ಮೈಸೂರಲ್ಲಿ ಕುಡಿಯುವ ನೀರಿಗೆ ಕೊರೆ, ಕಾಲರಾ ಮಾರಿ ಹಾಜರಿ
*ಇನ್ಫೋ ಇನ್ಸೈಟ್
ಕುಡಿಯುವ ನೀರಿಲ್ಲ . ಕೆಪಿಟಿಸಿಎಲ್ ಮಹಾತ್ಮೆಯಿಂದ ಸಾಕಷ್ಟು ಬೆಳಕಿಲ್ಲ . ಈ ಜಂಜಡದ ಜೊತೆಗೆ ಮೈಸೂರಿನ ಜನತೆ ರೋಗ ರುಜಿನಗಳ ಬೆದರಿಕೆಯನ್ನೂ ಎದುರಿಸುತ್ತಿದ್ದಾರೆ. ಈಗಾಗಲೇ ಕಾಲರಾದಿಂದಾಗಿ ಕೆ.ಆರ್. ಮಿಲ್ ಕಾಲೋನಿಯ ಅಶ್ವಿನಿ ಎಂಬ ಆರು ವರ್ಷದ ಹುಡುಗಿಯಾಬ್ಬಳು ಅಸು ನೀಗಿರುವ ವರದಿಯಾಗಿದೆ.
ಒಂದು ಕಡೆ ಬೇಸಗೆಯ ಬಿಸಿಲಿನಿಂದ ಜನರು ಬಳಲುತ್ತಿದ್ದರೆ ಮತ್ತೊಂದು ಕಡೆ ನೀರಿನ ಕೊರತೆಯಿಂದಾಗಿ ಸ್ವಚ್ಛತೆಯ ಸಮಸ್ಯೆ ಕಾಡುತ್ತಿದೆ. ಇದರಿಂದಾಗಿ ಕಂಡರಿಯದ ಚರ್ಮ ರೋಗಗಳು ಬಾಧಿಸಲಾರಂಭಿಸಿವೆ. ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಡೆಯರಿಯಾದಿಂದ ಬಳಲುತ್ತಿರುವ ಸಾಕಷ್ಟು ಮಂದಿ ರೋಗಿಗಳು ದಾಖಲಾಗಿದ್ದಾರೆ. ವಾಂತಿ, ಬೇಧಿ ಮತ್ತು ಕರುಳು ಬೇನೆ ರೋಗಗಳ ದೂರು ಹೊತ್ತು ಜನರು ಆಸ್ಪತ್ರೆಗೆ ಬರುತ್ತಿದ್ದಾರೆ.
ಆಸ್ಪತ್ರೆಗೆ ದಾಖಲಾದವರಲ್ಲಿ ಕನಿಷ್ಠ ಮೂರು ಮಂದಿಗೆ ಕಾಲರಾ ಇರುವುದಾಗಿ ಶಂಕಿಸಲಾಗಿದೆ. ಜಿಲ್ಲೆಯಲ್ಲಿ ಕಾಲರಾ ರೋಗಿಗಳು ಇರುವುದು ನಿಜ. ಆದರೆ ಪರಿಸ್ಥಿತಿಯೇನೂ ಕೈ ಮೀರಿಲ್ಲ . ಬೇಸಗೆಯಲ್ಲಿ ಕರುಳು ಬೇನೆ ಮತ್ತು ಡೈಯರಿಯಾದಂತಹ ಕಾಯಿಲೆಗಳು ಸಾಮಾನ್ಯ. ಈ ರೋಗಗಳು ಹರಡದಂತೆ ತಡೆಗಟ್ಟಲು ನಾವು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದೇವೆ ಎಂದು ಮೈಸೂರು ನಗರ ಪಾಲಿಕೆಯ ಆರೋಗ್ಯಾಧಿಕಾರಿ ನಾಗರಾಜ್ ಹೇಳುತ್ತಾರೆ.
ನಗರದ ಪ್ರತಿ ಮೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಕರುಳು ಬೇನೆಯ ರೋಗಿಗಳು ದಾಖಲಾಗುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳುತ್ತವೆ. ಚರ್ಮರೋಗಗಳಿಗೆ ಮುಖ್ಯವಾಗಿ ನೀರಿನ ಕೊರತೆಯೇ ಕಾರಣ. ಉತ್ತಮ ಬಾವಿಗಳಲ್ಲಿಯೇ ಪಾತಾಳ ತಲುಪಿದ ನೀರು ರೋಗ ಹರಡಬಹುದು. ಅಲ್ಲದೆ ಜನರು ಬೇರೆ ದಾರಿಗಾಣದೆ ಸಿಕ್ಕ ಸಿಕ್ಕ ನೀರನ್ನು ಬಳಸುವುದರಿಂದಲೂ ಚರ್ಮ ರೋಗಗಳು ಹರಡುತ್ತವೆ.
ಯಥಾ ಪ್ರಕಾರ ರೋಗಿಗಳು ಹೆಚ್ಚಾಗುತ್ತಿದ್ದಂತೆಯೇ ಸರಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಉತ್ತಮ ಸೌಲಭ್ಯಗಳಿಲ್ಲದೇ ಇರುವುದು, ನೀರಿಗೆ ಯಾವುದೇ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಸಾಧ್ಯವಾಗದೇ ಇದ್ದಾಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಉತ್ತಮ ನೀರನ್ನು ಬಳಸಿ, ಬೀದಿಯಲ್ಲಿಟ್ಟ ಹಣ್ಣು ಹಂಪಲುಗಳನ್ನು ತಿನ್ನಬೇಡಿ ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮುಖಪುಟ / ಇವತ್ತು... ಈ ಹೊತ್ತು...