11 ಲಕ್ಷ ಟನ್ ಧಾನ್ಯ ಕೊಡಿ : ಕೇಂದ್ರಕ್ಕೆ ಕೃಷ್ಣ ಮೊರೆ
ಬೆಂಗಳೂರು : ಬರ ಪರಿಹಾರ ಕಾಮಗಾರಿ ಚುರುಕುಗೊಳಿಸಲು ದಂಡಿಯಾಗಿ ಆಹಾರ ಧಾನ್ಯವನ್ನು ಒಮ್ಮೆಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಗುರುವಾರ (ಮಾ.20) ನಡೆದ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಕುರಿತ ಮುಂದುವರೆದ ಚರ್ಚೆಯಲ್ಲಿ ಉತ್ತರಿಸುತ್ತಾ ಕೃಷ್ಣ ಈ ಒತ್ತಾಯ ಮಾಡಿದರು. ಈ ಹಿಂದೆ 3.6 ಲಕ್ಷ ಟನ್ ಆಹಾರ ಧಾನ್ಯವನ್ನು ಸಾಗಿಸಲು ರೈಲ್ವೆ ವ್ಯಾಗನ್ಗಳ ಕೊರತೆಯನ್ನು ಸರ್ಕಾರ ಎದುರಿಸಿತ್ತು. ಒಮ್ಮೆಲೆಗೇ ದಂಡಿಯಾಗಿ ಆಹಾರ ಧಾನ್ಯವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದರೆ, ಅದನ್ನು ಇಂತಿಂಥ ಪ್ರದೇಶಗಳಿಗೆ ಇಷ್ಟಿಷ್ಟು ಎಂದು ವಿಂಗಡಿಸಿ, ಸಾಗಿಸುವ ಪ್ರಕ್ರಿಯೆ ಸುಲಭವಾಗುತ್ತದೆ ಎಂದರು.
ಸಂಯುಕ್ತ ಜನತಾದಳದವರು ಗೋಸುಂಬೆಗಳು : ಎಪ್ಪತ್ತೆೈದು ನಿಮಿಷ ಅವಧಿಯ ತಮ್ಮ ಭಾಷಣದಲ್ಲಿ ಕೃಷ್ಣ ವಿರೋಧ ಪಕ್ಷಗಳನ್ನು ಯದ್ವಾತದ್ವಾ ತರಾಟೆಗೆ ತೆಗೆದುಕೊಂಡರು. ಕೇಂದ್ರ ಸರ್ಕಾರದ ನೆರವಿನ 250.84 ಕೋಟಿ ರುಪಾಯಿಯೂ ಸೇರಿದಂತೆ 358 ಕೋಟಿ ರುಪಾಯಿಯನ್ನು ಬರ ಪರಿಹಾರ ಕಾಮಗಾರಿಗೆ ವಿನಿಯೋಗಿಸಿದ್ದೇವೆ. ಬರ ಪರಿಹಾರಕ್ಕೆ ಸಂಬಂಧಿಸಿದ 70,000 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಇದ್ಯಾವುದನ್ನೂ ಗಮನಿಸದೆ, ವೃಥಾ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಸಂಯುಕ್ತ ಜನತಾ ದಳದವರು ಅಧಿಕಾರದಲ್ಲಿದ್ದಾಗ ಒಂದು ಮಾತಾಡುತ್ತಾರೆ. ವಿರೋಧಿ ಕುರ್ಚಿಯಲ್ಲಿ ಕೂತಾಗ ಇನ್ನೊಂದು ಮಾತಾಡುತ್ತಾರೆ. ಬರ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ರೀತಿಗೆ ಸರ್ಕಾರದ ಬೆನ್ನು ತಟ್ಟಬೇಕು. ಅದು ಬಿಟ್ಟು ಕಾಲೆಳೆಯಬಾರದು ಎಂದು ಕೃಷ್ಣ ಕಿಡಿ ಕಾರಿದರು.
