ಪಟೇಲ್, ಇಂದಿರಾ ನಿಲುವು ಆರ್ಎಸ್ಎಸ್ನಿಂದ ಪುನರುಚ್ಚಾರ- ಸುದರ್ಶನ್
ಬೆಂಗಳೂರು : ಹಿಂದೂಗಳ ಒಲವು ಸಂಪಾದಿಸುವಲ್ಲಿ ಮುಸ್ಲಿಮರ ಹಿತಾಸಕ್ತಿ ಅಡಗಿದೆ ಎನ್ನುವ ತನ್ನ ನಿರ್ಣಯದ ಬಗ್ಗೆ ಎದುರಾಗಿರುವ ತೀಕ್ಷ್ಣ ಟೀಕೆಗಳನ್ನು ಸಾರಾಸಗಟಾಗಿ ಪಕ್ಕಕ್ಕಿರಿಸಿರುವ ರಾಷ್ಟ್ರೀಯ ಸ್ವಯಂ ಸೇವಾ ಸಂಘ, ತಾನು ಸತ್ಯವನ್ನೇ ಹೇಳಿರುವುದಾಗಿ ಶುಕ್ರವಾರ ಸ್ಪಷ್ಟನೆ ನೀಡಿದೆ.
ನಾವು ಪರಸ್ಪರ ಸೌಹಾರ್ದ ಸಂಬಂಧ ಹೊಂದುವುದು ಅಗತ್ಯ. ಆದರೆ, ಅಲ್ಪ ಸಂಖ್ಯಾಕರು ತಮ್ಮ ಹಿತಾಸಕ್ತಿ ರಕ್ಷಣೆಗಾಗಿ ಬಹು ಸಂಖ್ಯಾಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವುದು ಅನಿವಾರ್ಯ ಎಂದು ಆರ್ಎಸ್ಎಸ್ ಮುಖ್ಯಸ್ಥ ಕೆ.ಸಿ.ಸುದರ್ಶನ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಕ್ರಿಶ್ಚಿಯನ್ ಸಮುದಾಯದ ಮುಖಂಡರೊಡನೆ ಮಾತುಕತೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕಳೆದ ಭಾನುವಾರ (ಮಾ.17) ಬೆಂಗಳೂರು ಹೊರ ವಲಯದ ಚನ್ನೇನಹಳ್ಳಿಯಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಆರ್ಎಸ್ಎಸ್ ನಾಯಕರು ಕೈಗೊಂಡ ನಿರ್ಣಯವನ್ನು ಬಲವಾಗಿ ಸಮರ್ಥಿಸಿಕೊಂಡ ಸುದರ್ಶನ್,- ಸರ್ದಾರ್ ಪಟೇಲ್, ಪಂಡಿತ್ ನೆಹರು ಹಾಗೂ ಇಂದಿರಾಗಾಂಧಿ ಅವರಂಥ ನಾಯಕರು ಇಂಥದೇ ನಿಲುವನ್ನು ಹೊಂದಿದ್ದರು. ನಾವು ಆ ಸಂದರ್ಭವನ್ನು ಪುನರಾವರ್ತಿಸುತ್ತಿದ್ದೇವೆ ಅಷ್ಟೇ ಎಂದರು.
