ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಿತಿನಿ ಶಾಖೋತ್ಪನ್ನ ಕೇಂದ್ರದ ಕಾಮಗಾರಿಗೆ ಸೋನಿಯಾರಿಂದ ಶಿಲಾನ್ಯಾಸ

By Staff
|
Google Oneindia Kannada News

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಕುಡಿತಿನಿಯಲ್ಲಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ಕಾಮಗಾರಿಗಳ ಉದ್ಘಾಟನೆಯನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಿಲಾನ್ಯಾಸ ನೆರವೇರಿಸಿದರು. ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಂಬಿಕಾ ಸೋನಿ, ಅಲ್ಲಂ ವೀರಭದ್ರಪ್ಪ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಕೃಷ್ಣ ಅವರೊಂದಿಗೆ ಖಾಸಗಿ ವಿಮಾನದಲ್ಲಿ ಬಂದಿಳಿದ ಸೋನಿಯಾ ಅವರನ್ನು ಕೆ.ಸಿ. ಕೊಂಡಯ್ಯ ಹಾಗೂ ಸ್ಥಳೀಯ ಕಾಂಗ್ರೆಸ್‌ ನಾಯಕರು ಜಿಂದಾಲ್‌ ವಾಯುನೆಲೆಯಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.

ಅನುಮತಿಯೇ ಇಲ್ಲ : ಈ ಮಧ್ಯೆ ಕಾಮಗಾರಿಯ ಶಿಲಾನ್ಯಾಸದ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಭಾರತೀಯ ಜನತಾಪಕ್ಷದ ನಾಯಕರು ಇದೊಂದು ನಾಟಕೀಯ ಶಿಲಾನ್ಯಾಸ ಕಾರ್ಯಕ್ರಮ ಎಂದು ಬಣ್ಣಿಸಿದ್ದಾರೆ. ಈ ಶಾಖೋತ್ಪನ್ನ ವಿದ್ಯುತ್‌ ಯೋಜನೆಗೆ ಕೇಂದ್ರ ವಿದ್ಯುತ್‌ ಪ್ರಾಧಿಕಾರ, ಪರಿಸರ ಇಲಾಖೆಯ ಅನುಮತಿಯೇ ಇನ್ನೂ ಲಭ್ಯವಾಗಿಲ್ಲ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಅನುಮತಿಯೇ ದೊರಕದ ಯೋಜನೆಗೆ ಸೋನಿಯಾರಿಂದ ಶಿಲಾನ್ಯಾಸ ಮಾಡಿಸುತ್ತಿದ್ದಾರೆ. ಇದಕ್ಕಾಗಿ ಲಕ್ಷಾಂತರ ರುಪಾಯಿ ಪೊಲು ಮಾಡಲಾಗುತ್ತಿದೆ ಎಂದು ಭಾಜಪ ನಾಯಕರಾದ ಡಾ. ಎಂ.ಆರ್‌. ತಂಗಾ, ಎ. ರಾಮದಾಸ್‌, ಲಕ್ಷ್ಮೀನಾರಾಯಣ್‌ ವ್ಯಂಗ್ಯವಾಗಿದ್ದಾರೆ.

ಹವಾನಿಯಂತ್ರಿತ ಮಯ : ಕುಡಿತಿನಿಯಲ್ಲಿ 2100 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ಕಾಮಗಾರಿಯ ಉದ್ಘಾಟನೆಗೆ ಸೋನಿಯಾ ಬಂದರು. ಕೆಲವೇ ಗಂಟೆಗಳ ಈ ಸಮಾರಂಭಕ್ಕೆ ಇಲ್ಲಿ ಎಲ್ಲವೂ ಹವಾನಿಯಂತ್ರಿತ ಮಯವಾಗಿತ್ತು.

ವೇದಿಕೆಯ ಹಿಂದೆ ಸೋನಿಯಾ ಹಾಗೂ ಪರಿವಾರದವರಿಗಾಗಿ ಮೂರು ಹವಾನಿಯಂತ್ರಿತ ಕೊಠಡಿ ಕಟ್ಟಲಾಗಿದೆ. ಈ ಮೂರು ಏರ್‌ಕಂಡೀಷನ್‌ ರೂಂಗಳ ಪೈಕಿ ಒಂದು ವಿಶ್ರಾಂತಿ ಕೊಠಡಿಯಾದರೆ, ಮತ್ತೊಂದು ಭೋಜನ ಶಾಲೆ ಮಗದೊಂದು ಸುಸಜ್ಜಿತ ಹವಾನಿಯಂತ್ರಿತ ಶೌಚಗೃಹ.

ಸೋನಿಯಾ ಅವರ ಬಹಿರಂಗ ಭಾಷಣಕ್ಕಾಗಿಯೂ ಬೃಹತ್‌ ವೇದಿಕೆ ನಿರ್ಮಾಣವಾಗಿತ್ತು. ಜಿಂದಾಲ್‌ ಸಂಸ್ಥೆ ಸೋನಿಯಾ ಅವರಿಗೆ ಉತ್ತರ ಭಾರತದ ಸ್ವಾದಿಷ್ಟ ಆಹಾರ ಪೂರೈಕೆ ಮಾಡಿತ್ತು. ಬಳ್ಳಾರಿಯ ಬೆಂಕಿ ಬಿಸಿಲಿನಲ್ಲಿ ಸೋನಿಯಾ ಗಾಂಧಿ ಅವರ ಭಾಷಣ ಕೇಳಲು ಬರುವವರಿಗಾಗಿ 2 ಲಕ್ಷ ಪ್ಯಾಕೆಟ್‌ ಕುಡಿಯುವ ನೀರಿನ ವ್ಯವಸ್ಥೆಯನ್ನು ಜಿಲ್ಲಾ ಕಾಂಗ್ರೆಸ್‌ ಮಾಡಿತ್ತು. ಅಂದಹಾಗೆ ಈ ಕಾರ್ಯಕ್ರಮಕ್ಕೆ ತಗುಲಿದ ವೆಚ್ಚ ಸರಕಾರದ ಹೇಳಿಕೆ ರೀತ್ಯ ಕೇವಲ 60 ಲಕ್ಷ ರುಪಾಯಿ ಮಾತ್ರ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X