ಚಿಂತಾಮಣಿಯಲ್ಲಿ ಅಖಿಲ ಭಾರತ ಜನತಾದಳ ಉದಯ
ಚಿಂತಾಮಣಿ : ರಾಜ್ಯದ ವಿವಿಧ ಜಿಲ್ಲೆಗಳ ಸಹಸ್ರಾರು ಕಾರ್ಯಕರ್ತರ ಹರ್ಷೋದ್ಘಾರದ ನಡುವೆ ಹೊಸ ಪಕ್ಷ ಅಖಿಲ ಭಾರತ ಜನತಾ ದಳ ಜನವರಿ 23 ರ ಗುರುವಾರ ವಿಧ್ಯುಕ್ತವಾಗಿ ಆರಂಭಗೊಂಡಿತು. ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ದೀಪ ಬೆಳಗಿಸುವುದರ ಮೂಲಕ ನೀತನ ಪಕ್ಷಕ್ಕೆ ಚಾಲನೆ ನೀಡಿದರು. ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ತುಮಕೂರು, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಸಹಸ್ರಾರು ಕಾರ್ಯಕರ್ತರು ನೂತನ ಪಕ್ಷದ ಸಮಾವೇಶದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಟಿ.ಚೆನ್ನಯ್ಯ ವೇದಿಕೆಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶುರುವಾದ ಸಮಾವೇಶದ ಅಧ್ಯಕ್ಷ ಗಾದಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್.ಬೊಮ್ಮಾಯಿ ಕೂತಿದ್ದರು. ಪಕ್ಷದ ನೇತಾರರಾದ ಪಿ.ಜಿ.ಆರ್. ಸಿಂಧ್ಯ, ಸಿ.ಭೈರೇಗೌಡ, ರಮೇಶ್ಕುಮಾರ್, ಬಿ.ಎನ್.ಬಚ್ಚೇಗೌಡ, ಬಸವರಾಜ ರಾಯರೆಡ್ಡಿ ಸೇರಿದಂತೆ ಅನೇಕ ರಾಜಕೀಯ ಧುರೀಣರು ಸಮಾವೇಶದಲ್ಲಿ ಭಾಗವಹಿಸಿದ್ದರು.
ಚಿಂತಾಮಣಿ ಶಾಸಕರ ಸೇರ್ಪಡೆ
ತಮ್ಮ ಸಾವಿರಾರು ಅಭಿಮಾನಿಗಳೊಂದಿಗೆ ಚಿಂತಾಮಣಿಯ ಶಾಸಕ ಚೌಡರೆಡ್ಡಿ ಅವರು ಅಖಿಲ ಭಾರತ ಜನತಾದಳಕ್ಕೆ ಗುರುವಾರ ಸೇರ್ಪಡೆ ಹೊಂದಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್.ಬೊಮ್ಮಾಯಿ ಅವರು ಮಾಜಿ ಸಚಿವ ಚೌಡರೆಡ್ಡಿ ಹಾಗೂ ಬೆಂಬಲಿಗರನ್ನು ಪಕ್ಷಕ್ಕೆ ಸ್ವಾಗತಿಸಿದರು.
ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ಅವರು ಕೂಡ ನೂತನ ಪಕ್ಷಕ್ಕೆ ತಾತ್ವಿಕವಾಗಿ ಸೇರಿದ್ದಾರೆ. ಗೌರಿಬಿದನೂರಿನಲ್ಲಿ ಕೂಡ ಚಿಂತಾಮಣಿಯಲ್ಲಿ ನಡೆದಂಥದ್ದೇ ಸಮಾವೇಶ ನಡೆಸಲಾಗುವುದು. ಈ ಸಮಾವೇಶದಲ್ಲಿ ಶಿವಶಂಕರರೆಡ್ಡಿ ಅವರು ಅಧಿಕೃತವಾಗಿ ಅಖಿಲ ಭಾರತ ಜನತಾದಳಕ್ಕೆ ಸೇರ್ಪಡೆ ಹೊಂದುವರು ಎಂದು ರಾಜ್ಯ ಘಟಕದ ಅಧ್ಯಕ್ಷ ಎಸ್.ಭೈರೇಗೌಡ ತಿಳಿಸಿದ್ದಾರೆ.
ಚೌಡರೆಡ್ಡಿ ಹಾಗೂ ಶಿವಶಂಕರರೆಡ್ಡಿ ಅವರು ಬಂಡಾಯ ಕಾಂಗ್ರೆಸ್ ಸ್ಪರ್ಧಿಗಳಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಪಕ್ಷ ರಾಷ್ಟ್ರಮಟ್ಟದಲ್ಲಿ ಒಗ್ಗೂಡಲಿ- ದೇವೇಗೌಡ
ಮಾಜಿ ಪ್ರಧಾನಿ ಚಂದ್ರಶೇಖರ್ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷರಾಗಿ 8 ವರ್ಷ ಕೆಲಸ ಮಾಡಿದ್ದಾರೆ. ಎಸ್.ಆರ್.ಬೊಮ್ಮಾಯಿ ಕೂಡ 6 ವರ್ಷ ಅಧ್ಯಕ್ಷರಾಗಿದ್ದರು. ಜನತಾ ದಳ ಈಗ ರಾಷ್ಟ್ರ ಮಟ್ಟದಲ್ಲಿ ಒಡೆದಿದೆ. ಅಲ್ಲಿ ದಳ ಬಣಗಳನ್ನು ಒಂದು ಗೂಡಿಸುವ ಕೆಲಸವನ್ನು ಚಂದ್ರಶೇಖರ್ ಮಾಡಿದರೆ ಅದಕ್ಕೆ ನನ್ನ ಸಹಮತ ಇದೆ. ಅದು ಬಿಟ್ಟು ರಾಜ್ಯದಲ್ಲಿ ಮಾತ್ರ ವಿಲೀನವಾಗಲಿ ಅನ್ನುವುದನ್ನು ಒಪ್ಪುವುದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಮೈಸೂರಿನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...