ಭೂತಾನ್,ನೇಪಾಳ ನೆರವಿನೊಂದಿಗೆ ನದಿ ಜೋಡಣೆ
ಬೆಂಗಳೂರು : ಭಾರತದ ನದಿಗಳನ್ನು ಸೇರಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ನೆರವು ಕೋರಿ ಭೂತಾನ್ ಮತ್ತು ನೇಪಾಳದ ಜತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈಗಾಗಲೇ ಮಾತುಕತೆ ನಡೆಸಿದೆ ಎಂದು ನದಿಗಳ ಜೋಡಣೆ ಯೋಜನೆಯ ಕಾರ್ಯಪಡೆ ಅಧ್ಯಕ್ಷ ಸುರೇಶ್ ಪ್ರಭು ಹೇಳಿದರು.
ಶುಕ್ರವಾರ (ಮಾ.28) ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಅವರು ಮಾತಾಡುತ್ತಿದ್ದರು. ಮುಂದಿನ 15 ವರ್ಷಗಳಲ್ಲಿ 5,60, 000 ಕೋಟಿ ರುಪಾಯಿ ವೆಚ್ಚದಲ್ಲಿ ನದಿಗಳ ಜೋಡಣೆಯ ಯೋಜನೆಯನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸಗಳು ಈಗಾಗಲೇ ಶುರುವಾಗಿವೆ. ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಯಶವಂತ ಸಿನ್ಹ ನೇಪಾಳ ಮತ್ತು ಭೂತಾನ್ ನೆರವನ್ನು ಯಾಚಿಸಿ ಮಾತುಕತೆ ಪ್ರಾರಂಭಿಸಿದ್ದಾರೆ. ಪ್ರತಿ ವರ್ಷ ನಿವ್ವಳ ಸ್ಥಳೀಯ ಉತ್ಪಾದನೆಯ (ಜಿಡಿಪಿ) ಪ್ರತಿಶತ 1.5ರಷ್ಟನ್ನು ಈ ಯೋಜನೆಗೆ ವಿನಿಯೋಗಿಸಬೇಕಾಗುತ್ತದೆ ಎಂದು ಪ್ರಭು ಸಂಕ್ಷಿಪ್ತ ವಿವರ ಕೊಟ್ಟರು.
ಹಿಮಾಲಯನ್ ನದಿಗಳ ಜೋಡಣೆ ಮತ್ತು ಪೆನಿನ್ಸುಲಾರ್ ನದಿಗಳ ಜೋಡಣೆ ಎಂದು ಎರಡು ವಿಭಾಗಗಳಾಗಿ ಯೋಜನೆಯನ್ನು ವಿಂಗಡಿಸಿ, ಕಾಮಗಾರಿ ಪ್ರಾರಂಭಿಸಲು ಉದ್ದೇಶಿಸಿದ್ದೇವೆ. ಈ ಯೋಜನೆಯಿಂದಾಗುವ ಸಾಮಾಜಿಕ ಪರಿಣಾಮ, ಪರಿಸರ ಬದಲಾವಣೆ, ನೀರಿನ ಗುಣಮಟ್ಟ, ನೀರಿನಲ್ಲಿನ ಉಪ್ಪಿನ ಅಂಶ, ಭೂಕಂಪನಾ ಆತಂಕ, ಯೋಜನೆಯ ಆರ್ಥಿಕ ಲಾಭ- ಮೊದಲಾದ ಅಂಶಗಳ ಕುರಿತು ದೇಶದ ವಿವಿಧ ಸಂಶೋಧಕರು ವರದಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಈ ಯೋಜನೆಗೆ ಗಡುವು ಹಾಕಿಕೊಂಡಿರುವುದರಿಂದ ಕೆಲಸಕ್ಕೆ ಒಳ್ಳೆಯ ವೇಗ ದಕ್ಕುತ್ತದೆ. ಹಾಗಂತ ಜನರ ಹಿತಾಸಕ್ತಿಯನ್ನು ಬಲಿಕೊಡುವುದಿಲ್ಲ. ಎಲ್ಲಾ ಭಾವನಾತ್ಮಕ ಹಾಗೂ ಪರಿಸರಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಕೆಲಸ ಮಾಡುತ್ತೇವೆ ವಿರೋಧ ಪಕ್ಷ, ಕಾಂಗ್ರೆಸ್ನ ಅಧ್ಯಕ್ಷೆ ಯೋನಿಯಾ ಗಾಂಧಿ ಕೂಡ ಯೋಜನೆಯನ್ನು ಬೆಂಬಲಿಸಿದ್ದಾರೆ ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications