ಭಾನುವಾರ ಬೆಂಗ್ಳೂರಲ್ಲಿ ಪ್ರತಿಭಟನೆ ಸಭೆ : ಪೊಲೀಸರ ಸರ್ಪಕಾವಲು
ಬೆಂಗಳೂರು : ಒಲೆ ಹತ್ತಿ ಉರಿದೊಡೆ ನಿಲಬಹುದು, ಧರೆ ಹತ್ತಿ ಉರಿದೊಡೆ ನಿಲಬಹುದೇ? ಈ ಹೊತ್ತು ಗುಜರಾತ್ನಲ್ಲಿ ಆಗಿರುವುದೂ ಅದೇ. ರಾಮಸೇವಕರ ನರಮೇಧದಿಂದ ಭುಗಿಲೆದ್ದಿರುವ ಜ್ವಾಲೆ ರಾಜ್ಯದಾದ್ಯಂತ ತನ್ನ ಕೆನ್ನಾಲಿಗೆ ಚಾಚಿದೆ ನೂರಾರು ಮಗ್ಧ ಜೀವಗಳನ್ನು ಬಲಿ ತೆಗೆದುಕೊಂಡಿದೆ. ರಾಮಸೇವಕರ ಮೇಲಿನ ದಾಳಿ ಆನಂತರದ ಪ್ರತಿಕಾರದ ಜ್ವಾಲೆಗೆ ಬಲಿಯಾದವರ ಸಂಖ್ಯೆ 350 ಗಡಿ ದಾಟಿದೆ. 32 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಿರ್ದಿಷ್ಟ ಕಾಲದ ಕರ್ಫ್ಯೂ ಮುಂದುವರಿಸಲಾಗಿದೆ.
ಕೆಲವೆಡೆ ಪರಿಸ್ಥಿತಿ ಕೊಂಚ ತಹಬಂದಿಗೆ ಬಂದಿದ್ದು, ನವರಂಗಪುರ ಮತ್ತು ಶಾಹೀಬಾಗ್ ಪ್ರದೇಶಗಳಲ್ಲಿ ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿದೆ. ಅಹ್ಮದಾಬಾದ್ನಲ್ಲಿ ಸೇನಾ ತುಕಡಿಗಳು ಕಟ್ಟೆಚ್ಚರ ವಹಿಸಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗ್ಳೂರಲ್ಲಿ ಬಿಗಿ ಭದ್ರತೆ : ಈ ಮಧ್ಯೆ ವಿಶ್ವಹಿಂದೂ ಪರಿಷತ್ ಮಲ್ಲೇಶ್ವರ ಮೈದಾನದಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ವಿಷಯವನ್ನು ನಗರ ಜಂಟಿ ಪೊಲೀಸ್ ಕಮೀಷನರ್ ಜ್ಯೋತಿಪ್ರಕಾಶ್ ಮಿರ್ಜಿ ಸುದ್ದಿಗಾರರರಿಗೆ ತಿಳಿಸಿದ್ದಾರೆ.
ಭಾನುವಾರ ಕರೆದಿರುವ ಪ್ರತಿಭಟನಾ ಸಭೆಯಲ್ಲಿ ಯಾವುದೇ ಪ್ರಚೋದನಕಾರಿ ಭಾಷಣ ಮಾಡಬಾರದು ಎಂದು ವಿಶ್ವಹಿಂದೂ ಪರಿಷತ್ ಮುಖಂಡರಿಗೆ ಮನವಿ ಮಾಡಲಾಗಿದೆ. ಸಭಿಕರನ್ನು ರೊಚ್ಚಿಗೇಳಿಸುವಂಥಹ ಭಾಷಣದ ತುಣುಕುಗಳು ಸಭೆಯಲ್ಲಿ ಕೇಳಿಬಂದರೆ ಕೂಡಲೇ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...