ಹರಿಹರ ಸರ್ಕಾರಿಆಸ್ಪತ್ರೇಲಿ ಆಪರೇಷನ್ನಿಗೂ ನೀರಿಲ್ಲ !
ಹರಿಹರ : ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನೀರಿನ ಅಭಾವವಿರುವ ಕಾರಣ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಹೆಣಗಾಡುತ್ತಿದ್ದಾರೆ.
ದಿನಂಪ್ರತಿ ಐದರಿಂದ ಆರು ಸಿಝೇರಿಯನ್ ಶಸ್ತ್ರಚಿಕಿತ್ಸೆ ನಡೆಯುವ ಈ ಆಸ್ಪತ್ರೆ ಸಿಬ್ಬಂದಿ ಬಕೀಟು ಹಿಡಿದು ಅಕ್ಕ- ಪಕ್ಕದ ಕೇರಿಗಳಲ್ಲಿ ನೀರಿಗೆ ಅಂಗಲಾಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಿದ್ದೂ ನೀರು ಸರಬರಾಜಿನ ವಿಷಯದಲ್ಲಿ ಪುರಸಭೆ ತಣ್ಣಗೆ ಕೂತಿದೆ.
ಈ ಆಸ್ಪತ್ರೆಗೆ ಸುತ್ತಮುತ್ತಲ ಹಳ್ಳಿಗಳವರೂ ಸೇರಿದಂತೆ 150 ರೋಗಿಗಳು ಪ್ರತಿನಿತ್ಯ ಬಂದು ಸೇರುತ್ತಾರೆ. 250 ಹೊರರೋಗಿಗಳಿಗೆ ಚಿಕಿತ್ಸೆ ಕೊಟ್ಟು ಕಳುಹಿಸಲಾಗುತ್ತೆ. ಆಸ್ಪತ್ರೆಯಲ್ಲಿರುವವರಿಗೆ ಹಣ್ಣು- ಹಂಪಲು ತಂದು ಕೊಡುವ ಬದಲು ನೀರು ತರಬೇಕಾದ ಸ್ಥಿತಿ. ಊಟ ಇಲ್ಲದಿದ್ದರೆ ಹೇಗೋ ಅನುಸರಿಸಿಕೊಂಡು ಹೋಗಬಗಹುದು. ನೀರಿಲ್ಲದಿದ್ದರೆ ಆಸ್ಪತ್ರೆಯಲ್ಲಿ ಹೇಗಿರೋದು ಎಂಬುದು ರೋಗಿಗಳ ಅಳಲು.
ಸಂಬಂಧ ಪಟ್ಟವರಿಗೆ ಈ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಅನ್ನುತ್ತಾರೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ. ಯಾವುದೇ ದೂರು ಬಂದಿಲ್ಲ. ಬಂದಿದ್ದರೆ ಪರಿಸ್ಥಿತಿ ಇಷ್ಟು ಹದಗೆಡಲು ಬಿಡುತ್ತಿರಲಿಲ್ಲ ಎಂದು ಸಿಎಂಸಿ ಅಧ್ಯಕ್ಷ ಎಸ್.ರಾಮಪ್ಪನವರು ಖಾರವಾಗೇ ಹೇಳಿದರು. ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಸೇರುತ್ತಿರುವ ಬಡ ಜನರ ಪರಿ ಪಾಟಲು ಹಾಗೂ ಆಸ್ಪತ್ರೆಯ ಸಿಬ್ಬಂದಿ ನೀರಿಗಾಗಿ ಬಕೆಟ್ಟು ಹಿಡಿದು ಓಡಾಡುವುದು ನಿಂತಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications