‘ಯುದ್ಧಾನಂತರ ನಮ್ಮ ಎಂಜಿನಿಯರುಗಳಿಗೆ ಡಿಮ್ಯಾಂಡು’
ಬೆಂಗಳೂರು : ಇರಾಕ್ ಯುದ್ಧ ಮೂರು ತಿಂಗಳವರೆಗೇನಾದರೂ ಮುಂದುವರೆದರೆ ತೈಲ ಬೆಲೆ ಶೇ. 45ರಷ್ಟು ಏರುತ್ತದೆ ಮತ್ತು ಅಭಿವೃದ್ಧಿಯ ಗತಿ ಶೇ. 2.5ರಷ್ಟು ಕುಸಿಯುತ್ತದೆ ಎಂದು ಭಾರತೀಯ ವಾಣಿಜ್ಯ ಮತ್ತು ಉದ್ದಿಮೆ ಒಕ್ಕೂಟ (ಎಫ್ಐಸಿಸಿಐ) ದ ಅಧ್ಯಕ್ಷ ಎ.ಸಿ.ಮುತ್ತಯ್ಯ ಅಭಿಪ್ರಾಯಪಟ್ಟರು.
ನಗರದಲ್ಲಿ ಗುರುವಾರ (ಮಾ.20) ಶುರುವಾದ ಎಫ್ಸಿಸಿಐ ಆಯೋಜಿಸಿರುವ ವ್ಯಾಟ್ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮುತ್ತಯ್ಯ ಮಾತಾಡಿದರು. ಯುದ್ಧ ಒಂದು ವಾರ ಮಾತ್ರ ನಡೆದರೆ ತೈಲ ಬೆಲೆ ಪ್ರತಿಶತ 9ರಷ್ಟು ಏರುತ್ತದೆ. ಇದರಿಂದ ಅಂಥಾ ದೊಡ್ಡ ಹೊಡೆತವೇನೂ ಬೀಳುವುದಿಲ್ಲ. ದೀರ್ಘ ಕಾಲ ಯುದ್ಧ ನಡೆದರೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಎದುರಿಸಬೇಕಾದೀತು ಎಂದರು.
ಯುದ್ಧಾ ನಂತರದ ಅವಧಿಯಲ್ಲಿ ಭಾರತೀಯ ಎಂಜಿನಿಯರುಗಳಿಗೆ ಇರಾಕ್ನಲ್ಲಿ ದೊಡ್ಡ ಮೊತ್ತದ ಮಾರುಕಟ್ಟೆ ಹುಟ್ಟುವುದಂತೂ ದಿಟ. ದುಬೈಯನ್ನು ಉಕ್ಕು, ಸಿಮೆಂಟು ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರದ ನಮ್ಮ ಮಾರುಕಟ್ಟೆಯ ಕೇಂದ್ರವನ್ನಾಗಿಸಿಕೊಳ್ಳುವ ಕುರಿತು ನಾವು ಈಗಲೇ ಸನ್ನದ್ಧರಾಗಬೇಕು. ಯುದ್ಧ ಅಲ್ಪ ಕಾಲ ನಡೆದರೆ, ನಂತರದ ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಪ್ರತಿ ಬ್ಯಾರಲ್ಗೆ 25 ಅಮೆರಿಕನ್ ಡಾಲರ್ನಿಂದ 22 ಅಮೆರಿಕನ್ ಡಾಲರ್ನಷ್ಟು ಕುಸಿಯಲಿದೆ ಎಂಬುದು ಮುತ್ತಯ್ಯನವರ ಅಂದಾಜು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...