ರೋಮ್ನಲ್ಲಿರುವಾಗ ರೋಮನ್ ಆಗಿರು :
ಬಹು ಸಂಖ್ಯಾಕರು ಹಾಗೂ ಅಲ್ಪಸಂಖ್ಯಾಕನ ನಡುವೆ ಭೇದ ಕಲ್ಪಿಸಲು ಆರ್ಎಸ್ಎಸ್ ಬಯಸುವುದಿಲ್ಲ . ಆದರೆ, ತಮ್ಮನ್ನು ತಾವು ಅಲ್ಪ ಸಂಖ್ಯಾಕರೆಂದು ಕರೆದುಕೊಳ್ಳುವವರು ಬಹು ಸಂಖ್ಯಾಕರೊಂದಿಗೆ ಉತ್ತಮ ಸಂಬಂಧ ಸಾಧಿಸಬೇಕು. ಬ್ರಿಟನ್ನಲ್ಲಿ ನೀವು ನೆಮ್ಮದಿಯಿಂದ ಬದುಕಬೇಕಾದರೆ, ಬ್ರಿಟೀಷರೊಂದಿಗೆ ಉತ್ತಮ ಸಂಬಂಧ ಹೊಂದುವುದು ಅನಿವಾರ್ಯ. ಅದೇ ರೀತಿ ಫ್ರೆಂಚ್ ಕಲಿತರಷ್ಟೇ ಫ್ರಾನ್ಸ್ನಲ್ಲಿ ಬದುಕಲು ಸಾಧ್ಯ. ಎಲ್ಲೆಡೆಯೂ ಇದೇ ಪರಿಸ್ಥಿತಿ ಇರುವಾಗ ಭಾರತದಲ್ಲಿ ಭಿನ್ನ ಸ್ಥಿತಿಯೇಕೆ ಎಂದು ಸುದರ್ಶನ್ ಪ್ರಶ್ನಿಸಿದರು.
ಬಹು ಸಂಖ್ಯಾಕರ ಒಲವು ಗಳಿಸಿದಾಗ ಮಾತ್ರ ಅಲ್ಪಸಂಖ್ಯಾಕರ ಹಿತಾಸಕ್ತಿ ರಕ್ಷಣೆ ಸಾಧ್ಯ ಎಂದು ಸರ್ದಾರ್ ಪಟೇಲ್ ಹೇಳಿದ್ದರು. ಮೀನಾಕ್ಷಿಪುರಂ ವಿವಾದ ಪ್ರಕರಣದಲ್ಲಿ , ಬಹು ಸಂಖ್ಯಾಕರೊಂದಿಗೆ ಬಾಳಲು ಕಲಿಯುವಂತೆ 40 ಮುಸ್ಲಿಂ ಸಂಸದರಿಗೆ ಇಂದಿರಾಗಾಂಧಿ ಸ್ಪಷ್ಟವಾಗಿ ಹೇಳಿದ್ದರು. ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ತಮಗೆ ಹೆಮ್ಮೆ ಇರುವುದಾಗಿ ಪಂಡಿತ್ ನೆಹರೂ ಹೇಳಿದ್ದರು ಎಂದು ಇತಿಹಾಸದಲ್ಲಿನ ಹಿಂದೂ ಪರ ಹೇಳಿಕೆಗಳನ್ನು ಸುದರ್ಶನ್ ನೆನಪಿಸಿದರು.
ಸವಾರಿ ಸಹಿಸಲು ಸಾಧ್ಯವಿಲ್ಲ : ಮುಸ್ಲಿಮರು ಹಾಗೂ ಕ್ರಿಶ್ಚಿಯನರು ಹೊರಗಿನಿಂದ ಇಲ್ಲಿಗೆ ಬಂದಿದ್ದಾರೆ ಎಂದು ಆರ್ಎಸ್ಎಸ್ ಭಾವಿಸಿಲ್ಲ . ಅವರು ಭಾರತಕ್ಕೆ ಸೇರಿದವರೇ ಆಗಿದ್ದಾರೆ. ಆದರೆ, ಶೇ.97 ರಷ್ಟಿರುವ ಸಮುದಾಯದ ಮೇಲೆ ಶೇ.3 ರಷ್ಟಿರುವ ಮಂದಿ ಸವಾರಿ ಮಾಡುವುದನ್ನು ಏಕೆ ಸಹಿಸಿಕೊಳ್ಳಬೇಕು ಎಂದು ಸುದರ್ಶನ್ ಪ್ರಶ್ನಿಸಿದರು. ಆರ್ಎಸ್ಎಸ್ ಹೇಳಿಕೆಗಳನ್ನು ಕೆಲವು ಮಾಧ್ಯಮಗಳು ತಿರುಚುತ್ತಿರುವುದಾಗಿ ಅವರು ಆಪಾದಿಸಿದರು.
ಆರ್ಎಸ್ಎಸ್ ಮುಸ್ಲಿಂ/ಕ್ರಿಶ್ಚಿಯನ್ ವಿರೋಧಿಯಲ್ಲ ..
