ಗಮಕ ಶಾರದೆ ಶಕುಂತಳಬಾಯಿಗೆ ಮುಳಿಯ ತಿಮ್ಮಪ್ಪಯ್ಯ ಪುರಸ್ಕಾರ
ಮಂಗಳೂರು : ಮುಳಿಯ ಸ್ಮಾರಕ ಟ್ರಸ್ಟ್ ಹಾಗೂ ನಗರದ ಮುಳಿಯ ಶತಮಾನೋತ್ಸವ ಸಮಿತಿ ಪ್ರತಿವರ್ಷ ನೀಡುತ್ತಿರುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಈ ಬಾರಿ ಬೆಂಗಳೂರಿನ ಖ್ಯಾತ ಗಮಕ ಕಲಾವಿದೆ, ಗಮಕ ಶಾರದೆ ಶಕುಂತಳಾಬಾಯಿ ಪಾಂಡುರಂಗರಾವ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪಲಕವನ್ನೊಳಗೊಂಡಿದೆ. ಮಾರ್ಚ್ 10ರಂದು ಪುತ್ತೂರು ಕರ್ನಾಟಕ ಸಂಘದ ಸಹಯೋಗದೊಂದಿಗೆ ಪುತ್ತೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಶಕುಂತಳ ಅವರು ಸಂ. ಗೋ. ಬಿಂದೂರಾಯರ ಶಿಷ್ಯೆಯಾಗಿ ಗಮಕವನ್ನು ಅಭ್ಯಾಸ ಮಾಡಿದವರು. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮತ್ತು ಡಿವಿಜಿ ಅವರ ಅಂತಃಪುರದ ಗೀತೆಗಳ ಗಾಯನ ಹಾಗೂ ಮಂಜೇಶ್ವರ ಗೋವಿಂದ ಪೈಗಳ ಗೋಲ್ಗೋಥಾ ವಾಚನ ಮಾಡುವುದರಲ್ಲಿ ಶಕುಂತಳ ಅವರು ಪ್ರಸಿದ್ಧರು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿಯೂ ಹೆಸರು ಮಾಡಿದ ಶಕುಂತಳ ಅವರಿಗೆ 60 ವರ್ಷಗಳು ತುಂಬಿದ್ದಾಗ ಅವರ ಅಭಿಮಾನಿಗಳು ಗಮಕ ಶಾರದೆ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿದ್ದರು. ರಾಜ್ಯ ಸಾಹಿತ್ಯ ಅಕಾಡೆಮಿಯ ಸನ್ಮಾನ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳನ್ನು ಶಕುಂತಳ ಅವರು ಪಡೆದಿದ್ದಾರೆ. ಮೊದಲ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ಎಸ್. ವಿ. ಪರಮೇಶ್ವರ ಭಟ್ಟರು ಪಡೆದಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...