ಬೇಸಗೆ ರಜೆಯಲ್ಲಿ ಕೆಲಸ ಅರಸುತ್ತಿರುವ ಬೆಂಗ್ಳೂರು ವಿದ್ಯಾರ್ಥಿ
ಉದ್ಯಮಗಳ ಅಂಗಳದಲ್ಲಿ ಹಣದ ಹೊಳೆಯೇ ಹರಿಯುವ ಈ ಮಾಯಾನಗರಿ ಬೆಂಗಳೂರಿನಲ್ಲಿ ಅವಕಾಶಗಳನ್ನು ಬಾಚಿಕೊಂಡವನೇ ಜಾಣ. ಈ ಮಾತನ್ನು ನಗರದ ವಿದ್ಯಾರ್ಥಿಗಳೂ ಅರ್ಥ ಮಾಡಿಕೊಂಡಿದ್ದಾರೆ. ಈಗ ಕಾಲೇಜುಗಳಲ್ಲಿ ಪರೀಕ್ಷೆಗಳು ಮುಗಿಯುತ್ತಲೇ ಅಲ್ಪಾವಧಿ ಉದ್ಯೋಗದ ಬೇಟೆಗೆ ಹೊರಟಿದ್ದಾರೆ.
ಈ ಅಲ್ಪಾವಧಿ ಕೆಲಸಗಳು ವಿದ್ಯಾರ್ಥಿ ಜೀವನದಲ್ಲಿಯೇ ನೌಕರಿ ರಂಗದ ಅನುಭವ ನೀಡುವ ಸ್ಯಾಂಪಲ್. ಜೊತೆಗೆ ಸ್ವಂತ ದುಡಿಮೆಯ ಹಣದ ಮಹತ್ವದ ಅರಿವು. ಪದವಿ, ಸ್ನಾತಕೋತ್ತರ ಪದವಿಗಳನ್ನು ಓದುತ್ತಿರುವ ವಿದ್ಯಾರ್ಥಿಗಳು ಅರಸುವ ನೌಕರಿಗಳು ಇಂತಹುದೇ ಆಗಬೇಕೆಂದಿಲ್ಲ. ಕಾಫಿ ಕೆಫೆಯಲ್ಲಿ ಬಿಲ್ ಬರೆಯುವುದು, ಚಾಟ್ ಹೌಸ್ಗಳಲ್ಲಿ ದುಡಿಯುವುದು, ಫುಡ್ ವರ್ಲ್ಡ್ನಲ್ಲಿ ಗ್ರಾಹಕರಿಗೆ ನೆರವಾಗುವುದು, ಹುಡುಗಿಯರಾದರೆ ಡೇಟಾ ಎಂಟ್ರಿ, ರಿಸೆಪ್ಶನ್, ವಸ್ತು ಪ್ರದರ್ಶನಗಳಲ್ಲಿ, ಫ್ಯಾನ್ಸಿ ಸ್ಟೋರ್ಗಳಲ್ಲಿ ತಮ್ಮ ರಜೆಯ ದುಡಿಮೆಯನ್ನು ಕಂಡುಕೊಳ್ಳುತ್ತಾರೆ.
ರಜೆಯಲ್ಲಿ ದುಡಿಯುವುದೆಂದರೆ ಬಡತನದ ಪ್ರತೀಕ ಎಂದೇನಲ್ಲ. ಈಗಿನ ಮಕ್ಕಳು ಬುದ್ಧಿ ತಿಳಿಯುತ್ತಲೇ ಸ್ವಂತ ದುಡಿಮೆಯ ಬಗ್ಗೆ ಯೋಚನೆ ಮಾಡುವುದಕ್ಕೆ ಶುರುಮಾಡುತ್ತಾರೆ. ರಜೆಯಲ್ಲಿ ಕೆಲಸ ಮಾಡುವುದರಿಂದ ಅವರಿಗೆ ಹೊರಗಿನ ಸ್ಪರ್ಧಾತ್ಮಕ ಪ್ರಪಂಚದ ಅರಿವಾಗುತ್ತದೆ. ಕಾಲೇಜು ಮುಗಿಸಿದ ನಂತರ ಹೊರಗಿನ ಪ್ರಪಂಚದತ್ತ ಕಣ್ಣು ಹಾಯಿಸುವುದಕ್ಕಿಂತ, ಮುಂಚಿತವಾಗಿಯೇ ಇಂತಹ ಅನುಭವಗಳಿದ್ದರೆ ಅವರಿಗೆ ವಾಸ್ತವತೆಯ ಅರಿವಾಗುತ್ತದೆ ಎನ್ನುತ್ತಾರೆ ಜಯನಗರದ ವೈದ್ಯೆ ನಿರುಪಮಾ. ನಿರುಪಮಾ ಅವರ ಮಗಳು ಡೇಟಾ ಎಂಟ್ರಿ ಕೆಲಸಕ್ಕಾಗಿ ಹತ್ತಿರದ ಸಾಫ್ಟ್ವೇರ್ ಕಂಪೆನಿ ಸೇರಿದ್ದಾಳೆ.
ಉದ್ಯಮಗಳೂ ಅಷ್ಟೆ. ತುಸು ಕಡಿಮೆ ವೇತನದಲ್ಲಿ ಅಲ್ಪವಾಧಿ ಕೆಲಸಕ್ಕೆ ಬರುವ ವಿದ್ಯಾರ್ಥಿಗಳ ಬೇಟೆಯಲ್ಲಿ ತೊಡಗಿರುತ್ತವೆ. ಬೆಂಗಳೂರಿನಲ್ಲಿ ಈಗ ಉದ್ಯಮಕ್ಕೂ ಲಾಭ , ವಿದ್ಯಾರ್ಥಿಗೂ ಲಾಭ ತರುವ ಹೊಸದೊಂದು ಬಿಸಿನೆಸ್ ಭರಾಟೆ.
(ಇನ್ಫೋವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...