ಹಿಂದೂ ಹಾಗೂ ಕ್ರಿಶ್ಚಿಯನ್ ಸಮುದಾಯದ ನಡುವೆ ಸೌಹಾರ್ದ ಸೇತುವೆ ಬೆಸೆಯುವ ಸಲುವಾಗಿ ಆರ್ಎಸ್ಎಸ್ ಮಖಂಡ ಕೆ.ಎಸ್. ಸುದರ್ಶನ್ ಅವರು ಶುಕ್ರವಾರ ಕ್ರಿಶ್ಚಿಯನ್ ಸಮುದಾಯದ ನಾಯಕರೊಂದಿಗೆ ರಾಷ್ಟ್ರೀಯ ಮಟ್ಟದ 6 ನೇ ಸುತ್ತಿನ ಮಾತುಕತೆ ನಡೆಸಿದರು. ಸಭೆಯಲ್ಲಿ ಸುದರ್ಶನ್ ಅವರು ತಮ್ಮ ದಿಟ್ಟತನದ ನಿಲುವುಗಳನ್ನು ಪ್ರಕಟಿಸಿದರು. ಉಭಯತ್ರರ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಈ ಸಭೆ ಉತ್ತಮ ವೇದಿಕೆಯಾಗಿತ್ತು ಎಂದು ಮಾತುಕತೆಯ ನಿರ್ವಾಹಕ ಡಾ.ಕೆನ್ ಜ್ಞಾನಕನ್ ಸುದ್ದಿಗಾರರಿಗೆ ತಿಳಿಸಿದರು.
ಮುಸ್ಲಿಂ ಅಥವಾ ಕ್ರಿಶ್ಚಿಯನ್ ಅಲ್ಪ ಸಂಖ್ಯಾಕ ಸಮುದಾಯಗಳಿಗೆ ಆರ್ಎಸ್ಎಸ್ ವಿರುದ್ಧವಾಗಿಲ್ಲ ಎಂದು ಸುದರ್ಶನ್ ಅವರು ಸಭೆಯಲ್ಲಿ ಸ್ಪಷ್ಟಪಡಿಸಿದರು. ಅದಕ್ಕೆ ಪ್ರತಿಯಾಗಿ, ದೇಶದ ಸಾಂಸ್ಕೃತಿಕ ಹಾಗೂ ಸಾಮಾಜಿಕ ವಾತಾವರಣವನ್ನು ಬಲಪಡಿಸಲು ಕ್ರಿಶ್ಚಿಯನ್ ಸಮುದಾಯ ಶ್ರಮಿಸುತ್ತಿದೆ ಎಂದು ಕ್ರಿಶ್ಚಿಯನ್ ನಾಯಕರು ಹೇಳಿದುದಾಗಿ ಕೆನ್ ಹೇಳಿದರು.
ರಾಷ್ಟ್ರೀಯ ಅಲ್ಪ ಸಂಖ್ಯಾಕರ ಆಯೋಗದ ಅಧ್ಯಕ್ಷ ಜಾನ್ ಜೋಸೆಫ್ ಸೇರಿದಂತೆ ದೇಶದ ವಿವಿಧ ಭಾಗಗಳ ಕ್ರಿಶ್ಚಿಯನ್ ಸಂಘಟನೆಗಳ ಪ್ರಮುಖರು ಆರ್ಎಸ್ಎಸ್ ಜೊತೆಗಿನ ಸಭೆಯಲ್ಲಿ ಭಾಗವಹಿಸಿದ್ದರು. 14 ಮಂದಿಯ ಆರ್ಎಸ್ಎಸ್ ನಿಯೋಗದ ಮುಂದಾಳತ್ವವನ್ನು ಸುದರ್ಶನ್ ವಹಿಸಿದ್ದರು.
(ಪಿಟಿಐ)
Post your views
ವಾರ್ತಾ ಸಂಚಯ
‘ನಿಮ್ಮ ಹಿತಾಸಕ್ತಿ ಹಿಂದೂಗಳ ಕೈಲಿದೆ’ ಮುಸ್ಲಿಮರಿಗೆ ಆರ್ಎಸ್ಎಸ್ ಎಚ್ಚರಿಕೆ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications