಕುವೆಂಪು ವಿವಿಯ ಜ್ಞಾನ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಆಗಸ್ಟ್ 15ರಂದು 57ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಭಾರತೀಯ ವಿದ್ಯಾ ಭವನದ ಲಂಡನ್ ಶಾಖೆಯ ನಿರ್ದೇಶಕ ಡಾ. ಮತ್ತೂರು ನಂದ ಕುಮಾರ್ ಸ್ವಾತಂತ್ರ್ಯ ಹಬ್ಬದ ಮುಖ್ಯ ಆತಿಥಿ. ಧ್ವಜಾರೋಹಣ, ಸಿಹಿ ಹಂಚಿಕೆ, ದೇಶ ಭಕ್ತಿ ಗೀತೆಗಳು ಸ್ವಾತಂತ್ರ್ಯ ಉತ್ಸವದ ಖುಷಿಯ ವಾತಾವರಣವನ್ನು ನಿರ್ಮಿಸಿದರೆ, ಡಾ. ನಂದಕುಮಾರ್ ತಮ್ಮ ಉಪನ್ಯಾಸದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರನ್ನು ನೆನೆದು, ಇತಿಹಾಸದ ಪುಟಗಳನ್ನು ತಿರುವಿ ಹಾಕಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರ ಮನಸ್ಸಿನಲ್ಲಿ ರಾಷ್ಟ್ರಕ್ಕೋಸ್ಕರ ಏನನ್ನಾದರೂ ಮಾಡುವ ಅರ್ಪಣಾ ಮನೋಭಾವ, ಸ್ವಾತಂತ್ರ್ಯ ಹೋರಾಟದಲ್ಲಿನ ಬದ್ಧತೆ, ಜಾತ್ಯತೀತ ನಿಲುವು ಹಾಗೂ ಪ್ರಜಾ ಸತ್ತಾತ್ಮಕ ಮೌಲ್ಯಗಳು ಮನೆ ಮಾಡಿದ್ದವು ಎಂಬುದನ್ನು ಸಮರ್ಥಿಸಲು ನಂದಕುಮಾರ್ ರಾಷ್ಟ್ರಪಿತ ಗಾಂಧೀಜಿಯ ಬದುಕನ್ನೇ ಉದಾಹರಣೆಯಾಗಿ ಕೊಟ್ಟರು. ಗಾಂಧೀಜಿ ಬದುಕಿನ ಹಲವು ಘಟನೆಗಳನ್ನು ಮೆಲುಕು ಹಾಕಿದರು. ಕುವೆಂಪು ವಿಶ್ವ ವಿದ್ಯಾಲಯ ಉನ್ನತ ಶಿಕ್ಷಣ ನೀಡುತ್ತಾ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು ಎಂದು ಹಾರೈಸಿದ ನಂದಕುಮಾರ್, ಭಾರತ ಕುರಿತ ತಮ್ಮ ಸ್ವರಚಿತ ಗೀತೆ ಹಾಡಿದರು.
ಮತ್ತೊಬ್ಬ ಮುಖ್ಯ ಅತಿಥಿ ಶಿಕಾರಿಪುರ ಹರಿಹರೇಶ್ವರ ಮಾತನಾಡಿ ಮೂರು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದರು. ಸ್ವಾತಂತ್ರ್ಯ ಹೋರಾಟದ ಹಿಂದಿದ್ದ ಮೌಲ್ಯಗಳು ಮತ್ತು ಸ್ಫೂರ್ತಿಯ ಬಗ್ಗೆ ಹೇಳುತ್ತಾ, ಧ ರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳ ಹಿನ್ನೆಲೆಯಲ್ಲಿ ಸ್ವಾತಂತ್ರ್ಯದ ಮೌಲ್ಯವನ್ನು ಬಿಡಿಸಿ ಹೇಳಿದರು. ಎರಡನೆಯದಾಗಿ, ಅಮೆರಿಕಾದಲ್ಲಿ ಕನ್ನಡಿಗರು ಹರಡುತ್ತಿರುವ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಮೌಲ್ಯಗಳ ಪರಿಚಯ ಮಾಡಿಕೊಟ್ಟರು. ಕಡಲಾಚೆ ನೆಲೆಸಿಯೂ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿರುವ ಬರಹಗಾರರ ಕುರಿತು ಹೇಳಿದ ನಂತರ ತಮ್ಮ ‘ವಿದೇಶಕ್ಕೆ ಬಂದವರು’ ಕವನವನ್ನು ಓದಿದರು. ಅನಿವಾಸಿ ಕನ್ನಡಿಗನೊಬ್ಬನ ಅನುಭವವನ್ನು ಬಿಚ್ಚಿಡುವ ಸುಂದರ ಕವನ ವಿದೇಶಕ್ಕೆ ಬಂದವರು. ಕವನದಲ್ಲಿ ಹರಿಯವರು ಅಮೆರಿಕಾ ಯಾನವನ್ನು ಸಂತೆ, ಜಾತ್ರೆ ಹಾಗೂ ಯಾತ್ರೆಗೆ ಹೋಲಿಸಿದ್ದಾರೆ.
ಕುವೆಂಪು ವಿವಿಯ ಉಪಕುಲಪತಿ ಪ್ರೊ. ಕೆ. ಚಿದಾನಂದ ಗೌಡ ಅಧ್ಯಕ್ಷ ಭಾಷಣ ಮಾಡಿದರು. ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರಿಗೆ ದೇಶ ಋಣಿಯಾಗಿರಬೇಕಾಗಿರುವುದನ್ನು ಚಿದಾನಂದಗೌಡ ನೆನಪಿಸಿಕೊಟ್ಟರು. ಇನ್ನು ಕೆಲವು ವರ್ಷಗಳಲ್ಲಿ ಕುವೆಂಪು ವಿಶ್ವ ವಿದ್ಯಾಲಯ ಉತ್ತಮ ಶಿಕ್ಷಣಕ್ಕೆ ಪರ್ಯಾಯ ಸಂಸ್ಥೆಯಾಗಿ ರೂಪುಗೊಳ್ಳುವ ಕನಸು ಕಂಡರು.
ಸಮಾಜಶಾಸ್ತ್ರ ವಿಭಾಗದ ಪ್ರೊಫೆಸರ್ ವಿಘ್ನೕಶ್ ಎನ್.ಭಟ್ ಸ್ವಾಗತ ಭಾಷಣ ಮಾಡಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ದೈಹಿಕ ಶಿಕ್ಷಣ ವಿಭಾಗದ ಗುಸ್ತಿ ಅವರು ವಂದನಾರ್ಪಣೆ ಸಲ್ಲಿಸಿದರು. ವಿವಿಯ ರಿಜಿಸ್ಟ್ರಾರ್ ಪ್ರವೀಣ್ ಚಂದ್ರಪಾಂಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖಪುಟ / ವಾರ್ತೆಗಳು