ಧರ್ಮಸ್ಥಳದಲ್ಲಿ ಹೊಸ ಬಾಳಿನ ಹೊಸಿಲಲಿ ನಿಂತ 143 ಹೊಸ ಜೋಡಿ
ಧರ್ಮಸ್ಥಳ : ಜಾತಿ ಅಲ್ಲಿ ಗೌಣ. ವೃತ್ತಿ ನಗಣ್ಯ. ಬಡವ- ಬಲ್ಲಿದ ತಾರತಮ್ಯ ಇಲ್ಲವೇ ಇಲ್ಲ. ಕೃಷಿಕ, ಬಡಗಿ, ಚಿನಿವಾರ, ದರ್ಜಿ, ಬೀಡಿಕಟ್ಟುವವರು- ಹೀಗೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಜೋಡಿಗಳ ಸಂಖ್ಯೆ 143. ಈ ಮೂಲಕ ಧರ್ಮಸ್ಥಳದಲ್ಲಿ ಈವರೆಗೆ ನಡೆದಿರುವ ವಿವಾಹಗಳ ಸಂಖ್ಯೆ 9676.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಶಾಸಕ ಕೆ.ಪ್ರಭಾಕರ ಬಂಗೇರ, ಮದ್ಯಪ್ರದೇಶದ ಸಾಹಿತಿ ನೀರಜ ಜೈನ್ ಮೊದಲಾದವರು ಅಕ್ಷತೆ ಕಾಳು ಹಾಕಿದ ಈ ಸಾಮೂಹಿಕ ಮದುವೆ ನಡೆದದ್ದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ. 143 ಜೋಡಿಗಳ ಪೈಕಿ ಎಲ್ಲರ ಗಮನ ಸೆಳೆದದ್ದು ಮಂಗಳೂರು- ಮಂಜೇಶ್ವರದ ಕುಳ್ಳ ಕುಳ್ಳಿ.
ನಮ್ಮ ಸಮಾಜದಲ್ಲಿ ಬಡತನಕ್ಕೆ ಕಾರಣಗಳು ಹಲವು. ದುಂದುವೆಚ್ಚದ ಮದುವೆ ಕೂಡ ಇವುಗಳಲ್ಲೊಂದು. ಶ್ರೀಕ್ಷೇತ್ರದ ಸಾಮೂಹಿಕ ವಿವಾಹದ ಸರಳತೆಯನ್ನು ನಾಡಿನ ಅನೇಕ ಸಂಘ- ಸಂಸ್ಥೆಗಳು ಇವತ್ತು ಆದರ್ಶವಾಗಿರಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ಯಾವುದೇ ದುರಭ್ಯಾಸಕ್ಕೆ ಬಲಿಯಾಗದೆ, ಆದರ್ಶ ಪತಿ- ಪತ್ನಿಯರಾಗಿ ಬಾಳುತ್ತೇವೆ ಎಂದು ನವ ಜೋಡಿಗಳು ಪ್ರತಿಜ್ಞೆ ಮಾಡಿದಾಗ, ಅನೇಕರ ಕಣ್ಣು ತುಂಬಿಬಂದವು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications