ಹಿರಿಯ ನಾಗರಿಕರ ಬುದ್ಧಿಗೆ ಸಾಣೆ ಹಿಡಿಯಲಿರುವ ರಸಪ್ರಶ್ನೆ ಕಾರ್ಯಕ್ರಮ
ಬೆಂಗಳೂರು : ಇದೊಂದು ಹೊಸ ಸ್ಪರ್ಧೆ. ಹಿರಿಯ ನಾಗರಿಕರ ರಸಪ್ರಶ್ನೆ ಕಾರ್ಯಕ್ರಮ. ವಲಯ ಮಟ್ಟದ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಹೆಲ್ಪೇಜ್ ಇಂಡಿಯಾ ಸಂಸ್ಥೆ ಹಾಗೂ ವೈಶ್ಯ ಬ್ಯಾಂಕ್ ಜಂಟಿಯಾಗಿ ಆಯೋಜಿಸಿದೆ.
ಈ ಹಿರಿಯ ನಾಗರಿಕರ ಕ್ವಿಝ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದವರು ಮೇ 5ರೊಳಗೆ ಅರ್ಜಿ ಸಲ್ಲಿಸಬೇಕು. ಸ್ಪರ್ಧಿಗಳಿಗೆ ಕನಿಷ್ಠ 55 ವರ್ಷ ವಯಸ್ಸಾಗಿರಬೇಕು. ರಾಜ್ಯ ಹಾಗೂ ವಲಯ ಮಟ್ಟದ ಸ್ಪರ್ಧೆಗಳು ಮೇ 19ರಂದು ಬೆಂಗಳೂರಿನಲ್ಲಿ ನಡೆಯುತ್ತದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹರು.
ರಸಪ್ರಶ್ನೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಬೆಂಗಳೂರಿನ ಹೆಲ್ಪೇಜ್ ಇಂಡಿಯಾ ಕಚೇರಿಯಲ್ಲಿ ಅರ್ಜಿಗಳನ್ನು ಪಡೆಯಬಹುದು. ಅಂತಿಮ ಸುತ್ತಿನ ಸ್ಪರ್ಧೆ ಮುಂಬಯಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ನೇರಪ್ರಸಾರವನ್ನು ಸೋನಿ ಟೀವಿಯಲ್ಲಿ ನೋಡಬಹುದು. ಆದರೆ ರಾಷ್ಟ್ರಮಟ್ಟದ ಸ್ಪರ್ಧೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಒಂದು ತಂಡದಲ್ಲಿ ಇಬ್ಬರು ಹಿರಿಯ ನಾಗರಿಕರು ಭಾಗವಹಿಸಬಹುದು. ರಸಪ್ರಶ್ನೆ ಕಾರ್ಯಕ್ರಮ ಪ್ರಚಲಿತ ಘಟನೆ, ಸಮಸ್ಯೆ ಮತ್ತು ಆಗುಹೋಗುಗಳ ಬಗ್ಗೆ ಇರುತ್ತದೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080- 2213107 ಮತ್ತು 2124594 ಯನ್ನು ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications