ವಿರೋಧ ಬದಿಗೊತ್ತಿ ರಾಮನಗರದತ್ತ ಬೆಳೆಯಿತು ಕೃಷ್ಣ ಪಾದ
ಬೆಂಗಳೂರು : ಪಾದಯಾತ್ರೆ ಒಂದು ರಾಜಕೀಯ ನಾಟಕ. ಅದನ್ನು ನಿಲ್ಲಿಸಿ ಎಂಬ ವಿರೋಧ ಪಕ್ಷ ಮತ್ತು ರೈತ ಮುಖಂಡರ ಆಗ್ರಹಕ್ಕೆ ಸೊಪ್ಪು ಹಾಕದೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಂಗಳವಾರ ಬಿಡದಿಯಿಂದ ರಾಮನಗರಕ್ಕೆ ಪಾದ ಬೆಳೆಸಿದ್ದಾರೆ.
ಇಷ್ಟು ದಿನ ಸುಮ್ಮನಿದ್ದು ಈಗ ಮುಖ್ಯಮಂತ್ರಿಗಳು ಪಾದಯಾತ್ರೆಗೆ ಇಳಿದಿರುವುದು ರಾಜಕೀಯ ಗಿಮಿಕ್ಕಲ್ಲದೆ ಬೇರೇನೂ ಅಲ್ಲ. ಪಾದಯಾತ್ರೆ ನಿಲ್ಲಿಸಿ, ಕಾನೂನು ಸಮರದಲ್ಲಾದರೂ ಕಾವೇರಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಲಿ ಎಂದು ಮಾಜಿ ಸಂಸದ ಜಿ.ಮಾದೇಗೌಡ ಆಗ್ರಹಿಸಿದರು. ವಿರೋಧ ಪಕ್ಷಗಳು ಮತ್ತು ಕೆಲವು ರೈತರ ಮುಖಂಡರು ಮಾದೇಗೌಡರ ಮಾತನ್ನು ಸಮರ್ಥಿಸಿದರು.
ಈ ವಿರೋಧದ ನಡುವೆಯೂ ಮುಖ್ಯಮಂತ್ರಿ ಕೃಷ್ಣ ಎರಡನೇ ದಿನ ಪಾದಯಾತ್ರೆ ಮುಂದುವರೆಸಿದರು. ಸೋಮವಾರ ರಾತ್ರಿ ಇಡೀ ಬಿಡದಿಯಲ್ಲಿ ವಿಶ್ರಮಿಸಿದ ಕೃಷ್ಣ, ಮಂಗಳವಾರ 16 ಕಿ.ಮೀ. ನಡೆದು, ರಾಮನಗರ ತಲುಪಲಿದ್ದಾರೆ. ತಮ್ಮ ಪಾದಯಾತ್ರೆಗೆ ರೈತರು ವಿರೋಧಿಸುತ್ತಿದ್ದಾರಲ್ಲಾ. ಅದಕ್ಕೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ, ರೈತ ಮುಖಂಡರ ಜೊತೆ ಮಾತಾಡಿ ನನ್ನ ಕಳಕಳಿಯನ್ನು ವ್ಯಕ್ತಪಡಿಸುತ್ತೇನೆ ಎಂದು ಕೃಷ್ಣ ಉತ್ತರಿಸಿದರು.
ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಮಾಲಕ ರೆಡ್ಡಿ ಕೂಡ ಪಾದಯಾತ್ರೆಗೆ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಆದರೆ, ಬೇರೆ ಕೆಲಸಗಳನ್ನು ಅಲ್ಲೇ ಇದ್ದು ನಿಭಾಯಿಸಿ. ಪಾದಯಾತ್ರೆಗೆ ನೀವೂ ಸೇರಿಕೊಳ್ಳುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದರಿಂದ ಇವರೆಲ್ಲ ಸುಮ್ಮನಾದರು.
ಪಾದಯಾತ್ರೆ ನಡುವೆಯೇ ಮುಖ್ಯಮಂತ್ರಿಯವರನ್ನು ಸಂಪರ್ಕಿಸಿ, ವೀರಪ್ಪನ್ ಮೂರನೇ ಕೆಸೆಟ್ಟಿನ ವಿಚಾರವನ್ನು ಖರ್ಗೆ ಚರ್ಚಿಸಿದ್ದಾರೆ. ಈ ಬಗ್ಗೆ ಯಾವ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ಇನ್ನೂ ಹೊರಬಿದ್ದಿಲ್ಲ. ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಮಾದೇಗೌಡ ಮಂಗಳವಾರ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ












Click it and Unblock the Notifications