ಬಜೆಟ್ 2002-03: ಸಣ್ಣ ಉದ್ದಿಮೆದಾರರಿಗೆ ಕಚಗುಳಿ, ಶ್ರೀಮಂತರಿಗೆ ಗಲಿಬಿಲಿ
ನವದೆಹಲಿ : ವಿತ್ತ ಸಚಿವ ಯಶವಂತ ಸಿನ್ಹಾ ಗುರುವಾರ (ಫೆ.28) ಮಂಡಿಸಿದ 2002- 03 ನೇ ಇಸವಿಯ ಕೇಂದ್ರ ಬಜೆಟ್ ಆರ್ಥಿಕ ಬೆಳವಣಿಗೆಗೆ ಉತ್ತೇಜಕವಾಗಿಲ್ಲವೆಂದು ಭಾರತೀಯ ಕೈಗಾರಿಕೆಗಳ ಕೆಲವು ಪ್ರಮುಖ ಹುದ್ದರಿಗಳು ಹಾಗೂ ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲವು ತಜ್ಞರ ಪ್ರಕಾರ, ಪ್ರಸ್ತುತ ಸನ್ನಿವೇಶದಲ್ಲಿ ಒಪ್ಪಬಹುದಾದ ಬಜೆಟ್. ಆದ್ದರಿಂದ ಸಿನ್ಹಾ ಬಜೆಟ್ಟನ್ನು ಫಿಫ್ಟಿ ಫಿಫ್ಟಿ ಎನ್ನಲಡ್ಡಿಯಿಲ್ಲ.
ಉನ್ನತ ಮಟ್ಟದ ಆರ್ಥಿಕ ಬೆಳವಣಿಗೆಗೆ ಈ ಬಜೆಟ್ ಅನುಕೂಲಕರವಾಗಿಲ್ಲ . ಆದರೆ, ಪ್ರಸ್ತುತದ ಸಂಕಷ್ಟಕರ ಪರಿಸ್ಥಿತಿ ನಿಭಾವಣೆಗೆ ಸಿನ್ಹಾ ಅವರ ಬಜೆಟ್ ತಕ್ಕುದಾಗಿದೆ. ಇದೊಂದು ಸಾಧನೀಯ ಬಜೆಟ್ ಎಂದು ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಅಧ್ಯಕ್ಷ ಸಂಜೀವ್ ಗೊಯೆಂಕ ಅಭಿಪ್ರಾಯಪಟ್ಟಿದ್ದಾರೆ.
ಮೂಲಭೂತ ಸೌಕರ್ಯಗಳ ವಲಯಗಳಿಗೆ ಬಜೆಟ್ ಒತ್ತು ನೀಡಿದ್ದು , ಉತ್ಪಾದನಾ ವಲಯಕ್ಕೆ ಪ್ರೋತ್ಸಾಹದಾಯಕವಾಗಿದೆ. ಆದರೆ, ವಿದ್ಯುತ್ನಂತಹ ವಲಯಗಳಿಗೆ ಸಾಕಷ್ಟು ಒತ್ತು ನೀಡಿಲ್ಲ ಎಂದು ಗೊಯೆಂಕ ಅರೆ ಮೆಚ್ಚುಗೆ, ಅರೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯೋಜನಾ ಆಯೋಗದ ಸದಸ್ಯ ಎನ್.ಕೆ.ಸಿಂಗ್ ಅವರು, ಸಾರ್ವಜನಿಕ ಹೂಡಿಕೆ ಮೂಲಕ ಬೆಳವಣಿಗೆಯನ್ನು ಬಜೆಟ್ನ ಕೇಂದ್ರ ಅಂಶವೆಂದು ಗುರ್ತಿಸಿದ್ದಾರೆ. ವಿತ್ತೀಯ ಖರ್ಚುಗಳನ್ನು ಕನಿಷ್ಠಗೊಳಿಸುವ ಕುರಿತು ಬಜೆಟ್ ಸೂಕ್ತ ನಿಗಾ ವಹಿಸಿಲ್ಲ ಎಂದು ಅವರು ಟೀಕಿಸಿದ್ದಾರೆ.
ಮಾರುಕಟ್ಟೆಯ ಭಾವನೆಗಳಿಗೆ ಬಜೆಟ್ ಸ್ಪಂದಿಸಿಲ್ಲ ಎನ್ನುವ ಟೀಕೆ ಬಿಜಿನೆಸ್ ಸ್ಟಾಂಡರ್ಡ್ ಪತ್ರಿಕೆಯ ಸಂಪಾದಕ ಟಿ.ಎನ್.ನಿನನ್ ಅವರದು. ತೆರಿಗೆ ಹೇರಿಕೆ ಅತಿಯಾಯಿತು. ಕೊರೆಯಿರುವ ಹಣ ತುಂಬಲು ನಾವು ಹಣ ಪ್ರಿಂಟ್ ಮಾಡಬೇಕು. ಇಲ್ಲವೇ, ಮಾರುಕಟ್ಟೆಯಿಂದ ಸಾಲ ಪಡೆಯಬೇಕು. ಬಜೆಟ್ಟಿನಲ್ಲಿ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿಲ್ಲ ಎನ್ನುವುದು ಮೆನನ್ ಅವರ ಆಕ್ಷೇಪ.
ಇನ್ನು ಕೆಲವು ಉದ್ದಿಮೆದಾರರ ಹಾಗೂ ಆರ್ಥಿಕ ತಜ್ಞರ ಮಾತುಗಳಿಗೆ ಕಿವಿಕೊಡಿ...
ನಿಮೇಶ್ ಕಂಪಾಣಿ : ಸಣ್ಣ ಉದ್ದಿಮೆದಾರರು ನಗುತ್ತಾರೆ. ಶ್ರೀಮಂತರು ಹೆಚ್ಚು ತೆರಿಗೆ ಕಟ್ಟುತ್ತಾರೆ. ಪ್ರಸ್ತುತ ಬಜೆಟ್ಟಿನಲ್ಲಿನ ಡಿವೈಡೆಂಡ್ ತೆರಿಗೆ ನೀತಿಯಿಂದ ನಾವು ಹಳೆ ಪದ್ಧತಿಗೇ ಮತ್ತೆ ಮೊರೆ ಹೋಗುತ್ತಿದ್ದೇವೆ. ಇದು ಅತೃಪ್ತಿ ತರುವಂಥಾ ಬಜೆಟ್ಟು.
ಪ್ರಮೋದ್ ಭಾಸಿನ್ : ಶಿಕ್ಷಣಕ್ಕೆ ಒತ್ತು ಕೊಟ್ಟಿರುವ ಅಂಶ ಚೆನ್ನಾಗಿದೆ. ಸಿನ್ಹಾ ಬಜೆಟ್ಟಿನ ಫೋಕಸ್ ಸರಿಯಾಗೇ ಇದೆ. ಆದರೆ ಅಭಿವೃದ್ಧಿಗೆ ಇದು ಪೂರಕವಾಗಿಲ್ಲ.
ತರುಣ್ ದಾಸ್ : ಕೃಷಿ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೇಳಿ ಮಾಡಿಸಿದಂಥ ಬಜೆಟ್ಟನ್ನು ಸಿನ್ಹಾ ಅವರು ಮಂಡಿಸಿದ್ದಾರೆ. ಸರ್ಕಾರಿ ಹುದ್ದರಿಗಳಲ್ಲಿ ಕಡಿತ ಮಾಡಿರುವುದೂ ಒಳ್ಳೆಯ ಹೆಜ್ಜೆ.
ಫಿರೋಜ್ ವಾಂಡ್ರೆವಾಲ : ಆದಾಯ ತೆರಿಗೆ ದರ ಬದಲಾವಣೆಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಪೆಟ್ಟು ಬೀಳಲಿದೆ ಎನಿಸುತ್ತದೆ.
(ಇನ್ಫೋ ವಾರ್ತೆ/ಪಿಟಿಐ)