ಚಿಕ್ಕಮಗಳೂರು : ಕಾಳ್ಗಿಚ್ಚು ಜೊತೆ ಅರಣ್ಯ ಇಲಾಖೆ ಕಣ್ಣಾಮುಚ್ಚಾಲೆ
ಚಿಕ್ಕಮಗಳೂರು :ಜಿಲ್ಲೆಯ ಅರಣ್ಯದಲ್ಲಿ ಕಳೆದ ಗುರುವಾರ ಹಬ್ಬಿಕೊಂಡ ಕಾಳ್ಗಿಚ್ಚು ಮತ್ತಷ್ಟು ವಿಸ್ತರಿಸುತ್ತಿದ್ದು, ಬೆಂಕಿ ನಂದಿಸುವ ಅರಣ್ಯ ಇಲಾಖೆ ಪ್ರಯತ್ನಗಳೆಲ್ಲ ವ್ಯರ್ಥವಾಗುತ್ತಿವೆ.
ಇಲ್ಲಿನ ಅಗ್ರಶಿಖರ ಮುಳ್ಳಯ್ಯನ ಗಿರಿ ಸುತ್ತ ಮುತ್ತಲ ಪ್ರದೇಶದಲ್ಲಿ ಪ್ರತಿ ದಿನ ಬೆಂಕಿ ವಿಸ್ತರಿಸುತ್ತಿದ್ದು, ಸಂಜೆ ಹೊತ್ತಾಗುತ್ತಿದ್ದಂತೆಯೇ ಗಿರಿ ಪ್ರದೇಶದಲ್ಲಿ ಬೆಂಕಿಯ ಉಂಡೆಗಳು ಸರಪಳಿಗಳಂತೆ ಗೋಚರಿಸುತ್ತಿವೆ. ಪ್ರತಿ ದಿನ ಕನಿಷ್ಠ ಏಳೆಂಟು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು ಅವುಗಳನ್ನು ನಿಯಂತ್ರಿಸುವುದು ಸಿಬ್ಬಂದಿಗಳಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಪಂಡರವಳ್ಳಿ ಮತ್ತು ಕೆಮ್ಮಣ್ಣು ಗುಂಡಿ ಗಿರಿ ಪ್ರದೇಶದಲ್ಲಿ ಶನಿವಾರ ರಾತ್ರಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿ ಅಧಿಕಾರಿಗಳು ಬೆಂಕಿ ನಂದಿಸುವ ಪ್ರಯತ್ನವನ್ನು ಮಾಡುತ್ತಿದ್ದಂತೆಯೇ ನಲ್ಲೂರು ಬೆಟ್ಟ, ಕೈಮರ, ಸುತ್ತಲಲ್ಲಿ ಬೆಂಕಿ ಹರಡಲಾರಂಭಿಸಿದೆ.
ಕಾಳ್ಗಿಚ್ಚು ನಿಯಂತ್ರಿಸಲು ಪ್ರಾದೇಶಿಕ ಅರಣ್ಯ ಇಲಾಖೆಯ ಪೂರ್ವ ಯೋಜನೆ ಹಾಗೂ ಪೂರ್ವ ಸಿದ್ಧತೆಯ ಕೊರತೆಯೇ ಕಾರಣ ಎಂದು ಇಲ್ಲಿನ ಪರಿಸರ ಪ್ರೇಮಿಗಳ ಸಂಘ ಆಪಾದಿಸಿದೆ. ಜನವರಿ ಅಂತ್ಯದಲ್ಲಿ ಬೇಸಿಗೆಯಲ್ಲಿ ಉಂಟಾಗುವ ಬೆಂಕಿ ಅನಾಹುತದ ಬಗ್ಗೆ ಪೂರ್ವ ಯೋಜನೆ ಸಿದ್ಧ ಪಡಿಸಿಕೊಂಡು ಮಾರ್ಚ್ ಅಂತ್ಯದಲ್ಲಿ ಮುಂಗಾರು ಪೂರ್ವ ಮಳೆ ಬರುವವರೆಗೂ ಕಾಳ್ಗಿಚ್ಚು ನಿಯಂತ್ರಣಕ್ಕೆ ಇಲಾಖೆಯ ಸಿದ್ಧವಾಗಿರಬೇಕಿತ್ತು ಎಂದು ಪರಿಸರವಾದಿಗಳು ಟೀಕಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...