ಭಾರತ್ ಬಂದ್ : ಶಾಂತಿ ಕಾಪಾಡಲು ಕಟ್ಟೆಚ್ಚರದಲ್ಲಿ ಪೊಲೀಸ್- ರಕ್ಷಣಾ ಪಡೆ
ನವದೆಹಲಿ : ವಿಶ್ವ ಹಿಂದೂ ಪರಿಷತ್ ಶುಕ್ರವಾರ ಭಾರತ್ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ಈ ನಡುವೆ ದೆಹಲಿಯಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ವಿವಿಧ ಬೌದ್ಧಿಕ ಮುಖಂಡರೊಡನೆ ದೆಹಲಿ ಪೊಲೀಸರು ಸಮಾಲೋಚನೆ ನಡೆಸಿದ್ದಾರೆ. ಅಲ್ಪ ಸಂಖ್ಯಾತರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಈ ನಡುವೆ, ಜಾಮಾ ಮಸೀದಿಯ ಷಾಹಿ ಇಮಾಮ್ ಅವರು ಪ್ರಧಾನಿ ವಾಜಪೇಯಿ ಅವರನ್ನು ಗುರುವಾರ ರಾತ್ರಿ ಭೇಟಿ ಮಾಡಿದ್ದರು. ಶುಕ್ರವಾರ ಜಾಮಾ ಮಸೀದಿಯಲ್ಲಿ ನಡೆಯುವ ಧಾರ್ಮಿಕ ವಿಧಿಗಳ ನಂತರ ಗೋದ್ರಾ ದುರಂತದ ಬಗ್ಗೆ ಅವರು ಹೇಳಿಕೆಯನ್ನು ನೀಡುವ ನಿರೀಕ್ಷೆಯಿದೆ.
ಕರ್ನಾಟಕದಲ್ಲಿ ಶಾಂತಿಯುತ ಬಂದ್
ವಿಹೆಚ್ಪಿ ಕರೆ ನೀಡಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯದಲ್ಲಿ ಶಾಂತಿಯುತ ಬಂದ್ ಆಚರಿಸಲಾಗುವುದು. ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ವಿಹೆಚ್ಪಿ ರಾಜ್ಯ ಘಟಕ ತಿಳಿಸಿದೆ.
ಕರಸೇವಕರ ತಡೆಗೆ ಕೇಂದ್ರದ ಸೂಚನೆ : ಆಯೋಧ್ಯೆಗೆ ತೆರಳುವ ಕರಸೇವಕರನ್ನು ಹೊರಡುವ ಸ್ಥಳದಲ್ಲೇ ತಡೆಯುವಂತೆ ಅಥವಾ ಬಂಧಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದು, ಈ ಕುರಿತು ಕೇಂದ್ರ ಗೃಹ ಸಚಿವಾಲಯ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ರೈಲ್ವೆ ರಕ್ಷಣಾ ದಳ ಸಿಬ್ಬಂದಿ ರಾಜ್ಯದ ಎಲ್ಲ ನಿಲ್ದಾಣಗಳಲ್ಲಿಯೂ ಕಟ್ಟೆಚ್ಚರ ವಹಿಸಿದ್ದು, ಅನುಮಾನಾಸ್ಪದ ಪ್ರಯಾಣಿಕರನ್ನು ಗಮನಿಸುವುದು. ಕರ ಸೇವಕರೆಂದು ತಿಳಿದು ಬಂದಲ್ಲಿ ಬಂಧಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಎಚ್.ಟಿ.ಸಾಂಗ್ಲಿಯಾನ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...