ಬಿಜೆಪಿ ಮುಖಂಡರ ಸಭಾತ್ಯಾಗ : ಕೃಷ್ಣ ಕೊಟ್ಟ ಸಮಜಾಯಿಷಿಯಿಂದ ತೃಪ್ತರಾಗದ ಬಿಜೆಪಿ ಮುಖಂಡರು, ಬೆಳೆ ಸಾಲದ ಬಡ್ಡಿ ಮನ್ನಾ ಮಾಡದಿರುವ ಹಾಗೂ ಮೃತ ರೈತರ ಕುಟುಂಬಕ್ಕೆ ಪರಿಹಾರ ಒದಗಿಸದ ಸರ್ಕಾರದ ನಡೆ ಸರಿಯಿಲ್ಲ ಎಂದು ಹೇಳಿ ಸಭಾತ್ಯಾಗ ಮಾಡಿದರು.
ರೈತರ ಆತ್ಮಹತ್ಯೆಗೂ, ಬೆಳೆ ನಾಶಕ್ಕೂ ತಳಕು ಹಾಕುವುದು ತರವಲ್ಲ. ಸಮಸ್ಯೆಗಳ ಆಳವನ್ನು ಅಧ್ಯಯನ ಮಾಡಿದಾಗ ವಾಸ್ತವ ಗೊತ್ತಾಗುತ್ತದೆ ಎಂಬ ಕೃಷ್ಣ ಉತ್ತರದಿಂದ ವಿರೋಧ ಪಕ್ಷಗಳಿಗೆ ಸಮಾಧಾನವಾಗಲಿಲ್ಲ.
ಸಿ.ಎಂ. ಬೆಸ್ಟ್ ಆದರೆ, ರಾಜ್ಯವೂ ಬೆಸ್ಟ್ ಅಲ್ಲವೇ ? : ದೇಶದಲ್ಲೇ ಬೆಸ್ಟ್ ಸಿ.ಎಂ. ಎಂದು ಬಿಂಬಿಸಿಕೊಂಡು ವರದಿ ಪ್ರಕಟಿಸಿಕೊಂಡಿರಲ್ಲ ಎಂಬ ವಿರೋಧ ಪಕ್ಷಗಳ ದಾಳಿಗೆ ಕೃಷ್ಣ ತಣ್ಣಗೆ ಉತ್ತರಿಸಿದ್ದು ಹೀಗೆ- ಒಂದು ರಾಜ್ಯದ ಮುಖ್ಯಮಂತ್ರಿಯ ವ್ಯಕ್ತಿತ್ವವನ್ನು ಹೊಗಳಿದರೆ, ಅದು ರಾಜ್ಯಕ್ಕೇ ಸಲ್ಲುವ ಹೊಗಳಿಕೆಯಲ್ಲವೇ? ದೇಶದ ಬೇರೆ ರಾಜ್ಯಗಳು ಕರ್ನಾಟಕವನ್ನು ಯಾಕೆ ನೋಡುತ್ತಿವೆ ಹೇಳಿ?
11 ಲಕ್ಷ ಟನ್ ಆಹಾರ ಧಾನ್ಯ ಬೇಕು : ಮುಂದಿನ ಎರಡು- ಮೂರು ತಿಂಗಳಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಚುರುಕಾಗಿ ಮಾಡಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಕೇಂದ್ರ ಸರ್ಕಾರವನ್ನು 11 ಲಕ್ಷ ಟನ್ ಆಹಾರ ಧಾನ್ಯ ಒದಗಿಸುವಂತೆ ಆಗ್ರಹಿಸಿದ್ದೇವೆ. ದೇಶದ ಬಹುತೇಕ ರಾಜ್ಯಗಳಲ್ಲೂ ಬರ ಸಮಸ್ಯೆ ಇದ್ದೇ ಇದೆ. ಇದನ್ನು ನಿಭಾಯಿಸುವುದು ಸರಳವಲ್ಲ. ಹೀಗಿದ್ದೂ ನಾವು ಅಚ್ಚುಕಟ್ಟಾಗಿ ನಿಭಾಯಿಸಿದ್ದೇವೆ ಎಂಬ ವಿಶ್ವಾಸವಿದೆ ಎಂದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications