‘ಗಡಿಯಾಚೆಗಿನ ಕನ್ನಡಿಗರೆಂದರೆ ನಾಡಿನ ಸಾಂಸ್ಕೃತಿಕ ರಾಯಭಾರಿಗಳು’
ಮಂಗಳೂರು : ರಾಜ್ಯದ ಗಡಿಯಾಚೆಗೆ ನೆಲೆಸಿರುವ ಕನ್ನಡಿಗರು ಕನ್ನಡ ಸಂಸ್ಕೃತಿಯ ರಾಯಭಾರಿಗಳು. ಅವರು ವಿದೇಶದಲ್ಲೇ ಇರಲಿ, ಸ್ವದೇಶದಲ್ಲೇ ಇರಲಿ, ನಮ್ಮ ನಾಡಿನ ಸಂಸ್ಕೃತಿಯನ್ನು ಹೊರ ಜಗತ್ತಿನ ಪರಿಚಯಿಸುವವರು ಕರ್ನಾಟಕದ ರಾಯಭಾರಿಗಳಾಗಿದ್ದಾರೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಬಿ. ಹನುಮಯ್ಯ ಹೇಳಿದ್ದಾರೆ.
ಅವರು ಗಡಿಯಾಚೆಗಿನ ಕನ್ನಡಿಗರ ಎರಡು ದಿನಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಹೊರನಾಡಿನ ಕನ್ನಡಿಗರು, ತಮ್ಮ ಪ್ರೀತಿ ವಿಶ್ವಾಸ ಅಭಿಮಾನವನ್ನು ಕನ್ನಡದತ್ತ ಧಾರೆಯೆರೆದಿದ್ದಾರೆ. ಕನ್ನಡ ಧ್ವಜವನ್ನು ದೇಶ ವಿದೇಶಗಳಲ್ಲಿ ಹಾರಿಸಿ ತಮ್ಮ ಕನ್ನಡ ಪ್ರೇಮ ಎಲ್ಲೇ ಇದ್ದರೂ ಕಡಿಮೆಯಾಗುವುದಿಲ್ಲ ಎಂದು ತೋರಿಸಿಕೊಟ್ಟು ಅಭಿನಂದನೀಯ ಸೇವೆ ಸಲ್ಲಿಸಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ಕಾಸರಗೋಡಿನಂತಹ ನಮ್ಮ ರಾಜ್ಯದ ಪ್ರದೇಶಗಳಿಗಾಗಿ ಹೋರಾಡುವುದು ನಮ್ಮ ಕರ್ತವ್ಯ ಎಂದರು. ಹೊರನಾಡ ಕನ್ನಡಿಗರ ಪ್ರವೃತ್ತಿಗಳಿಗೆ ನಾವು ಸ್ಪಂದಿಸಬೇಕು ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ವಾಮನ ನಂದಾವರ ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯೋಗೀಶ್ ಭಟ್ ಗಡಿನಾಡ ಪ್ರದೇಶಗಳಲ್ಲಿ ಭಾಷಾ ಸಾಮರಸ್ಯ ಅಲ್ಲಿನ ಕನ್ನಡ ಶಾಲೆಗಳಿಗೆ ಹೆಚ್ಚಿನ ಶಕ್ತಿ, ಸೌಕರ್ಯ, ರಂಗಮಂದಿರಗಳಿಗೆ ಮೂಲ ಸೌಲಭ್ಯಗಳನ್ನು ಸರಕಾರ ಕಲ್ಪಿಸಿಕೊಡಬೇಕಾಗಿದೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...