ಕರ್ನಾಟಕದ ಎಚ್ಕೆಯಿಂದ ಆಂಧ್ರ ಸಿಎಂ ತರಾಟೆಗೆ
ಬೆಂಗಳೂರು : ಕಾನೂನು ಬದ್ಧವಾಗಿರುವ ಚಿತ್ರಾವತಿ ಕುಡಿಯುವ ನೀರಿನ ಯೋಜನೆಯನ್ನು ಅಕ್ರಮ ಎಂದು ಹೇಳುವ ಮೂಲಕ ಕರ್ನಾಟಕದ ಮೇಲೆ ಆಂಧ್ರಪ್ರದೇಶ ಹುರುಳಿಲ್ಲದ ಸ್ವಾರ್ಥ ಆರೋಪ ಮಾಡುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ತರಾಟೆಗೆ ತೆಗೆದುಕೊಂಡರು.
ಶುಕ್ರವಾರ (ಮೇ 30) ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಿದ್ದ ಎಚ್.ಕೆ.ಪಾಟೀಲ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೋಲಾರದಲ್ಲಿ ನಡೆಯುತ್ತಿರುವ ಚಿತ್ರಾವತಿ ಕುಡಿಯುವ ನೀರು ಪೂರೈಕೆ ಯೋಜನೆಯ ಕುರಿತು ಬೇಜವಾಬ್ದಾರಿಯಿಂದ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಇದು ಸಂವಿಧಾನಕ್ಕೆ ಮಾಡಿರುವ ಅವಮಾನ ಎಂದು ಕಿಡಿ ಕಾರಿದರು.
ಬಚಾವತ್ ನ್ಯಾಯಾಧಿಕರಣದ ಆದೇಶವನ್ನು ಗಾಳಿಗೆ ತೂರಿ, ಸುಪ್ರಿಂಕೋರ್ಟಿನ ನಿರ್ದೇಶನಗಳನ್ನೂ ಗಣನೆಗೆ ತೆಗೆದುಕೊಳ್ಳದೆ ತೆಲುಗು ಗಂಗಾ ಯೋಜನೆಯನ್ನು ಅಕ್ರಮವಾಗಿ ಮಾಡಿದ್ದು ಆಂಧ್ರಪ್ರದೇಶ. ಆಗ ನಾವು ನೀವು ಮಾಡುತ್ತಿರುವುದು ಸರಿಯಲ್ಲ ಅಂತ ಪದೇಪದೇ ಅಲವತ್ತುಕೊಂಡರೂ ಚಂದ್ರಬಾಬು ನಾಯ್ಡು ಕಿವಿಮೇಲೆ ಹಾಕಿಕೊಳ್ಳಲಿಲ್ಲ. ಈಗ ಕಾನೂನು ಬದ್ಧವಾದ ನಮ್ಮ ಕೆಲಸವನ್ನು ಅಕ್ರಮ ಎಂದು ಹುಯಿಲೆಬ್ಬಿಸತೊಡಗಿದ್ದಾರೆ ಎಂದು ಪಾಟೀಲ್ ಕೋಪ ಹೊರ ಹಾಕಿದರು.
ಆಂಧ್ರಪ್ರದೇಶದ ಸಂಸದರ ನಿಯೋಗ ಸೋಮವಾರ (ಮೇ 26) ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಪ್ರಧಾನಿ ಎ.ಬಿ.ವಾಜಪೇಯಿ ಅವರನ್ನು ಭೇಟಿಯಾಗಿ, ಕರ್ನಾಟಕದ ಚಿತ್ರಾವತಿ ಕುಡಿಯುವ ನೀರಿನ ಯೋಜನೆ ಅಕ್ರಮವಾದದ್ದು ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿರುದ್ಧ ಕಿಡಿ ಕಾರಿದ ಪಾಟೀಲ್, ಸದ್ಯದಲ್ಲೇ ಪ್ರಧಾನಿ ಮತ್ತು ರಾಷ್ಟ್ರಪತಿಯವರಿಗೆ ಚಿತ್ರಾವತಿ ಯೋಜನೆಯ ವಿವರಗಳನ್ನು ಕೊಡಲಿದ್ದೇವೆ ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications