ಸಾಹಿತ್ಯ ಸಮ್ಮೇಳನ ನಿರ್ಣಯಗಳು ಅಲಂಕಾರಕ್ಕಲ್ಲ, ಅನುಷ್ಠಾನಕ್ಕೆ- ಪುನರೂರು
ಮಂಗಳೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಕೇವಲ ಔಪಚಾರಿಕ. ವರ್ಷದಿಂದ ವರ್ಷಕ್ಕೆ ಹಳೆಯ ನಿರ್ಣಯಗಳನ್ನೇ ಹೊಸತಾಗಿ ಅಂಗೀಕರಿಸಲಾಗುತ್ತದೆ ಎನ್ನುವ ಆಪಾದನೆಯನ್ನು ದೂರ ಮಾಡಲು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಮುಂದಾಗಿದ್ದಾರೆ.
ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ಮೇಲೆ ಕನ್ನಡಾಭಿಮಾನಿಗಳೆಲ್ಲ ಒಟ್ಟಾಗಿ ಒತ್ತಡವನ್ನು ಹೇರುವುದು ಪುನರೂರು ಉದ್ದೇಶ. ಆ ಕಾರಣಕ್ಕಾಗಿಯೇ- ಫೆಬ್ರವರಿ ತಿಂಗಳಲ್ಲಿ ತುಮಕೂರಿನಲ್ಲಿ ನಡೆದ 69 ನೇ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ಮಾರ್ಚ್ 8 ರಂದು ಪುನರೂರು ಕನ್ನಡ ಪ್ರೇಮಿಗಳ ಸಮಾಲೋಚನಾ ಸಭೆ ಕರೆದಿದ್ದಾರೆ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ನ ಪಂಪ ಸಭಾ ಭವನದಲ್ಲಿ ಸಂಜೆ 4 ಗಂಟೆಗೆ ಸಮಾಲೋಚನಾ ಸಭೆ ನಡೆಯಲಿದೆ. ಈ ಸಭೆಗೆ ಹಿರಿಯ ಸಾಹಿತಿಗಳು, ಹಿಂದಿನ ಅಧ್ಯಕ್ಷರು- ಪದಾಧಿಕಾರಿಗಳು, ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಮಾರ್ಗದರ್ಶನ ನೀಡಬೇಕೆಂದು ಪುನರೂರು ಮನವಿ ಮಾಡಿಕೊಂಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...