ತಮಿಳು ಚಾನೆಲ್ ವಿರೋಧಿಸಿದ ವಾಟಾಳ್ ಬಂಧನ
ಬೆಂಗಳೂರು : ತಮಿಳು ಚಿತ್ರಗಳು ಹಾಗೂ ಚಾನೆಲ್ಗಳ ಪ್ರಸಾರ ಕೂಡದೆಂದು ಗುರುವಾರ ನಗರದ ಗೋಪಾಲ ಗೌಡ ವೃತ್ತದಲ್ಲಿ ಭಾರೀ ಪ್ರತಿಭಟನೆ ನಡೆಸಿದ ಕಾರಣ ವಾಟಾಳ್ ನಾಗರಾಜ್, ಜಿ.ನಾರಾಯಣ ಕುಮಾರ್ ಸೇರಿದಂತೆ ಅನೇಕ ಕನ್ನಡ ಚಳವಳಿ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.
ಕನ್ನಡ ಚಳವಳಿ ನಾಯಕರಾದ ವಾಟಾಳ್ ನಾಗರಾಜ್, ಜಿ.ನಾರಾಯಣ ಕುಮಾರ್, ಪ್ರಭಾಕರ ರೆಡ್ಡಿ, ಜಿ.ಮುದ್ದೇಗೌಡ ಮೊದಲಾದ ಸುಮಾರು 50 ಚಳವಳಿಕಾರರು ಗುರುವಾರ ಬೆಳಗ್ಗೆ ಗೋಪಾಲ ಗೌಡ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಗಲಭೆಗೆ ತಿರುಗದಿರಲಿ ಎಂಬ ಕಾರಣಕ್ಕೆ ಎಲ್ಲಾ ಚಳವಳಿಕಾರರನ್ನು ಪೊಲೀಸರು ಬಂಧಿಸಿ, ಬಹುಮಹಡಿ ಕಟ್ಟಡದ ಹೊರ ಠಾಣೆಗೆ ಕರೆದೊಯ್ದರು. ಸ್ವಲ್ಪ ಸಮಯದ ನಂತರ ಎಲ್ಲರನ್ನೂ ಬಿಡುಗಡೆ ಮಾಡಿದರು.
ನಾಡು- ನುಡಿ ಹಾಗೂ ಜೀವನದಿಗಾಗಿ ಹೋರಾಟ ಮಾಡುವವರನ್ನು ಈ ರೀತಿ ಬಂಧಿಸಿ, ಅವರ ಮಾನಸಿಕ ಸ್ಥೈರ್ಯಕ್ಕೆ ಸರ್ಕಾರ ಕೊಡಲಿ ಪೆಟ್ಟು ಕೊಡುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋ.ವೆಂ.ರಾಮಕೃಷ್ಣೇಗೌಡ ಸುದ್ದಿ ಹೇಳಿಕೆ ಕೊಟ್ಟಿದ್ದಾರೆ. ವಾಟಾಳ್ ಹಾಗೂ ಜಿ.ನಾರಾಯಣ ಕುಮಾರ್ ಅಂಥವರನ್ನು ಬಂಧಿಸಿ ಚಳವಳಿ ಹತ್ತಿಕ್ಕುತ್ತಿರುವ ಸರ್ಕಾರವನ್ನು ಖಂಡಿಸಿದ್ದಾರೆ. ನಗರದ ಕೆಲವು ಕನ್ನಡ ಬಳಗ ಹಾಗೂ ಸಂಘಗಳೂ ಸರ್ಕಾರದ ನಡಾವಳಿಯನ್ನು ಖಂಡಿಸಿವೆ.
ಸದ್ಯದಲ್ಲೇ ತಮಿಳು ಚಿತ್ರಗಳು ಹಾಗೂ ಚಾನೆಲ್ಗಳ ಪ್ರಸಾರವನ್ನು ಮತ್ತೆ ಶುರು ಮಾಡುವುದಾಗಿ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...